ಸಾಧ್ವಿ ಪ್ರಗ್ಯಾಗೆ ಟಿಕೆಟ್ ಕೊಟ್ಟಿದ್ದು ಏಕೆ?: ಪ್ರಧಾನಿ ಮೋದಿ ನೀಡಿದ ವಿವರಣೆ
ನವದೆಹಲಿ, ಏಪ್ರಿಲ್ 20: ಮಾಲೇಗಾಂವ್ ಬಾಂಬ್ ಸ್ಫೋಟದ ಆರೋಪಿ, ವಿವಾದಿತ ಮಹಿಳೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರನ್ನು ಬಿಜೆಪಿ ಮಧ್ಯಪ್ರದೇಶದ ಭೋಪಾಲ್ನಲ್ಲಿ ಕಾಂಗ್ರೆಸ್ನ ದಿಗ್ವಿಜಯ್ ಸಿಂಗ್ ಅವರ ಎದುರು ಕಣಕ್ಕಿಳಿಸಿದೆ. ಇದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
'ಹೇಮಂತ್ ಕರ್ಕರೆ ಸತ್ತಿದ್ದು ನನ್ನ ಶಾಪದಿಂದ': ವಿವಾದದ ಕಿಡಿ ಹಚ್ಚಿದ ಸಾಧ್ವಿ ಪ್ರಗ್ಯಾ
ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಸಾಧ್ವಿ ಪ್ರಗ್ಯಾರಿಗೆ ಟಿಕೆಟ್ ನೀಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.
'ಸುಮಾರು 5 ಸಾವಿರ ವರ್ಷಗಳಿಂದ 'ವಸುದೈವ ಕುಟುಂಬಕಂ' (ಜಗತ್ತು ಒಂದು ಕುಟುಂಬ) ಎಂಬ ಸಂದೇಶವನ್ನು ಸಾರಿದ ಒಂದು ನಾಗರಿಕತೆ, ಒಂದು ಸಂಪ್ರದಾಯವನ್ನು ಕೆಲವರು ಭಯೋತ್ಪಾದಕರು ಎಂದು ಬ್ರ್ಯಾಂಡ್ ಮಾಡುತ್ತಿದ್ದಾರೆ. ಇದನ್ನು ಮಾಡಿದವರಿಗೆ ಭೋಪಾಲ್ನಲ್ಲಿ ಸಾಧ್ವಿ ಅವರ ಸ್ಪರ್ಧೆ ಉತ್ತರ ನೀಡುವ ಸಂಕೇತವಾಗಿದೆ. ಮತ್ತು ಈ ಸಂಕೇತ ಕಾಂಗ್ರೆಸ್ಗೆ ದುಬಾರಿಯಾಗಲಿದೆ' ಎಂದು ಟೈಮ್ಸ್ ನೌ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮೋದಿ ಹೇಳಿದ್ದಾರೆ.
ಸಾಧ್ವಿ ಪ್ರಗ್ಯಾ ಹೇಳಿಕೆ ವೈಯಕ್ತಿಕ: ಅಂತರ ಕಾಯ್ದುಕೊಂಡ ಬಿಜೆಪಿ
'ಒಬ್ಬ ಮಹಿಳೆ, ಅದರಲ್ಲಿಯೂ ಸನ್ಯಾಸಿನಿಯೊಬ್ಬರನ್ನು ಅಂತಹ ಹೀನಾಯ ಹಿಂಸೆಗೆ ಒಳಪಡಿಸಲಾಗಿತ್ತು' ಎಂದು ಮೋದಿ ಹೇಳಿದ್ದಾರೆ.
ಯಾವುದೇ ಪುರಾವೆಯಿಲ್ಲದೆ ಸಂಜೋತಾ ಎಕ್ಸ್ಪ್ರೆಸ್ ಪ್ರಕರಣದಲ್ಲಿ ವ್ಯಕ್ತಿಗಳನ್ನು ಶಿಕ್ಷೆಗೆ ಒಳಪಡಿಸಲಾಗಿತ್ತು ಎಂದಿದ್ದಾರೆ.
1984ರ ಸಿಖ್ ವಿರೋಧಿ ದಂಗೆಯನ್ನು ಉಲ್ಲೇಖಿಸಿದ ಅವರು ಸಾವಿರಾರು ಸಿಖ್ಖರನ್ನು ಕೊಂದ ಪ್ರಕರಣದಲ್ಲಿ ಆರೋಪಿಗಳಾಗಿದ್ದವರನ್ನು ಕಾಂಗ್ರೆಸ್ ಸನ್ಮಾನಿಸಿದೆ. ಅದಕ್ಕೆ ಉಪದೇಶ ನೀಡುವ ಯಾವುದೇ ನೈತಿಕತೆ ಇಲ್ಲ ಎಂದು ಟೀಕಿಸಿದ್ದಾರೆ.
ವಿವಾದಿತ ಹೇಳಿಕೆ ಹಿಂಪಡೆದ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್
1984ರಲ್ಲಿ ಸಿಖ್ ವಿರೋಧಿ ದಂಗೆಯಲ್ಲಿ ಭಯೋತ್ಪಾದನೆ ನಡೆಸಿದ ಆರೋಪಿಗಳಾಗಿದ್ದ ಕಾಂಗ್ರೆಸ್ ಮುಖಂಡರನ್ನು ಶಾಸಕರನ್ನಾಗಿ ಮಾಡಲಾಗಿದೆ. ಕೇಂದ್ರದಲ್ಲಿ ಸಚಿವರನ್ನಾಗಿ ನೇಮಿಸಲಾಗಿದೆ. ಅವರಲ್ಲಿ ಒಬ್ಬರನ್ನು ಮಧ್ಯಪ್ರದೇಶದ ಮುಖ್ಯಮಂತ್ರಿಯನ್ನಾಗಿಯೂ ನೇಮಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಅಮೇಥಿ ಮತ್ತು ರಾಯ್ ಬರೇಲಿ ಕ್ಷೇತ್ರಗಳ ಅಭ್ಯರ್ಥಿಗಳು ಜಾಮೀನಿನ ಮೇಲಿದ್ದಾರೆ. ಅದರ ಬಗ್ಗೆ ಯಾವುದೇ ಚರ್ಚೆ ನಡೆಯುತ್ತಿಲ್ಲ. ಆದರೆ, ಭೋಪಾಲ್ ಅಭ್ಯರ್ಥಿ ಜಾಮೀನಿನ ಮೇಲೆ ಹೊರಗಿದ್ದರೆ ಬಿರುಗಾಳಿಯನ್ನೇ ಎಬ್ಬಿಸುತ್ತಿದ್ದಾರೆ. ಇದು ಹೇಗೆ ಸಾಧ್ಯವಾಯಿತು? ಎಂದು ಪ್ರಶ್ನಿಸಿದ್ದಾರೆ.