Lok sabha election 2024: ತೆಲಂಗಾಣದಲ್ಲಿ ಮೂವರ ಜಗಳದಲ್ಲಿ ಬಿಜೆಪಿಗೆ ಲಾಭ!
ನವದೆಹಲಿ, ಮಾರ್ಚ್ 15: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಹಲವು ಸಂಸ್ಥೆಗಳು ಈಗಾಗಲೇ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿವೆ. ನೆಟ್ವರ್ಕ್ 18 ರ ಮೆಗಾ ಒಪಿನಿಯನ್ ಸರ್ವೆ ನಡೆಸಿದ್ದು, ಫಲಿತಾಂಶಗಳನ್ನು ಪ್ರಕಟಿಸಿದೆ. ದೇಶದಲ್ಲಿ ಈ ಬಾರಿಯೂ ಮೋದಿ ಸರ್ಕಾರ ಗ್ಯಾರಂಟಿ ಎಂದು ಸಮೀಕ್ಷೆ ತಿಳಿಸಿದೆ.
ತೆಲಂಗಾಣದ ವಿಷಯಕ್ಕೆ ಬಂದರೆ, ನೆಟ್ವರ್ಕ್ 18 ರ ಮೆಗಾ ಒಪಿನಿಯನ್ ಪೋಲ್ ಪ್ರಕಾರ, ಭಾರತೀಯ ಜನತಾ ಪಕ್ಷವು ತೆಲಂಗಾಣದ 17 ಲೋಕಸಭಾ ಸ್ಥಾನಗಳಲ್ಲಿ ಎಂಟನ್ನು ಗೆಲ್ಲುವ ಸಾಧ್ಯತೆಯಿದೆ. ಇದು 2019 ರ ಸ್ಥಾನಗಳನ್ನು ಡಬಲ್ ಮಾಡುತ್ತದೆ. ಇಂಡಿಯಾ ಒಕ್ಕೂಟ ಆರು ಸ್ಥಾನಗಳಲ್ಲಿ, ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಎರಡು ಮತ್ತು ಇತರರು ಒಂದಸು ಸ್ಥಾನ ಗಳಿಸುವ ಸಾಧ್ಯತೆಯಿದೆ.

ಸಮೀಕ್ಷೆಯ ಮತಹಂಚಿಕೆಯನ್ನು ನೋಡುವುದಾದರೆ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಒಟ್ಟು 34%, ಬಿಜೆಪಿ 28%, BRS 27%, ಮತ್ತು ಇತರರು 11% ಪಡೆಯಲಿದ್ದಾರೆ ಎಂದು ತಿಳಿಸಿದೆ. ಈ ಸಮೀಕ್ಷೆಯನ್ನು ಫೆಬ್ರವರಿ 12 ರಿಂದ ಮಾರ್ಚ್ 1 ರವರೆಗೆ ದೇಶದ 21 ಪ್ರಮುಖ ರಾಜ್ಯಗಳಲ್ಲಿ ನಡೆಸಲಾಗಿದೆ.
2019ರಲ್ಲಿ ತೆಲಂಗಾಣದ 17 ಲೋಕಸಭಾ ಸ್ಥಾನಗಳ ಪೈಕಿ ಮೂರರಲ್ಲಿ ಕಾಂಗ್ರೆಸ್ ಗೆದ್ದಿತ್ತು. ಹಾಲಿ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಸೇರಿದಂತೆ ಮೂವರೂ ಸಂಸದರು ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಕೆ ಚಂದ್ರಶೇಖರ ರಾವ್ ನೇತೃತ್ವದ ಬಿಆರ್ಎಸ್ 2019 ರಲ್ಲಿ ಒಂಬತ್ತು ಸ್ಥಾನಗಳನ್ನು ಗೆದ್ದರೆ, ಬಿಜೆಪಿ ನಾಲ್ಕು ಸ್ಥಾನಗಳನ್ನು ಗಳಿಸಿತು. ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಒಂದು ಸ್ಥಾನವನ್ನು ಉಳಿಸಿಕೊಂಡಿತ್ತು.
ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ರಾಜ್ಯದ 17 ಲೋಕಸಭಾ ಸ್ಥಾನಗಳಲ್ಲಿ ಕನಿಷ್ಠ 12 ಸ್ಥಾನಗಳನ್ನು ಗೆಲ್ಲುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದ್ದರೂ, ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (GHMC) ಮಿತಿಯಲ್ಲಿನ ಒಟ್ಟು 24 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ವಿಫಲವಾಗಿದೆ. ತೆಲಂಗಾಣದ ಒಟ್ಟು 17 ಲೋಕಸಭಾ ಸ್ಥಾನಗಳ ಪೈಕಿ ನಾಲ್ಕು ಕ್ಷೇತ್ರಗಳು - ಮಲ್ಕಾಜ್ಗಿರಿ, ಸಿಕಂದರಾಬಾದ್, ಹೈದರಾಬಾದ್ ಮತ್ತು ಚೆವೆಲ್ಲಾ ಜಿಎಚ್ಎಂಸಿ ವ್ಯಾಪ್ತಿಯಲ್ಲಿವೆ.

ಇನ್ನು, ಬಿಜೆಪಿ ಕನಿಷ್ಠ 10 ಸ್ಥಾನಗಳ ಗುರಿಯನ್ನು ಹೊಂದಿದೆ. ಕಳೆದ ವರ್ಷ ಡಿಸೆಂಬರ್ 28 ರಂದು ರಾಜ್ಯಕ್ಕೆ ಭೇಟಿ ನೀಡಿದ ಪಕ್ಷದ ಹಿರಿಯ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತೆಲಂಗಾಣದಲ್ಲಿ ಕನಿಷ್ಠ 10 ಸ್ಥಾನಗಳನ್ನು ಗೆಲ್ಲಲು ಮತ್ತು ಶೇಕಡಾ 35 ರಷ್ಟು ಮತಗಳನ್ನು ಗಳಿಸುವ ಗುರಿಯನ್ನು ಹೊಂದಿದ್ದರು. ರಾಜ್ಯದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 119 ಸ್ಥಾನಗಳಲ್ಲಿ ಕೇವಲ 8 ಸ್ಥಾನಗಳನ್ನು ಗೆದ್ದಿದೆ.
ಕಳೆದ ಕೆಲವು ದಿನಗಳಲ್ಲಿ ಭಾರತ್ ರಾಷ್ಟ್ರ ಸಮಿತಿಯ (ಬಿಆರ್ಎಸ್) ಇಬ್ಬರು ಸಂಸದರು ಮತ್ತು ಇತರ ಹಲವಾರು ನಾಯಕರು ತನ್ನ ಪಾಳಯಕ್ಕೆ ಸೇರ್ಪಡೆಗೊಂಡಿದ್ದರಿಂದ ಬಿಜೆಪಿ ಲವಲವಿಕೆಯಿಂದ ಕೂಡಿದೆ. ರಾಜ್ಯದ 17 ಲೋಕಸಭಾ ಕ್ಷೇತ್ರಗಳ ಪೈಕಿ ಒಂಬತ್ತು ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿದೆ. ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವರು ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಜಿ ಕಿಶನ್ ರೆಡ್ಡಿ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಂಡಿ ಸಂಜಯ್ ಕುಮಾರ್ ಸೇರಿದಂತೆ ನಾಲ್ವರಲ್ಲಿ ಮೂವರು ಸಂಸದರು ಪಟ್ಟಿಯಲ್ಲಿದ್ದಾರೆ.












Click it and Unblock the Notifications