ಟೀಕೆ ಎದುರಿಸಿ, ಕೇಸ್ ಹಾಕ್ಬೇಡಿ: ಜಯಲಲಿತಾಗೆ ಸುಪ್ರೀಂಕೋರ್ಟ್ ಪಾಠ
ಬೆಂಗಳೂರು, ಆಗಸ್ಟ್ 24: 'ನೀವು ಸಾರ್ವಜನಿಕ ವ್ಯಕ್ತಿ, ಟೀಕೆಗಳನ್ನು ಎದುರಿಸುವುದನ್ನು ಕಲಿಯಿರಿ' ಎಂದು ತಮಿಳುನಾಡಿನ ಮುಖ್ಯಮಂತ್ರಿ ಜೆ.ಜಯಲಲಿತಾಗೆ ಸುಪ್ರೀಂ ಕೋರ್ಟ್ ಹೇಳಿದೆ. ತನ್ನ ರಾಜಕೀಯ ವಿರೋಧಿಗಳನ್ನು ಸುಮ್ಮನಾಗಿಸಲು ಜಯಲಲಿತಾ ಹಾಗೂ ತಮಿಳುನಾಡು ಸರ್ಕಾರದಿಂದ ಮಾನನಷ್ಟ ದಾವೆ ಹೂಡಲಾಗಿತ್ತು. ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಈ ರೀತಿ ಹೇಳಿದೆ.
ಡಿಎಂಡಿಕೆ ಮುಖ್ಯಸ್ಥ, ನಟ ವಿಜಯಕಾಂತ್ ತಮ್ಮ ವಿರುದ್ಧ ತಮಿಳುನಾಡು ಸರ್ಕಾರ ಹೂಡಿದ್ದ ಮಾನನಷ್ಟ ದಾವೆಯನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಆ ವಿಚಾರಣೆ ಕೈಗೆತ್ತಿಕೊಂಡಿತು. ಕಳೆದ ಬಾರಿ ವಿಚಾರಣೆ ಸಂದರ್ಭದಲ್ಲಿ, ತಮಿಳುನಾಡು ಸರ್ಕಾರ ದಾಖಲಿಸಿರುವ ಮಾನನಷ್ಟ ಮೊಕದ್ದಮೆಗಳ ವಿವರಗಳನ್ನು ಕೋರ್ಟ್ ಕೇಳಿತ್ತು.[ಕ್ಷಮೆ ಕೇಳಿ, ಇಲ್ಲ ವಿಚಾರಣೆ ಎದುರಿಸಿ, ರಾಹುಲ್ ಗೆ ಸುಪ್ರೀಂ ತಾಕೀತು]
ಬುಧವಾರ ಪ್ರಕರಣ ಮತ್ತೆ ವಿಚಾರಣೆಗೆ ಬಂದಾಗ, 'ಟೀಕೆ ಮಾಡುವವರನ್ನು ಸುಮ್ಮನಾಗಿಸಲು ಮಾನನಷ್ಟದ ಕೇಸು ಹಾಕುವುದನ್ನು ನಿಲ್ಲಿಸಿ. ಒಳ್ಳೆ ಆಡಳಿತ ಕೊಡುವುದಕ್ಕೆ ಗಮನ ಹರಿಸಿ. ಸರ್ಕಾರಿ ಆಡಳಿತ ಯಂತ್ರವನ್ನು ರಾಜಕೀಯ ವಿರೋಧಿಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವುದಕ್ಕೆ ಬಳಸಬಾರದು' ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮುಖ್ಯಮಂತ್ರಿ ಜಯಲಲಿತಾ ಆರೋಗ್ಯ ಪರಿಸ್ಥಿತಿ ಬಗ್ಗೆ ವರದಿ ಮಾಡಿದ್ದಕ್ಕೆ ಮಾನನಷ್ಟ ದಾವೆ ಹೂಡುವುದಕ್ಕೆ ಸಾಧ್ಯವಿಲ್ಲ. ಬೇರೆ ಯಾವುದೇ ರಾಜ್ಯ ಕೂಡ ತಮಿಳುನಾಡಿನ ಥರ ಆಡಳಿತ ಯಂತ್ರವನ್ನು ದುರುಪಯೋಗ ಮಾಡಿಕೊಂಡಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪ್ರಕರಣದ ವಿಚಾರಣೆಯನ್ನು ಸೆ.22ಕ್ಕೆ ಮುಂದೂಡಿದೆ.
ನ್ಯಾ.ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ, ಪಬ್ಲಿಕ್ ಪ್ರಾಸಿಕ್ಯೂಟರ್ ಪೋಸ್ಟ್ ಆಫೀಸ್ ಥರ ಕೆಲಸ ಮಾಡಬಾರದು ಎಂದು ಹೇಳಿದೆ. ತಮಿಳುನಾಡು ಸರ್ಕಾರ ಹೂಡಿರುವ ಮಾನನಷ್ಟ ಮೊಕದ್ದಮೆಗಳ ಸಂಖ್ಯೆಯನ್ನು ಉದಾಹರಿಸಿ, ಪಬ್ಲಿಕ್ ಪ್ರಾಸಿಕ್ಯೂಟರ್ ತಮ್ಮ ಬುದ್ಧಿ ಉಪಯೋಗಿಸಬೇಕು ಎಂದು ನ್ಯಾ.ಮಿಶ್ರಾ ಹೇಳಿದ್ದಾರೆ.[ಮದುವೆ ತಡವಾಗಿದ್ದರೆ ಕಾಣಿರಿ ನಿತ್ಯ ಕಲ್ಯಾಣ ಪೆರುಮಾಳ್]
ಮಾನನಷ್ಟ ಪ್ರಕರಣದಲ್ಲಿ ಕೆಳಹಂತದ ಕೋರ್ಟ್ ನೀಡಿದ್ದ ಸಮನ್ಸ್ ಗೆ ಈ ಹಿಂದಿನ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತ್ತು. ವಿಜಯಕಾಂತ್ ಪ್ರತಿಪಕ್ಷದ ನಾಯಕರಾಗಿದ್ದಾಗ ಆವಿನ್ ಹಾಲು ಹಗರಣದ ಬಗ್ಗೆ ಮಾಡಿದ ಆರೋಪದ ವಿರುದ್ಧ ತಮಿಳುನಾಡು ಸರ್ಕಾರ ಮಾನನಷ್ಟದ ದಾವೆ ಹೂಡಿತ್ತು.