ತಮಿಳುನಾಡು ರಾಜಕೀಯದಲ್ಲಿ ಮತ್ತೊಂದು ಮಹಿಳಾ ಶಕ್ತಿಯ ಉದಯ?
ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ನೆಲೆಯೂರಲು ಬಿಡದೇ, ತಮಿಳುನಾಡಿನಲ್ಲಿ ನಡೆಯುವುದೇ ಡಿಎಂಕೆ ಮತ್ತು ಎಐಎಡಿಎಂಕೆ ಎನ್ನುವ ಎರಡು ಸ್ಥಳೀಯ ಪಕ್ಷಗಳ ಕಲರವ.
ಅದರಲ್ಲೂ ಪ್ರಮುಖವಾಗಿ ಇತ್ತೀಚಿನ ದಿನಗಳಲ್ಲಿ ದಿವಂಗತ ಸಿಎಂ ಜಯಲಲಿತಾ ಆಸ್ಪತ್ರೆಗೆ ಸೇರಿದಾಗಿನಿಂದ ಹಿಡಿದು, ನಿಧನವಾಗುವವರೆಗೆ ಮತ್ತು ನಂತರ ಅಧಿಕಾರಕ್ಕಾಗಿ ನಡೆಯತ್ತಿರುವ ರಾಜಕೀಯದಿಂದಾಗಿ ಎಐಎಡಿಎಂಕೆ ಪಕ್ಷ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತಿದೆ. (ಅಮ್ಮ ಎಂದರೆ ನನಗೆ ಪ್ರಾಣ, ಭಾವುಕರಾಗಿ ನುಡಿದ ಚಿನ್ನಮ್ಮ)
ಜಯಾ ಪರಮಾಪ್ತೆ ಶಶಿಕಲಾ ನಟರಾಜನ್, ಎಐಎಡಿಎಂಕೆ ಪಕ್ಷದ ಚುಕ್ಕಾಣಿ ಹಿಡಿದ ನಂತರ, ಪಕ್ಷದಲ್ಲಿ ತನ್ನ ಹಿಡಿತ ಬಿಗಿಗೊಳಿಸುತ್ತಿರುವ ಬೆನ್ನಲ್ಲೇ ಅವರಿಗೆ ಪೈಪೋಟಿ ನೀಡಲು ಜಯಲಲಿತಾ ಸಂಬಂಧಿಯೊಬ್ಬರು ಭರ್ಜರಿ ತಯಾರಿ ನಡೆಸುತ್ತಿದ್ದಾರೆ.
ಜಯಲಲಿತಾ ಸೋದರನ ಮಗಳು ದೀಪಾ ಜಯಕುಮಾರ್ ರಾಜಕೀಯಕ್ಕೆ ಎಂಟ್ರಿಕೊಡಲು ಸಿದ್ದತೆ ನಡೆಸುತ್ತಿರುವುದು ಈಗ ತಮಿಳುನಾಡು ರಾಜಕೀಯದಲ್ಲಿ ಗೌಪ್ಯವಾಗಿ ಉಳಿದಿಲ್ಲ.
ನಾನು ರಾಜಕೀಯಕ್ಕೆ ಬರುವುದು ನಿಶ್ಚಿತ, ಸೂಕ್ತ ಸಮಯದಲ್ಲಿ ಪಕ್ಷಕ್ಕೆ ಸೇರಿ ಎಐಎಡಿಎಂಕೆ ಪಕ್ಷವನ್ನು ಮುನ್ನಡೆಸಲಿದ್ದೇನೆ ಎಂದು ಖುದ್ದು ದೀಪಾ ಹೇಳಿಕೆ ನೀಡಿರುವುದು ಪಕ್ಷದಲ್ಲಿ ಹೊಸ ಸಂಚಲನ ಮೂಡಿಸಿದೆ. ಮುಂದೆ ಓದಿ..
ಶಶಿಕಲಾ ನಟರಾಜನ್
ಶಶಿಕಲಾ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ನಂತರ, ಪಕ್ಷದ ಕೆಲವು ಮುಖಂಡರ ಮತ್ತು ಕಾರ್ಯಕರ್ತರ ಬೇಗುದಿ ಹೆಚ್ಚಾಗುತ್ತಿದ್ದು ನೊಂದವರು ದೀಪಾ ಜಯಕುಮಾರ್ ಮನೆಬಾಗಿಲು ತಟ್ಟುತ್ತಿದ್ದಾರೆ.
ದೀಪಾ ಜಯಕುಮಾರ್
ನನ್ನ ಮತ್ತು ಜಯಲಲಿತಾ ಅವರದ್ದು ತಾಯಿ ಮಗಳ ಸಂಬಂಧ, ಅವರಿದ್ದಾಗ ನಾನು ರಾಜಕೀಯಕ್ಕೆ ಸೇರಲು ಬಯಸಿರಲಿಲ್ಲ. ಜೊತೆಗೆ ಸೋದರತ್ತೆಯ ಪ್ರಭಾವವನ್ನೂ ಬಳಸಿಕೊಳ್ಳಲಿಲ್ಲ. ಆದರೆ ಈಗಿನ ಬದಲಾದ ಪರಿಸ್ಥಿತಿಯಲ್ಲಿ ನಾನು ರಾಜಕೀಯಕ್ಕೆ ಬರದೇ ಬೇರೆ ದಾರಿಯಿಲ್ಲ ಎಂದು ದೀಪಾ ಜಯಕುಮಾರ್ ಹೇಳಿರುವುದು, ಪಕ್ಷದಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಮೇಲಾಟಕ್ಕೆ ವೇದಿಕೆ ಸಜ್ಜಾಗುವ ಲಕ್ಷಣಗಳು ಕಾಣಿಸುತ್ತಿವೆ.
ದೀಪಾ ಜಯಕುಮಾರ್ ಅಭಯ
ನಿಮಗಾಗಿ ಕೆಲಸ ಮಾಡುವ ಸಮಯ ಹತ್ತಿರ ಬರುತ್ತಿದೆ, ಜಯಲಲಿತಾ ಅವರ ಜನಪರ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುತ್ತೇನೆಂದು ಚೆನ್ನೈನ ತನ್ನ ನಿವಾಸದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ದೀಪಾ ಜಯಕುಮಾರ್ ಅಭಯ ನೀಡಿದ್ದಾಗಿದೆ.
ಜನಶಕ್ತಿ
ಶಶಿಕಲಾ ಪ್ರಧಾನ ಕಾರ್ಯದರ್ಶಿಯಾದ ನಂತರ ಕಾರ್ಯಕರ್ತರ ಮಾತಿಗೆ ಮನ್ನಣೆ ಸಿಗುತ್ತಿಲ್ಲ. ಪಕ್ಷದ ಸಿದ್ದಾಂತಕ್ಕೆ ವಿರುದ್ದವಾಗಿ ಶಶಿಕಲಾ ಆಯ್ಕೆಯಾಗಿದ್ದಾರೆ. ಜನರಿಗೆ ನನ್ನ ಶಕ್ತಿ ತೋರಿಸಲು ರಾಜ್ಯದೆಲ್ಲಡೆ ಪ್ರವಾಸ ಮಾಡಿ, ಅವರ ಜೊತೆ ಸಂವಾದ ನಡೆಸಿ ರಾಜಕೀಯಕ್ಕೆ ಬರುತ್ತೇನೆ ಎಂದು ದೀಪಾ ಜಯಕುಮಾರ್ ಹೇಳಿದ್ದಾರೆ.
ಪರ್ಯಾಯ ಮಹಿಳಾ ಶಕ್ತಿ
ಜಯಲಲಿತಾ ಅವರು ಅಪೋಲೋ ಆಸ್ಪತ್ರೆಯಲ್ಲಿದ್ದಾಗ ಅವರನ್ನು ಭೇಟಿಯಾಗಲು ಹಲವು ಬಾರಿ ದೀಪಾ ಜಯಕುಮಾರ್ ಹೋಗಿದ್ದರು. ಆದರೆ ಅವರ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ. ಇದಾದ ನಂತರ ಜಯಲಲಿತಾ ಅಂತಿಮ ಸಂಸ್ಕಾರದ ವೇಳೆ ದೀಪಾ ಕಾಣಿಸಿಕೊಂಡಿದ್ದರು. ಒಟ್ಟಿನಲ್ಲಿ ದೀಪಾ, ಎಐಎಡಿಎಂಕೆ ಪಕ್ಷದಲ್ಲಿ ಶಶಿಕಲಾಗೆ ಪರ್ಯಾಯ ಮಹಿಳಾ ಶಕ್ತಿಯಾಗಿ ಬೆಳೆಯಲಿದ್ದಾರೆಯೇ ಎನ್ನುವುದು ಕುತೂಹಲಕ್ಕೆಡೆ ಮಾಡಿಕೊಟ್ಟಿದೆ.