Manipur Violence: 50 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ: ಶಾಂತಿ ಸಮಿತಿಯಲ್ಲಿ ಸಿಎಂ ಬಿರೇನ್ ಸಿಂಗ್ ಸೇರ್ಪಡೆಗೆ ಕುಕಿ ಸಮುದಾಯ
ಮಣಿಪುರದಲ್ಲಿ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಮತ್ತೆ ಗಲಭೆ ಉಂಟಾಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ. ಹಿಂಸಾಚಾರದ ಪರಿಣಾಮ ರಾಜ್ಯದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದೆ. ಮಣಿಪುರ ಹಿಂಸಾಚಾರ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಸರ್ಕಾರ ಶಾಂತಿ ಸಮಿತಿಯನ್ನು ರಚನೆ ಮಾಡಿದೆ.
ಆದರೆ ಕೇಂದ್ರ ಸರ್ಕಾರ ರಚಿಸಿರುವ ಶಾಂತಿ ಸಮಿತಿ ವಿರುದ್ಧ ಕುಕಿ ಸಮುದಾಯ ವಿರೋಧ ವ್ಯಕ್ತಪಡಿಸಿದ್ದು, ಸಮಿತಿಯನ್ನು ಬಹಿಷ್ಕರಿಸುವುದಾಗಿ ಕುಕಿ ಸಮುದಾಯದ ಪ್ರತಿನಿಧಿಗಳು ಹೇಳಿದ್ದಾರೆ. ಸಮಿತಿಯಲ್ಲಿ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಮತ್ತು ಅವರ ಬೆಂಬಲಿಗರು ಇರುವುದಕ್ಕೆ ಕುಕೀ ಸಮುದಾಯದ ಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಅವರನ್ನು ಸಮಿತಿಗೆ ಸೇರಿಸಲು ತಮ್ಮ ಒಪ್ಪಿಗೆ ಪಡೆದುಕೊಂಡಿಲ್ಲ, ಕೇಂದ್ರ ಸರ್ಕಾರ ಮಾತುಕತೆಗೆ ಅನುಕೂಲವಾಗುವಂತೆ ಸಮಿತಿ ರಚನೆ ಮಾಡಬೇಕು ಎಂದು ಕುಕಿ ಸಮುದಾಯದ ಪ್ರತಿನಿಧಿಗಳು ಒತ್ತಾಯಿಸಿದ್ದಾರೆ.

ಗೃಹ ವ್ಯವಹಾರಗಳ ಸಚಿವಾಲಯ ಜೂನ್ 10 ರಂದು ಮಣಿಪುರದಲ್ಲಿ ವಿವಿಧ ಜನಾಂಗೀಯ ಗುಂಪುಗಳ ನಡುವೆ ಶಾಂತಿ ಮಾತುಕತೆ ನಡೆಸಲು ಸಮಿತಿಯನ್ನು ರಚನೆ ಮಾಡಿತ್ತು. ಸಿಎಂ ಬಿರೇನ್ ಸಿಂಗ್ ಒಳಗೊಂಡಂತೆ 51 ಸದಸ್ಯರ ಸಮಿತಿಗೆ ಗವರ್ನರ್ ಅನುಸೂಯಾ ಉಯ್ಕೆ ಅಧ್ಯಕ್ಷರಾಗಿದ್ದಾರೆ.
ಮಾತುಕತೆಗೆ ಕುಳಿತುಕೊಳ್ಳಲು ಸಾಧ್ಯವಿಲ್ಲ
ನಮ್ಮ ಒಪ್ಪಿಗೆ ಇಲ್ಲದೆ ಸಿಎಂ ಬಿರೇನ್ ಸಿಂಗ್ ಮತ್ತು ಅವರ ಬೆಂಬಲಿಗರನ್ನು ಸಮಿತಿಗೆ ಸೇರಿಸಲಾಗಿದೆ ಎಂದು ಕುಕಿ ಸಮುದಾಯದ ಪ್ರತಿನಿಧಿಗಳು ಸಿಟ್ಟಾಗಿದ್ದಾರೆ. ಸಮಿತಿ ಸದಸ್ಯ, ಕುಕಿ ಇನ್ಪಿ ಮಣಿಪುರ (ಕೆಐಎಂ) ಅಧ್ಯಕ್ಷ ಅಜಂಗ್ ಖೊಂಗ್ಸಾಯ್ ಅವರು, ಮಣಿಪುರ ಸರ್ಕಾರದ ಜೊತೆ ಶಾಂತಿ ಮಾತುಕತೆ ನಡೆಸಲು ಸಾಧ್ಯವಾಗಲ್ಲ ಎಂದು ಹೇಳಿದ್ದಾರೆ.
"ಸಮಿತಿಯಲ್ಲಿ COCOMI (ಮಣಿಪುರ ಸಮಗ್ರತೆಯ ಸಮನ್ವಯ ಸಮಿತಿ, ಇಂಫಾಲ್ನ ನಾಗರಿಕ ಸಮಾಜದ ಗುಂಪು) ಇದೆ, ಅದು ಕುಕಿಗಳ ವಿರುದ್ಧ ಯುದ್ಧವನ್ನು ಘೋಷಿಸಿದೆ. ಆದರೆ ನಾವು ಶಾಂತಿಯನ್ನು ಬಯಸುತ್ತೇವೆ. ಹಿಂಸಾಚಾರ ಮುಂದುವರೆಯುತ್ತಿರುವ ಸಂದರ್ಭದಲ್ಲಿ ನಾವು ಮಣಿಪುರ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಸಾಧ್ಯವಿಲ್ಲ" ಎಂದು ಖೊಂಗ್ಸಾಯ್ ದಿ ಹಿಂದೂಗೆ ತಿಳಿಸಿದ್ದಾರೆ.
ನಮ್ಮನ್ನು ವಿದೇಶಿಯರು ಎನ್ನುತ್ತಾರೆ
ಭಾರತೀಯ ರಕ್ಷಣಾ ಖಾತೆಗಳ ಸೇವೆ (IDAS) ನಿವೃತ್ತ ಅಧಿಕಾರಿ ಲುಂಗ್ಡಿಮ್ ಸಹ ತಮ್ಮ ಒಪ್ಪಿಗೆ ಪಡೆಯದೇ ಸಮಿತಿಯಲ್ಲಿ ಹೆಸರು ಸೇರಿಸಲಾಗಿದೆ ಎಂದು ಹೇಳಿದ್ದಾರೆ. "2016 ರಲ್ಲಿ, ಶಸ್ತ್ರಾಸ್ತ್ರ ಒಪ್ಪಂದವನ್ನು ಅಂತಿಮಗೊಳಿಸಲು ನನ್ನನ್ನು ರಷ್ಯಾಕ್ಕೆ ಕಳುಹಿಸಲಾಯಿತು. 37 ವರ್ಷಗಳ ಕಾಲ ಸರ್ಕಾರದಲ್ಲಿ ಸೇವೆ ಸಲ್ಲಿಸಿದ ನಮ್ಮನ್ನು ಮುಖ್ಯಮಂತ್ರಿಗಳು ವಿದೇಶಿಗರು ಎಂದು ಕರೆಯುತ್ತಿದ್ದಾರೆ. ಸಮಿತಿಯ ನೇತೃತ್ವವನ್ನು ಕೇಂದ್ರ ಸರ್ಕಾರದ ಅಧಿಕಾರಿಗಳು ವಹಿಸಬೇಕು, ಇಲ್ಲದಿದ್ದರೆ ಅದು ಫಲಪ್ರದವಾಗುವುದಿಲ್ಲ. ಈ ಸಮಸ್ಯೆಯು ಒಂದು ತಿಂಗಳಿಗಿಂತ ಹೆಚ್ಚು ಕಾಲ ಉಳಿದುಕೊಂಡಿರುವುದು ನಾಚಿಕೆಗೇಡಿನ ಸಂಗತಿ," ಎಂದು ಲುಂಗ್ಡಿಮ್ ಹೇಳಿದರು.
ಸಮಿತಿಯಲ್ಲಿ ಮಣಿಪುರದ ಮಾಜಿ ಪೊಲೀಸ್ ಮಹಾನಿರ್ದೇಶಕ ಪಿ. ಡೌಂಗೆಲ್ ಅವರನ್ನು ವಿಶೇಷ ಕರ್ತವ್ಯದ ಅಧಿಕಾರಿಯಾಗಿ ವರ್ಗಾಯಿಸಲಾಯಿದೆ. ಜೂನ್ 1 ರಂದು ರಾತ್ರೋರಾತ್ರಿ ಈ ಹುದ್ದೆಯನ್ನು ರಚಿಸಲಾಗಿದೆ. ಮೇ 3 ರಂದು ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಸ್ಫೋಟಗೊಂಡ ನಂತರ. ಈ ತಿಂಗಳು ನಿವೃತ್ತರಾಗಲಿರುವ ಕುಕಿ ಸಮುದಾಯದ ಡೌಂಗೆಲ್ ಅವರನ್ನು ತೆರೆಮರೆಗೆ ಸರಿಸಲಾಗಿದೆ.
ಇಂಫಾಲ್ನಲ್ಲಿ ನೆಲೆಸಿರುವ ಆಲ್ ಮಣಿಪುರ ಯುನೈಟೆಡ್ ಕ್ಲಬ್ಸ್ ಆರ್ಗನೈಸೇಶನ್ (AMUCO) ಅಧ್ಯಕ್ಷ ನಂಡೋ ಲುವಾಂಗ್, ಪ್ಯಾನಲ್ನಲ್ಲಿ ತನ್ನ ಹೆಸರನ್ನು ಸೇರಿಸಿರುವ ಬಗ್ಗೆ ತನಗೆ ತಿಳಿದಿಲ್ಲ ಆದರೆ ಇದು ಸಕಾರಾತ್ಮಕ ಹೆಜ್ಜೆ ಎಂದು ಹೇಳಿದರು. ಗುಂಪಿನ ಇತರ ಸದಸ್ಯರೊಂದಿಗೆ ಚರ್ಚಿಸಿದ ನಂತರ ಸಭೆಗೆ ಹಾಜರಾಗುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಖಚಿತ ಪಡಿಸಿದ್ದಾರೆ.
50 ಸಾವಿರ ಜನರ ಸ್ಥಳಾಂತರ
ಮೇ 3 ರಿಂದ ಕುಕಿ ಮತ್ತು ಮೈತೆಯಿ ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸುಮಾರು 50,000 ಜನರು ಸ್ಥಳಾಂತರಗೊಂಡಿದ್ದಾರೆ ಮತ್ತು ಪೊಲೀಸ್ ಶಸ್ತ್ರಾಸ್ತ್ರಗಳಿಂದ 4,000 ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಲಾಗಿದೆ ಎಂದು ವರದಿಯಾಗಿದೆ. ಲೂಟಿಯಾದ ಶಸ್ತ್ರಾಸ್ತ್ರಗಳನ್ನು ಬಹುತೇಖ ವಾಪಸ್ ಪಡೆಯಲಾಗಿದೆ.












Click it and Unblock the Notifications