ಅತ್ತ ಜೈಲಿನಲ್ಲಿ ಲಾಲೂ, ಇತ್ತ ಪುತ್ರರ ನಡುವೆ ಕಿರಿಕ್ : ಅಡ್ವಾಂಟೇಜ್ ಬಿಜೆಪಿ?
Recommended Video

ಮೇವು ಹಗರಣದಲ್ಲಿನ ಭ್ರಷ್ಟಾಚಾರದಿಂದ ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಜೈಲು ಪಾಲಾಗಿದ್ದರೆ, ಇತ್ತ ಅವರಿಬ್ಬರ ಪುತ್ರರು ಮನಸ್ತಾಪ ಮಾಡಿಕೊಂಡು ಕೂತಿದ್ದಾರೆ. ಅಲ್ಲಿಗೆ, ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ, ಸಾರ್ವತ್ರಿಕ ಚುನಾವಣೆಗೆ ಮುನ್ನ ಪೂರಕ ವಾತಾವರಣ ಸೃಷ್ಟಿಯಾಗಿದೆ.
ಲಾಲೂ ಪುತ್ರರಾದ ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ಯಾದವ್ ಇಬ್ಬರೂ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಯುವಕರಾಗಿರುವ ಇಬ್ಬರೂ, ತಂದೆ ಜೈಲು ಪಾಲಾದ ನಂತರ, ಒಬ್ಬರು ಇನ್ನೊಬ್ಬರನ್ನು ತುಳಿಯಲು ನೋಡುತ್ತಿದ್ದಾರೆ ಎಂದು ಕಿರಿಕ್ ಮಾಡಿಕೊಂಡಿದ್ದಾರೆ.
ತೇಜಸ್ವಿ ಮತ್ತು ತೇಜ್ ಪ್ರತಾಪ್ ಇಬ್ಬರಿಗೂ ಹಿಂಬಾಲಕರ ಬರವಿಲ್ಲದ ಕಾರಣ ಮತ್ತು ಕಾರ್ಯಕರ್ತರು ಇದಕ್ಕೆ ಇನ್ನಷ್ಟು ತುಪ್ಪ ಸುರಿಯುತ್ತಿರುವುದರಿಂದ, ನಾಲ್ಕು ಗೋಡೆಯ ನಡುವೆ ಬಗೆಹರಿಯಬಹುದಾದ ಸಮಸ್ಯೆ ಈಗ ದೊಡ್ಡ ವಿಷಯವಾಗಿ ರಾಷ್ಟ್ರ ಮಟ್ಟದಲ್ಲಿ ಚರ್ಚೆಯ ವಿಷಯವಾಗಿದೆ.
ನಿತೀಶ್ - ಲಾಲೂ ಮೈತ್ರಿಕೂಟದ ಸರಕಾರ ಬಿಹಾರದಲ್ಲಿ ಅಸ್ತಿತ್ವದಲ್ಲಿದ್ದ ಅವಧಿಯಲ್ಲಿ ಆರೋಗ್ಯ ಸಚಿವರಾಗಿದ್ದ ತೇಜ್ ಪ್ರತಾಪ್ ಯಾದವ್, ತಮ್ಮ ಸಹೋದರ ತೇಜಸ್ವಿ ಯಾದವ್ ಅವರಿಗೆ ನೀಡಿರುವ 'ವಾರ್ನಿಂಗ್' ಸದ್ಯ ಆರ್ಜೆಡಿ ಪಕ್ಷದೊಳಗೆ ಬಿರುಗಾಳಿ ಎಬ್ಬಿಸಿದೆ.
ನಮ್ಮಿಬ್ಬರ ನಡುವೆ ಮೂರನೆಯವರು ಮೂಗು ತೂರಿಸಲು ಪ್ರಯತ್ನಿಸುತ್ತಿದ್ದಾರೆ, ರಾಜಕೀಯವಾಗಿ ಮೇಲೆ ಬರಲು ಅಡ್ಡಿಪಡಿಸುತ್ತಿದ್ದೇನೆ ಎನ್ನುವ ಆರೋಪ ನಿರಾಧಾರ ಎಂದು ತೇಜ್ ಪ್ರತಾಪ್ ಯಾದವ್ ಹೇಳಿರುವುದು, ಸಹೋದರರ ನಡುವೆ 'ಪವರ್ ಪಾಲಿಟಿಕ್ಸ್' ಆರಂಭವಾಗಿದೆ ಎಂದೇ ಹೇಳಲಾಗುತ್ತಿದೆ. ಮುಂದೆ ಓದಿ..

ಸಹೋದರರಿಬ್ಬರ ನಡುವೆ ಮುಸುಕಿನ ಗುದ್ದಾಟ ಆರಂಭ
ತಂದೆ ಲಾಲೂ ಜೈಲು ಸೇರಿದ ನಂತರ ಪಕ್ಷದ ಮೇಲೆ ಹಿಡಿತ ಸಾಧಿಸಲು ಸಹೋದರರಿಬ್ಬರ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ ಎನ್ನುವುದು ಕಾರ್ಯಕರ್ತರ ವಲಯದಲ್ಲಿ ಕೇಳಿಬರುತ್ತಿರುವ ಮಾತು. ಅಣ್ಣತಮ್ಮಂದಿರ ನಡುವಿನ ಕಿರಿಕ್, ಕಾರ್ಯಕರ್ತರ ವಲಯದಲ್ಲೂ ಮೇಲಾಟಕ್ಕೆ ಕಾರಣವಾಗುತ್ತಿರುವುದು, ಆರ್ಜೆಡಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ. ಲಾಲೂ ಅನುಪಸ್ಥಿತಿಯಲ್ಲಿನ ಈ ಬೆಳವಣಿಗೆ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ.

ಪಕ್ಷದಲ್ಲಿ ಕೆಲವರು ಅಶಾಂತಿ ಮೂಡಿಸಲು ಯತ್ನಿಸುತ್ತಿದ್ದಾರೆ
ತೇಜಸ್ವಿ ಯಾದವ್ ಅವರ ಹೆಸರನ್ನು ಹೇಳಿಕೊಂಡು ಪಕ್ಷದಲ್ಲಿ ಕೆಲವರು ಅಶಾಂತಿ ಮೂಡಿಸಲು ಯತ್ನಿಸುತ್ತಿದ್ದಾರೆ. ರಾಜೇಂದ್ರ ಪಾಸ್ವಾನ್ ಅವರಂತಹ ನಾಯಕರು ನಮ್ಮ ಪಕ್ಷಕ್ಕೆ ಆಸ್ತಿಯಿದ್ದಂತೆ, ನಾನು ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕೆಂದು ಒತ್ತಡ ಹೇರಿದ ನಂತರ ಅದನ್ನು ಪರಿಗಣಿಸಲಾಯಿತು ಎಂದು ತೇಜ್ ಪ್ರತಾಪ್ ಕಿಡಿಕಾರಿರುವುದು, ಸಹೋದರರ ನಡುವಿನ ಶೀತಲ ಸಮರವನ್ನು ಬಯಲು ಮಾಡಿದೆ.

ನಾನು ಮತ್ತು ನನ್ನ ಸಹೋದರನ ನಡುವೆ ಏನೂ ಸಮಸ್ಯೆಯಿಲ್ಲ
ತಂದೆ ಜೈಲಿನಲ್ಲಿ ಇರುವ ಈ ಹೊತ್ತಿನಲ್ಲಿ ಪಕ್ಷಕ್ಕೆ ಹಾನಿಮಾಡಲೆಂದೇ ಕೆಲವರು ಪ್ರಯತ್ನಿಸುತ್ತಿದ್ದಾರೆ. ಅವರ ಮಾತಿಗೆ ಪಕ್ಷದೊಳಗೆ ಹೆಚ್ಚಿನ ಮನ್ನಣೆ ಸಿಗುತ್ತಿರುವುದು ಒಳ್ಳೆಯದಲ್ಲ. ನಾನು ಮತ್ತು ನನ್ನ ಸಹೋದರನ ನಡುವೆ ಏನೂ ಸಮಸ್ಯೆಯಿಲ್ಲ. ಅವನು ನನ್ನ ಹೃದಯಕ್ಕೆ ಅತ್ಯಂತ ಆಪ್ತನಾದವನು ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.

ನಿತೀಶ್ ಕುಮಾರ್ - ಲಾಲೂ ಪ್ರಸಾದ್ ಯಾದವ್
ನಿತೀಶ್ ಕುಮಾರ್ - ಲಾಲೂ ಪ್ರಸಾದ್ ಯಾದವ್ ಒಟ್ಟಾಗಿ ಮೋದಿಯನ್ನು ಮಣಿಸಲು ಬಿಹಾರ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಬಿಜೆಪಿಗೆ ಸೋಲಿನ ರುಚಿ ತೋರಿಸಿದ್ದರು. ಆದರೆ, ಲಾಲೂ ಪುತ್ರನ ಭ್ರಷ್ಟಾಚಾರದ ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ನಿತೀಶ್ ರಾಜೀನಾಮೆ ನೀಡಿದ್ದರು. ನಿತೀಶ್ ಕುಮಾರ್ ಅವರನ್ನು ಬಿಜೆಪಿ ಬೆಂಬಲಿಸಿದ ನಂತರ, ಮತ್ತೆ ಜೆಡಿಯು ಪಕ್ಷ ಅಧಿಕಾರಕ್ಕೆ ಬಂತು.

ಲಾಲೂ ಪುತ್ರರ ಮುಸುಕಿನ ಗುದ್ದಾಟ ಬಿಜೆಪಿಗೆ ಲಾಭ
ಇತ್ತೀಚೆಗೆ ನಡೆದ ಅಸೆಂಬ್ಲಿ ಉಪಚುನಾವಣೆಯಲ್ಲಿ ಆರ್ಜೆಡಿ - ಕಾಂಗ್ರೆಸ್ ಜಂಟಿಯಾಗಿ ಸ್ಪರ್ಧಿಸಿ, ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಯನ್ನು ಸೋಲಿಸಿದ್ದರು. ಇನ್ನೇನು ಒಂದು ವರ್ಷದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿರುವುದರಿಂದ, ಲಾಲೂ ಪುತ್ರರ ಮುಸುಕಿನ ಗುದ್ದಾಟ ಬಿಜೆಪಿಗೆ ಲಾಭವಾಗುವ ಸಾಧ್ಯತೆಯಿದೆ. ಬಿಹಾರದಲ್ಲಿ ಒಟ್ಟು ನಲವತ್ತು ಲೋಕಸಭಾ ಕ್ಷೇತ್ರವಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ 24 ಕ್ಷೇತ್ರವನ್ನು ಗೆದ್ದಿತ್ತು.












Click it and Unblock the Notifications