ಲೋಕಸಭೆ ಚುನಾವಣೆ: ಬಿಹಾರದಲ್ಲಿ ಮತ್ತೆ ಒಂದಾದ ನಿತೀಶ್-ಅಮಿತ್ ಶಾ ಜೋಡಿ
Recommended Video

ಪಟ್ನಾ, ಅಕ್ಟೋಬರ್ 23: ಮುಂಬರುವ ಲೋಕಸಭೆ ಚುನಾವಣೆಗೆ ಬಿಹಾರದಲ್ಲಿ ಸೀಟುಗಳ ಹಂಚಿಕೆಗಾಗಿ ಬಿಜೆಪಿ ಮತ್ತು ಜೆಡಿಯು ಈಗಾಗಲೇ ಒಪ್ಪಂದ ಮಾಡಿಕೊಂಡಿವೆ.
ಸೆಪ್ಟೆಂಬರ್ನಲ್ಲಿಯೇ ಈ ಒಪ್ಪಂದ ನಡೆದಿದ್ದು, ಶೀಘ್ರದಲ್ಲಿಯೇ ಅದನ್ನು ಘೋಷಿಸುವ ಸಾಧ್ಯತೆ ಇದೆ. ಇದಕ್ಕಾಗಿ ಎನ್ಡಿಎ ಮಿತ್ರಕೂಟದ ಈ ಎರಡೂ ಪಕ್ಷಗಳು ರಾಮ್ ವಿಲಾಸ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ ಮತ್ತು ಉಪೇಂದ್ರ ಕುಶ್ವಾಹ್ ಅವರ ರಾಷ್ಟ್ರೀಯ ಲೋಕ ಸಮತಾ ಪಕ್ಷಗಳ ಸಮ್ಮತಿಗಾಗಿ ಕಾದಿವೆ.
40 ಲೋಕಸಭಾ ಕ್ಷೇತ್ರಗಳಿರುವ ಬಿಹಾರದಲ್ಲಿ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಜೆಡಿಯು ಮತ್ತು ಬಿಜೆಪಿ ನಡುವೆ ಹಲವು ವಾರಗಳಿಂದ ಶೀತಲ ಸಮರ ನಡೆದಿತ್ತು. ಈಗ ಎರಡೂ ಪಕ್ಷಗಳು ಸಹಮತಕ್ಕೆ ಬಂದಿವೆ.
ಈ ಎರಡೂ ಪಕ್ಷಗಳು ಭಾಗಶಃ ಸರಿಸಮನಾಗಿ ಕ್ಷೇತ್ರಗಳನ್ನು ಹಂಚಿಕೊಳ್ಳಲಿವೆ. ಉಳಿದ ಕ್ಷೇತ್ರಗಳನ್ನು ಇನ್ನೆರಡು ಮಿತ್ರಪಕ್ಷಗಳಿಗೆ ಬಿಟ್ಟುಕೊಡಲು ನಿರ್ಧರಿಸಿವೆ.

16-17 ಸೀಟುಗಳು
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು 16 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದರೆ, ಬಿಜೆಪಿ 17 ಕ್ಷೇತ್ರಗಳನ್ನು ಪಡೆದುಕೊಂಡಿದೆ. ಎನ್ಡಿಎ ಮೈತ್ರಿಕೂಟದ ಇನ್ನೆರಡು ಪಕ್ಷಗಳಾದ ಎಲ್ಜೆಪಿ ಐದು ಮತ್ತು ಆರ್ಎಲ್ಎಸ್ಪಿ ಎರಡು ಸ್ಥಾನಗಳನ್ನು ಪಡೆದುಕೊಳ್ಳಲಿದೆ.

ಸೆಪ್ಟೆಂಬರ್ನಲ್ಲಿ ಒಪ್ಪಂದ
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೆಪ್ಟೆಂಬರ್ ಎರಡನೆಯ ವಾರ ದೆಹಲಿಯಲ್ಲಿ ನಡೆಸಿದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಈ ಹಂಚಿಕೆ ಸೂತ್ರಕ್ಕೆ ಎಲ್ಜೆಪಿ ಮತ್ತು ಆರ್ಎಲ್ಎಸ್ಪಿಯ ಅನುಮತಿಯ ಅಗತ್ಯವಿದ್ದು, ಈ ವಾರದ ಅಂತ್ಯದಲ್ಲಿ ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಆರ್ಎಲ್ಎಸ್ಪಿ ಈ ಒಪ್ಪಂದವನ್ನು ತಿರಸ್ಕರಿಸಿದರೆ ಅದಕ್ಕೆ ಮೀಸಲಿಡುವ ಎರಡು ಕ್ಷೇತ್ರಗಳನ್ನು ಬಿಜೆಪಿ ಮತ್ತು ಜೆಡಿಯು ಹಂಚಿಕೊಳ್ಳುವುದಾಗಿಯೂ ಒಪ್ಪಂದ ಮಾಡಿಕೊಳ್ಳಲಾಗಿದೆ.

ಸೀಟುಗಳ ಹೊಂದಾಣಿಕೆ
ನಿತೀಶ್ ಕುಮಾರ್ ಅವರ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಸಲುವಾಗಿ ಎಲ್ಲ ಮಿತ್ರ ಪಕ್ಷಗಳೂ ತಮ್ಮ ಸೀಟುಗಳ ಸಂಖ್ಯೆಯನ್ನು ಕಡಿತಗೊಳಿಸಬೇಕಾಗಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎಲ್ಲ 40 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 22 ಸೀಟುಗಳನ್ನು ಪಡೆದುಕೊಂಡು ಸಾಮರ್ಥ್ಯ ಪ್ರದರ್ಶಿಸಿತ್ತು. ಜೆಡಿಯು ಎರಡು ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿತ್ತು. ಈಗಿನ ಒಪ್ಪಂದದ ಅನ್ವಯ ಎಲ್ಜೆಪಿ ಮತ್ತು ಆರ್ಎಲ್ಎಸ್ಪಿ ಕೂಡ ಸಂಸತ್ತಿನಲ್ಲಿರುವ ತಮ್ಮ ಬಲಾಬಲಕ್ಕಿಂತಲೂ ತಲಾ ಒಂದು ಕ್ಷೇತ್ರಗಳನ್ನು ತ್ಯಾಗ ಮಾಡಬೇಕಾಗಿದೆ.

ಸಮೀಕ್ಷೆ ಹೇಳುವುದೇನು?
ಈ ತಿಂಗಳ ಆರಂಭದಲ್ಲಿ ಎಬಿಪಿ ನ್ಯೂಸ್-ಸಿ ವೋಟರ್ ಬಿಡುಗಡೆ ಮಾಡಿರುವ ಸಮೀಕ್ಷೆ ಪ್ರಕಾರ ಬಿಜೆಪಿ, ಜೆಡಿಯು, ಎಲ್ಜೆಪಿ ಮತ್ತು ಆರ್ಎಲ್ಎಸ್ಪಿ ಮಿತ್ರಪಕ್ಷಗಳ ಎನ್ಡಿಎ ಒಕ್ಕೂಟ 2014ರಲ್ಲಿ ಜಯಗಳಿಸಿದ್ದಂತೆಯೇ 31 ಸೀಟುಗಳನ್ನು 2019ರ ಚುನಾವಣೆಯಲ್ಲಿ ಪಡೆದುಕೊಳ್ಳಲಿವೆ. ಒಂದು ವೇಳೆ ಎಲ್ಜೆಪಿ ಮತ್ತು ಆರ್ಎಲ್ಎಸ್ಪಿಗಳು ಎನ್ಡಿಎಯಿಂದ ಹೊರಬಂದು ಯುಪಿಎ ಜತೆಗೂಡಿ ಸ್ಪರ್ಧಿಸಿದರೆ ಆಡಳಿತಾರೂಢ ಎನ್ಡಿಎ ಶಕ್ತಿ 22ಕ್ಕೆ ಕುಸಿಯಲಿದೆ.

ಮಿತ್ರಪಕ್ಷಗಳ ಸಹಮತ ಕಷ್ಟ
ಬಿಜೆಪಿ ಮತ್ತು ಜೆಡಿಯು ನಡುವೆ ನಡೆದ ಒಪ್ಪಂದಕ್ಕೆ ಅನುಗುಣವಾಗಿ ಎಲ್ಜೆಪಿ ಮತ್ತು ಆರ್ಎಲ್ಎಸ್ಪಿಗಳಲ್ಲಿ ಸಹಮತ ವ್ಯಕ್ತವಾಗದೆ ಇದ್ದರೆ ಮೈತ್ರಿಕೂಟದಿಂದ ಹೊರಬರುವ ಸಾಧ್ಯತೆ ಇದೆ. ಇದರಿಂದ ಎನ್ಡಿಎಗೆ ಸಣ್ಣ ಹಿನ್ನಡೆ ಉಂಟಾಗಲಿದೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿರುವ ಆರ್ಎಲ್ಎಸ್ಪಿಯ ಉಪೇಂದ್ರ ಕುಶ್ವಾಲಾ, ಮೈತ್ರಿಕೂಟದಿಂದ ಹೊರಬರುವ ಸುದ್ದಿಯನ್ನು ನಿರಾಕರಿಸಿದ್ದರು. ಭವಿಷ್ಯದಲ್ಲಿ ಯಾದವ ಸಮುದಾಯದ ಹಾಲಿನಿಂದ ಖೀರು ಮಾಡಬಹುದು ಮತ್ತು ಕುಶ್ವಾಹರಿಂದ ಅನ್ನ ತಯಾರಿಸಬಹುದು ಎಂಬ ಅವರ ಹೇಳಿಕೆ ಮೈತ್ರಿಕೂಟ ತ್ಯಜಿಸುವ ಅನುಮಾನ ಮೂಡಿಸಿತ್ತು. ಮೋದಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿ ನೋಡಲು ಬಯಸದವರು ಬಿಹಾರದಲ್ಲಿನ ಮೈತ್ರಿಕೂಟದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಅವರು ಹೇಳಿದ್ದರು.












Click it and Unblock the Notifications