ಪ್ರತಿಯೊಬ್ಬ ಭಾರತೀಯನು ಪ್ರಧಾನಿ ಮೋದಿಗೆ ಈ ಪ್ರಶ್ನೆಯನ್ನು ಕೇಳಬೇಕಿದೆ, ರಾಹುಲ್
ರಫೇಲ್ ಯುದ್ದವಿಮಾನ ಖರೀದಿ ವಿಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬೆನ್ನು ಬಿದ್ದಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ದೇಶದ ಪ್ರತಿಯೊಬ್ಬ ನಾಗರಿಕ ನಾನು ಕೇಳಿದ ಈ ಪ್ರಶ್ನೆಯನ್ನು ಪ್ರಧಾನಿಯವರಿಗೆ ಕೇಳಬೇಕಾಗಿದೆ ಎಂದಿದ್ದಾರೆ.
ನವದೆಹಲಿ, ಜ 5: ರಫೇಲ್ ಯುದ್ದವಿಮಾನ ಖರೀದಿ ವಿಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬೆನ್ನು ಬಿದ್ದಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ದೇಶದ ಪ್ರತಿಯೊಬ್ಬ ನಾಗರಿಕ ನಾನು ಕೇಳಿದ ಈ ಪ್ರಶ್ನೆಯನ್ನು ಪ್ರಧಾನಿಯವರಿಗೆ ಕೇಳಬೇಕಾಗಿದೆ ಎಂದಿದ್ದಾರೆ.
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಎರಡು ತಾಸು ಲೋಕಸಭೆಯಲ್ಲಿ ಮಾತನಾಡಿದರು, ಆದರೆ ರಫೇಲ್ ವಿಚಾರದಲ್ಲಿ ನಾವು ಕೇಳುತ್ತಿರುವ ಪ್ರಶ್ನೆಗೆ ಉತ್ತರಿಸಲೇ ಇಲ್ಲ ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ. (ಮೋದಿ ವಿರುದ್ಧ ತನಿಖೆ ನಡೆಯಲಿ)

ಈ ಬಗ್ಗೆ ವಿಡಿಯೋ ಜೊತೆ ಟ್ವೀಟ್ ಮಾಡಿರುವ ರಾಹುಲ್, ನಾವು ಕೇಳುವ ಅತ್ಯಂತ ಸರಳ ಪ್ರಶ್ನೆಗೆ ಉತ್ತರಿಸಲಾಗದೇ ಪ್ರಧಾನಿಯವರು ಲೋಕಸಭೆಗೆ ಕಾಲಿಡುತ್ತಿಲ್ಲ. ರಕ್ಷಣಾ ಸಚಿವರು ಮತ್ತು ವಿತ್ತ ಸಚಿವರು, ನಾವು ಕೇಳಿದ ಪ್ರಶ್ನೆಗೆ ಉತ್ತರ ಕೊಡುವುದನ್ನು ಬಿಟ್ಟು, ಮಿಕ್ಕ ವಿಚಾರವನ್ನೆಲ್ಲಾ ಪ್ರಸ್ತಾವಿಸುತ್ತಿದ್ದಾರೆಂದು ರಾಹುಲ್ ಹೇಳಿದ್ದಾರೆ.
ರಫೇಲ್ ವಿಮಾನ ಖರೀದಿಯ ಒಟ್ಟಾರೆ ವಿಚಾರದಲ್ಲಿ "ರಿಲಯನ್ಸ್ ಸಂಸ್ಥೆಯ ಅನಿಲ್ ಅಂಬಾನಿಯವರಿಗೆ ಆಫ್ ಸೆಟ್ ಕಾಂಟ್ರ್ಯಾಕ್ಟ್ ನೀಡಿದವರಾರು" ಎನ್ನುವ ಮೊದಲ ಪ್ರಶ್ನೆ ಮತ್ತು "ಅಂಬಾನಿಯವರಿಗೆ ಆಫ್ ಸೆಟ್ ಗುತ್ತಿಗೆಯನ್ನು ನೀಡಿದಾಗ, ರಕ್ಷಣಾ ಸಚಿವೆ ಮತ್ತು ಸಚಿವಾಲಯದ ಅಧಿಕಾರಿಗಳು ಪ್ರಧಾನಿಯವರನ್ನು ಪ್ರಶ್ನಿಸಿದ್ದರೇ" ಎನ್ನುವ ಎರಡು ಪ್ರಶ್ನೆಯನ್ನು ಕೇಳಿದ್ದರು. (ಸಂಸತ್ ನಿಂದ ಓಡಿಹೋದ ಮೋದಿ)

ಈ ಎರಡು ಪ್ರಶ್ನೆಯನ್ನು ನಾನು ಸಂಸತ್ತಿನ ಒಳಗೆ ಮತ್ತು ಹೊರಗೆ ಮೋದಿ ಸರಕಾರಕ್ಕೆ ಕೇಳಿದ್ದೆ, ಅದಕ್ಕೆ ಅಲ್ಲಿಂದ ಏನೂ ಉತ್ತರ ಬಂದಿಲ್ಲ. ಈಗ, ಈ ಪ್ರಶ್ನೆಯನ್ನು ಪ್ರತಿಯೊಬ್ಬ ಭಾರತೀಯನೂ ಮೋದಿಯವರನ್ನು ಕೇಳುವಂತೆ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಭ್ರಷ್ಟಾಚಾರ ಮತ್ತು ರಾಷ್ಟ್ರೀಯ ಭದ್ರತೆಯನ್ನು ದುರ್ಬಲಗೊಳಿಸಿದ ಕಾರಣಕ್ಕಾಗಿ ತನಿಖೆ ನಡೆಸುವಂತೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಒತ್ತಾಯಿಸಿದ್ದರು.












Click it and Unblock the Notifications