Get Updates
Get notified of breaking news, exclusive insights, and must-see stories!

ಸೆಲ್ಫಿ ತೆಗೆದುಕೊಳ್ಳಲು ನಿಲ್ಲುತ್ತಿದ್ದ ವ್ಯಕ್ತಿ 'ಮಹಾರಾಜ'ನನ್ನೇ ಸೋಲಿಸಿದರು!

ನವದೆಹಲಿ, ಮೇ 25: ಮಧ್ಯಪ್ರದೇಶದಲ್ಲಿ ಕೆಲವೇ ತಿಂಗಳ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಮಹತ್ವದ ಪಾತ್ರ ವಹಿಸಿ ಗೆಲುವಿನ ನಗೆ ಬೀರಿದ್ದ ವ್ಯಕ್ತಿ, ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿ ಆಘಾತಕ್ಕೊಳಗಾಗಿದ್ದಾರೆ.

ಗುನಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜ್ಯೋತಿರಾದಿತ್ಯ ಸಿಂದಿಯಾ ಅಚ್ಚರಿಯ ಸೋಲು ಅನುಭವಿಸಿದ್ದಾರೆ. ಆದರೆ, ಆ ಸೋಲಿಗಿಂತಲೂ ಅವರಿಗೆ ಆಘಾತ ಮೂಡಿಸಿರುವುದು ಗೆದ್ದ ಎದುರಾಳಿ. ಏಕೆಂದರೆ ಆ ಎದುರಾಳಿ ಒಂದು ಕಾಲದಲ್ಲಿ ತಮ್ಮೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ನಿಲ್ಲುತ್ತಿದ್ದವರು. ಶಾಲೆಯಲ್ಲಿ ತಮಗಿಂತ ಕಿರಿಯ. ಬಳಿಕ ಕಾಂಗ್ರೆಸ್ ಪಕ್ಷದಲ್ಲಿಯೇ ತಮಗೆ ಪರಮಾಪ್ತರಾಗಿದ್ದವರು.

ಕಾಂಗ್ರೆಸ್‌ನ 'ಮಹಾರಾಜ' ಎಂದೇ ಕರೆಸಿಕೊಳ್ಳುವ ಜ್ಯೋತಿರಾದಿತ್ಯ ಸಿಂದಿಯಾ 1,25,549 ಮತಗಳ ಅಂತರದಿಂದ ಸೋತು ಮುಜುಗರಕ್ಕೆ ಒಳಗಾಗಿದ್ದಾರೆ. ಇದೇ ಮೊದಲ ಬಾರಿಗೆ ಸಿಂದಿಯಾ ಕುಟುಂಬದಿಂದ ಯಾವೊಬ್ಬ ವ್ಯಕ್ತಿಯೂ ಲೋಕಸಭೆಗೆ ಆಯ್ಕೆಯಾಗದ ಇತಿಹಾಸ ನಿರ್ಮಾಣವಾಗಿದೆ. ಸಿಂದಿಯಾ ಸೋತಿರುವುದು ಒಂದು ಕಾಲದಲ್ಲಿ ಕಾಂಗ್ರೆಸ್‌ಗೆ ನಿಷ್ಠೆಯಿಂದ ದುಡಿದಿದ್ದ ವ್ಯಕ್ತಿ ಕೃಷ್ಣಪಾಲ್ ಯಾದವ್ ಎದುರು.

ಕೃಷ್ಣಪಾಲ್ ಯಾದವ್ ಅವರು ಶಾಲೆಯಲ್ಲಿ ಸಿಂದಿಯಾ ಅವರಿಗಿಂತ ಕಿರಿಯರು. ಬಳಿಕ ಸಿಂದಿಯಾ ಅವರಂತೆ ಯಾದವ್ ಕೂಡ ಕಾಂಗ್ರೆಸ್ ಸೇರಿದರು. ಅವರಿಗೆ ಆಪ್ತರೂ ಆಗಿದ್ದರು. ಆದರೆ, ಕಳೆದ ಉಪ ಚುನಾವಣೆಯಲ್ಲಿ ಪಕ್ಷ ಮತ್ತು ಸಿಂದಿಯಾ ತಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ಬೇಸರ ಅವರಲ್ಲಿ ಮೂಡಿತು. ಬಳಿಕ ಬಿಜೆಪಿ ಸೇರ್ಪಡೆಯಾದರು.

ಆಯುರ್ವೇದ ವೈದ್ಯರು

ಆಯುರ್ವೇದ ವೈದ್ಯರು

ಕೃಷ್ಣಪಾಲ್ ಯಾದವ್ ವೃತ್ತಿಯಿಂದ ಆಯುರ್ವೇದ ವೈದ್ಯರು. ಅವರ ಕುಟುಂಬ ಕಾಂಗ್ರೆಸ್‌ನೊಂದಿಗೆ ಉತ್ತಮ ಬಾಂಧವ್ಯ ಹೊಂದಿತ್ತು. ಅವರ ತಂದೆ ರಘುವೀರ್ ಸಿಂಗ್ ಯಾದವ್ ನಾಲ್ಕು ಬಾರಿ ಅಶೋಕನಗರ ಕಾಂಗ್ರೆಸ್‌ನ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದರು. ರಘುವೀರ್ ಸಿಂಗ್ ಅವರೂ ಕೂಡ ಜ್ಯೋತಿರಾದಿತ್ಯ ಸಿಂದಿಯಾ ಅವರ ತಂದೆ ಮಾಧವರಾವ್ ಸಿಂದಿಯಾ ಅವರ ಪರಮಾಪ್ತರ ವಲಯದಲ್ಲಿ ಇದ್ದವರು. ಕೆ.ಪಿ ಯಾದವ್ ಅವರ ಪತ್ನಿ ಅಶೋಕನಗರ ಜಿಲ್ಲಾ ಪಂಚಾಯಿತಿಯ ಸದಸ್ಯೆಯಾಗಿದ್ದಾರೆ.

ವೈರಲ್ ಆಗಿದ್ದ ಸೆಲ್ಫಿ

ಕಾಂಗ್ರೆಸ್‌ ಬಗ್ಗೆ ಬೇಸರಗೊಂಡಿದ್ದ ಯಾದವ್ ಬಿಜೆಪಿ ಸೇರಿಕೊಂಡಿದ್ದರು. ಆದರೆ, ಸಿಂದಿಯಾ ವಿರುದ್ಧ ಅವರೇ ಬಿಜೆಪಿ ಅಭ್ಯರ್ಥಿ ಎಂದು ಘೋಷಣೆಯಾದ ಕೂಡಲೇ ಅವರ ಸೆಲ್ಫಿ ವೈರಲ್ ಆಗಿತ್ತು. ಕಾರಿನಲ್ಲಿ ಕುಳಿತಿದ್ದ ಸಿಂದಿಯಾ ಅವರು ಕಾಣುವಂತೆ ಹೊರಗೆ ನಿಂತಿದ್ದ ಯಾದವ್ ಸೆಲ್ಫಿಯಲ್ಲಿ ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದರು. ಈ ಚಿತ್ರವನ್ನು ಸಿಂದಿಯಾ ಅವರ ಪತ್ನಿ ಪ್ರಿಯದರ್ಶಿನಿ ಅವರೇ ಬಿಡುಗಡೆ ಮಾಡಿದ್ದರು ಎನ್ನಲಾಗಿದೆ.

'ಮಹಾರಾಜನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಯಾವಾಗಲೂ ಸರದಿಯಲ್ಲಿ ನಿಲ್ಲುತ್ತಿದ್ದ ಕೆಪಿ ಯಾದವ್ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ' ಎಂದು ಅವರು ಹೇಳಿದ್ದರು ಎನ್ನಲಾಗಿದೆ.

ಈ ಚಿತ್ರ ಎಲ್ಲೆಡೆ ವ್ಯಾಪಕವಾಗಿ ಹರಿದಾಡಿತ್ತು. ಯಾದವ್ ಅವರನ್ನು ಅಣಕಿಸಲು ಸಿಂದಿಯಾ ಅವರ ಅಭಿಮಾನಿಗಳು ಈ ಚಿತ್ರವನ್ನು ಬಳಸಿಕೊಳ್ಳುತ್ತಿದ್ದರು. ಆದರೆ, ಮತದಾರರ ತೀರ್ಮಾನವೇ ಬೇರೆ ರೀತಿ ಇತ್ತು. ಈ ಚುನಾವಣೆಯ ಬಳಿಕ ಸಿಂದಿಯಾ ಅವರನ್ನು ಸಾಮಾನ್ಯ ವ್ಯಕ್ತಿಯನ್ನಾಗಿಸಿ ತಾವು ಮಹಾರಾಜನಾಗಿಬಿಟ್ಟರು ಕೆ.ಪಿ. ಯಾದವ್.

ಒಂದು ವರ್ಷದ ಹಿಂದಷ್ಟೇ ಹಳಸಿದ ಸಂಬಂಧ

ಒಂದು ವರ್ಷದ ಹಿಂದಷ್ಟೇ ಹಳಸಿದ ಸಂಬಂಧ

ಇವರಿಬ್ಬರ ಬಾಲ್ಯದ ಮತ್ತೊಂದು ಚಿತ್ರ ಕೂಡ ವೈರಲ್ ಆಗಿದೆ. ಗುನಾದಲ್ಲಿ ಸ್ಟೇಡಿಯಂ ಒಂದರ ಉದ್ಘಾಟನೆ ಸಂದರ್ಭದಲ್ಲಿ ಇಬ್ಬರೂ ಒಟ್ಟಿಗಿರುವ ಚಿತ್ರ ತೆಗೆಯಲಾಗಿತ್ತು. ಆದ ಸಿಂದಿಯಾ ಹನ್ನೊಂದನೇ ತರಗತಿಯಲ್ಲಿದ್ದರೆ, ಯಾದವ್, ಆರನೇ ತರಗತಿ ಓದುತ್ತಿದ್ದರು ಎನ್ನಲಾಗಿದೆ. 2018ರವರೆಗೂ ಇಬ್ಬರ ಸಂಬಂಧ ಚೆನ್ನಾಗಿಯೇ ಇತ್ತು. ಆದರೆ, ಮುಂಗೌಲಿ ಕ್ಷೇತ್ರದ ಉಪ ಚುನಾವಣೆಯ ಸ್ಪರ್ಧೆ ವಿಚಾರದಲ್ಲಿ ಇಬ್ಬರ ನಡುವೆ ಸಂಬಂಧ ಹಳಸಿತ್ತು.

ಸಿಂದಿಯಾ ಅವರಿಂದ ಯಾದವ್ ಅವಮಾನಿತರಾಗಿದ್ದರು. ಇದರಿಂದ 2018ರ ಜನವರಿಯಲ್ಲಿ ಇಬ್ಬರೂ ದೂರವಾದರು ಎಂದು ಹೇಳಲಾಗಿದೆ.

ಅವಹೇಳನೆ ಮಾಡಿದ್ದ ಪ್ರಿಯದರ್ಶಿನಿ

ಅವಹೇಳನೆ ಮಾಡಿದ್ದ ಪ್ರಿಯದರ್ಶಿನಿ

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸಿಂದಿಯಾ ಅವರು ಉತ್ತರ ಪ್ರದೇಶದ ಪೂರ್ವ ಭಾಗದ ತಮ್ಮ ಜವಾಬ್ದಾರಿ ನಿರ್ವಹಿಸಲು ಹೆಚ್ಚು ಗಮನ ಹರಿಸಿದ್ದರು. ಗುನಾದಲ್ಲಿ ಅವರ ಪರವಾಗಿ ಪ್ರಚಾರ ನಡೆಸಿದ್ದ ಪತ್ನಿ ಪ್ರಿಯದರ್ಶಿನಿ ರಾಜೇ ಅವರು, ಯಾದವ್ ಅವರ ಉಮೇದುವಾರಿಕೆಯನ್ನು ಕಡೆಗಣಿಸಿದ್ದರು. ಕಾಂಗ್ರೆಸ್‌ನ ತಾರಾ ಅಭ್ಯರ್ಥಿಯ ಮುಂದೆ ಯಾದವ್ ಏನೂ ಅಲ್ಲ ಎಂದು ಹೇಳಿಕೆ ನೀಡಿದ್ದರು. ಯಾದವ್ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಅವರನ್ನು ಅಣಕಿಸಿದ್ದ ಪ್ರಿಯದರ್ಶಿನಿ, 'ಮಹಾರಾಜನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಈ ಹಿಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾತ ಈಗ ಬಿಜೆಪಿ ಅಭ್ಯರ್ಥಿ' ಎಂದು ಲೇವಡಿ ಮಾಡಿದ್ದರು.

2018ರ ವಿಧಾನಸಭೆ ಚುನಾವಣೆಯಲ್ಲಿಯೂ ಯಾದವ್ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಮುಂಗೌಲಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆ.ಪಿ. ಯಾದವ್ ಅವರು ಕಾಂಗ್ರೆಸ್ ಅಭ್ಯರ್ಥಿ ಬ್ರಜೇಂದ್ರ ಸಿಂಗ್ ಯಾದವ್ ವಿರುದ್ಧ ಕೇವಲ 2,000 ಮತಗಳ ಅಂತರದಿಂದ ಸೋತಿದ್ದರು. ಆದರೆ, ಅವರನ್ನು ಕೈಬಿಡದ ಬಿಜೆಪಿ, ಗುನಾ ಕ್ಷೇತ್ರದಲ್ಲಿ ಸಿಂದಿಯಾ ವಿರುದ್ಧ ಕಣಕ್ಕಿಳಿಸಿ ಅವರನ್ನು ಗೆಲ್ಲಿಸಿದೆ.

ಗೆಲುವಿನ ಅಂತರ ಚಿಕ್ಕದಲ್ಲ

ಕೆಪಿ ಯಾದವ್ ಅವರು 6,14,049 ಮತಗಳನ್ನು ಪಡೆದಿದ್ದರೆ, ಸಿಂದಿಯಾ ಅವರು 4,88,500 ಮತಗಳನ್ನು ಪಡೆದು 1,25,549 ಮತಗಳಿಂದ ಸೋತಿದ್ದಾರೆ. 1957ರಲ್ಲಿ ಮಧ್ಯಪ್ರದೇಶ ರಾಜ್ಯ ಅಸ್ತಿತ್ವಕ್ಕೆ ಬಂದ ಬಳಿಕ ಗುನಾ ಕ್ಷೇತ್ರದಲ್ಲಿ ಸಿಂದಿಯಾ ಕುಟುಂಬಕ್ಕೆ ಎದುರಾದ ಮೊಟ್ಟ ಮೊದಲ ಸೋಲು ಇದು.

2019ರಲ್ಲಿ ಪಕ್ಷದ ಮುಂಚೂಣಿ ನಾಯಕರಾಗಿದ್ದ ಸಿಂದಿಯಾ ಅವರ ಸೋಲು, ವೈಯಕ್ತಿಕವಾಗಿ ಅವರಿಗೆ ಮಾತ್ರವಲ್ಲ, ಕಾಂಗ್ರೆಸ್ ಪಕ್ಷಕ್ಕೇ ಮುಜುಗರ ಉಂಟುಮಾಡಿದೆ.

ರಾಹುಲ್‌ಗೆ ಆಪ್ತರಾದ ಸಿಂದಿಯಾ

2014ರಲ್ಲಿ ಗುನಾ ಕ್ಷೇತ್ರದಿಂದ ಸಿಂದಿಯಾ ಜಯಭೇರಿ ಬಾರಿಸಿದ್ದರು. ಅವರು ಈ ಹಿಂದಿನ ಗ್ವಾಲಿಯರ್ ರಾಜಮನೆತನಕ್ಕೆ ಸೇರಿದವರು. ಹೀಗಾಗಿಯೇ ಅವರನ್ನು 'ಮಹಾರಾಜ' ಎಂದು ಕರೆಯಲಾಗುತ್ತದೆ.

48 ವರ್ಷದ ಜ್ಯೋತಿರಾದಿತ್ಯ ಸಿಂದಿಯಾ ಅವರು ಕಾಂಗ್ರೆಸ್‌ನ ಹೊಸ ಆಶಾಕಿರಣವಾಗಿದ್ದರು. ಯುವಜನರನ್ನು ಕಾಂಗ್ರೆಸ್ ಕಡೆಗೆ ಕರೆತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ರಾಹುಲ್ ಗಾಂಧಿ ಅವರಿಗೆ ಸಿಂದಿಯಾ ಪರಮಾಪ್ತರು. ಅವರನ್ನು 'ಜ್ಯೋತಿರ್' ಎಂದು ಕರೆಯುವ ರಾಹುಲ್, ಸಿಂದಿಯಾ ಅವರ ಸಲಹೆಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ.

ವಿಮಾನ ಅಪಘಾತದಲ್ಲಿ ತಂದೆ ಮಾಧವ ರಾವ್ ಸಿಂದಿಯಾ ಅವರು ಮೃತಪಟ್ಟ ಬಳಿಕ 2001ರಲ್ಲಿ ರಾಜಕೀಯ ಪ್ರವೇಶಿಸಿ ಕಾಂಗ್ರೆಸ್ ಸೇರಿಕೊಂಡಿದ್ದರು.

ಕುಟುಂಬದಲ್ಲಿಯೇ ಬಿಜೆಪಿ-ಕಾಂಗ್ರೆಸ್

ಈ ವರ್ಷದ ಜನವರಿಯಲ್ಲಿ ಅವರನ್ನು ಉತ್ತರ ಪ್ರದೇಶದ ಪೂರ್ವ ಭಾಗದ ಕಾಂಗ್ರೆಸ್ ಉಸ್ತುವಾರಿಯನ್ನಾಗಿ ನೇಮಿಸಲಾಗಿತ್ತು. 1980ರಲ್ಲಿ ವಿಜಯರಾಜೇ ಸಿಂದಿಯಾ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಎದುರು ರಾಯ್ ಬರೇಲಿಯಲ್ಲಿ ಸೋಲು ಅನುಭವಿಸಿದ್ದರು. ಆದರೆ, ಜ್ಯೋತಿರಾದಿತ್ಯ ಅವರ ತಂದೆ ಮಾಧವರಾವ್ ಸಿಂದಿಯಾ ಯಾವ ಚುನಾವಣೆಯಲ್ಲಿಯೂ ಸೋತಿರಲಿಲ್ಲ. ಅವರ ಸೋದರತ್ತೆ ಮತ್ತು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಭಿಂಡ್ ಕ್ಷೇತ್ರದಲ್ಲಿ ಒಮ್ಮೆ ಸೋತಿದ್ದರು.

ಜ್ಯೋತಿರಾದಿತ್ಯ ಅವರ ಅಜ್ಜಿ, ಭಾರತೀಯ ಜನಸಂಘದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ವಿಜಯರಾಜೇ ಸಿಂದಿಯಾ ಅವರು 1999ರಲ್ಲಿ ರಾಜಕೀಯದಿಂದ ನಿವೃತ್ತರಾಗುವವರೆಗೂ ಗುನಾ ಕ್ಷೇತ್ರದಲ್ಲಿ ಸತತವಾಗಿ ಗೆಲುವು ಸಾಧಿಸಿದ್ದರು. 2001ರಲ್ಲಿ ತಂದೆ ಮಾಧವ್ ರಾವ್ ಸಿಂದಿಯಾ ಅವರು ನಿಧನರಾದ ಬಳಿಕ ನಡೆದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಜ್ಯೋತಿರಾದಿತ್ಯ, ಇಲ್ಲಿಯವರೆಗೂ ಅಲ್ಲಿ ಸೋಲು ಕಂಡಿರಲಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+