ಮಾನವೀಯತೆ ಮೆರೆದ ಪೊಲೀಸ್ ಇನ್ಸ್ಪೆಕ್ಟರ್ಗೆ ಸೆಲ್ಯೂಟ್
ವಾರಣಾಸಿ, ಜುಲೈ 24 : ಈ ಕಥೆಯನ್ನು ಓದುತ್ತಿದ್ದಂತೆ ದರಿದ್ರ ವ್ಯವಸ್ಥೆಯ ಮೇಲೆ ಆಕ್ರೋಶ, ಅಸಹ್ಯ, ಹತಾಶೆ ಎಲ್ಲ ಒಟ್ಟೊಟ್ಟಿಗೇ ಬರುತ್ತದೆ. ಜೊತೆಗೆ, ಇದೇ ವ್ಯವಸ್ಥೆಯಲ್ಲಿ ಇಂಥವರೂ ಇರ್ತಾರಾ ಅಂತ ಅಭಿಮಾನದಿಂದ, ಹೆಮ್ಮೆಯಿಂದ ನಿಮ್ಮ ಕಣ್ಣು ತೇವವಾಗುವುದರಲ್ಲಿ ಸಂಶಯವೇ ಇಲ್ಲ.
ವಾರಣಾಸಿಯ ಫುಲಪುರ ಪೊಲೀಸ್ ಸ್ಟೇಷನ್ ಉಸ್ತುವಾರಿ ವಹಿಸಿರುವ ಇನ್ಸ್ಪೆಕ್ಟರ್ ಸಂಜೀವ್ ಮಿಶ್ರಾಗೆ ಸರ್ಕಾರಿ ಆಸ್ಪತ್ರೆಯಲ್ಲಿರುವ ಒಂದು ಹೆಣ್ಣುಮಗುವಿನ ಸ್ಥಿತಿ ತೀರಾ ಚಿಂತಾಜನಕವಾಗಿದೆ ಎಂಬ ಒಂದು ಮಾಹಿತಿ ಬರುತ್ತದೆ. ಆದರೆ, ಆ ಆಸ್ಪತ್ರೆ ಸಂಜೀವ್ ಅವರ ಪೊಲೀಸ್ ವ್ಯಾಪ್ತಿಯಲ್ಲಿ ಬರುವುದಿಲ್ಲ.
ಬೇರೆಯವರಾಗಿದ್ದರೆ, ಕಿವಿಯಲ್ಲಿ ಬೈಕಿನ ಚಾವಿಯನ್ನು ತಿರುವುತ್ತ, ಮುಖ ಸೊಟ್ಟಗೆ ಮಾಡಿಕೊಂಡು, ತನಗೂ ಆ ಕೇಸಿಗೂ ಸಂಬಂಧವೇ ಇಲ್ಲ, ಅದು ನನ್ನ ಜೂರಿಸ್ಡಿಕ್ಷನ್ ನಲ್ಲಿ ಬರುವುದಿಲ್ಲ ಅಂತ ತಣ್ಣಗೆ ಬಿಸಿಬಿಸಿ ಚಹಾ ಹೀರುತ್ತ ಕುಳಿತುಬಿಡುತ್ತಿದ್ದರೇನೋ. ಆದರೆ, ಸಂಜೀವ್ ಮಿಶ್ರಾ ಸುಮ್ಮನೆ ಕೂಡಲಿಲ್ಲ. [ಮರಳು ಗುಡಿಸುವ ಜಾಲಹಳ್ಳಿ ಪೊಲೀಸ್ ಗೊಂದು ಸಲಾಂ]
ಮಗುವಿನ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಒಂಚೂರೂ ಯೋಚಿಸದೆ ಸಂಜೀವ್ ಸರಕಾರಿ ಆಸ್ಪತ್ರೆಗೆ ಧಾವಿಸಿದ್ದಾರೆ. ಮಗುವಿನ ಸ್ಥಿತಿ ನೋಡುತ್ತಿದ್ದಂತೆ ಸಂಜೀವ್ ಅವರಿಗೆ ಆಕ್ರೋಶ ಉಕ್ಕಿ ಬಂದಿದೆ. ಮಧ್ಯವಯಸ್ಕನೊಬ್ಬ ಮಗುವಿನ ಮೇಲೆ ಅಮಾನವೀಯವಾಗಿ ಅತ್ಯಾಚಾರ ಎಸಗಿದ್ದ. ಸಾವು ಬದುಕಿನ ನಡುವೆ ಮಗು ಹೊಯ್ದಾಡುತ್ತಿತ್ತು.
ಸಿಟ್ಟು ಉಕ್ಕಿಬರುತ್ತಿದ್ದರೂ ಮಗುವಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ ಸರಕಾರಿ ವೈದ್ಯರ ಮೇಲೆ ಸಂಜೀವ್ ರೇಗಾಡಿಲ್ಲ, ಕೂಗಾಡಿಲ್ಲ, ಕಾನೂನು ಕ್ರಮ ಜರುಗಿಸುತ್ತೇನೆಂದು ಎಚ್ಚರಿಕೆಯನ್ನೂ ನೀಡಿಲ್ಲ. ಸ್ಟ್ರೆಚರ್, ಆಂಬ್ಯುಲೆನ್ಸ್ಗಾಗಿ ಕೂಡ ಕಾಯದೆ ಮಗುವಿಗೆ ಹೊದಿಸಿದ ಬಟ್ಟೆಯ ಸಮೇತ ಮಗುವನ್ನೆತ್ತಿಕೊಂಡು ಸಂಜೀವ್ ಹತ್ತಿರದ ಖಾಸಗಿ ಆಸ್ಪತ್ರೆಗೆ ಧಾವಿಸಿದ್ದಾರೆ.
ಖಾಸಗಿ ಆಸ್ಪತ್ರೆಯ ವೈದ್ಯರೇನು ದೇವರಾ? "ಅಲ್ರೀ, ಮಗುವಿನ ಸ್ಥಿತಿ ಚಿಂತಾಜನಕವಾಗಿದೆ, ಇದು ಖಾಸಗಿ ಆಸ್ಪತ್ರೆ, ಚಿಕಿತ್ಸೆಗೆ ಭಾರೀ ಖರ್ಚು ತಗಲುತ್ತದೆ, ಅದನ್ಯಾರು ಭರಿಸುತ್ತಾರೆ? ಮಗುವಿನ ಪೋಷಕರ್ಯಾರೂ ಇಲ್ವಾ?" ಅಂತ ಬಿಳಿಕೋಟಿನ ಖಾಸಗಿ ಆಸ್ಪತ್ರೆ ವೈದ್ಯರು ಇನ್ಸ್ಪೆಕ್ಟರ್ ಸಂಜೀವ್ರನ್ನು ಪ್ರಶ್ನಿಸಿದ್ದಾರೆ. [ಕರ್ತವ್ಯಪ್ರಜ್ಞೆ ಮೆರೆದ ಸಂಚಾರಿ ಪೊಲೀಸರಿಗೆ ಶಭಾಶ್ ಗಿರಿ]
"ಈ ಮಗುವಿನ ಪೋಷಕ ನಾನೇ, ಚಿಕಿತ್ಸೆಯ ಎಲ್ಲ ಖರ್ಚುಗಳನ್ನೂ ನಾನೇ ಭರಿಸುತ್ತೇನೆ" ಎಂದು ಸಂಜೀವ್ ಖಾಸಗಿ ಆಸ್ಪತ್ರೆ ವೈದ್ಯರಿಗೆ ಹೇಳಿದ್ದಾರೆ. ಇವರೇ ಅಲ್ವಾ ಅಸಲಿ ಸಿಂಗಂ? ಇಂಥ ತಾಯಿಯ ಹೃದಯದ ಪೊಲೀಸ್ ಅಧಿಕಾರಿಗಳು ಎಲ್ಲಿ ಸಿಗುತ್ತಾರೆ ಹೇಳಿ? ನಿಜವಾದ ಮಾನವೀಯತೆ ಮೆರೆದ ಇನ್ಸ್ಪೆಕ್ಟರ್ ಸಂಜೀವ್ ಅವರಿಗೆ ಒಂದು ಸಲಾಂ.
ಮಗುವಿನ ಮೇಲೆ ಅತ್ಯಾಚಾರವೆಸಗಿದ ದುರುಳ ಸಿಕ್ಕಿಬಿದ್ದಿದ್ದಾನೆ, ಕಂಬಿ ಎಣಿಸುತ್ತಿದ್ದಾನೆ. ಆದರೆ, ಈ ದರಿದ್ರ ವ್ಯವಸ್ಥೆಗೆಲ್ಲ ಯಾರು ಹೊಣೆ? ಆ ಮಗುವಿನ ಅಪ್ಪಅಮ್ಮ ಎಲ್ಲಿದ್ದಾರೋ? ಮಗುವಿನ ಜೀವದ ಜೊತೆ ಆಟವಾಡಿದ ಸಕರಾರಿ ಆಸ್ಪತ್ರೆಯ ವೈದ್ಯರು ಮತ್ತು ಮಾನವೀಯತೆ ಮರೆತು ಹಣದ ಮುಖ ನೋಡಿದ ಖಾಸಗಿ ವೈದ್ಯರೂ ಇದಕ್ಕೆ ಹೊಣೆಗಾರರಾಗಬೇಕಲ್ಲವೆ? [ಕೃಪೆ : ದಿ ಲಾಜಿಕಲ್ ಇಂಡಿಯನ್]