ಖಲಿಸ್ತಾನ್ ಬೇಡಿಕೆ: ಭಾರತ ವಿರೋಧಿ ಚಟುವಟಿಕೆ ತಡೆಯಲು ಕೆನಡಾಗೆ ಮನವಿ
ನವದೆಹಲಿ, ನ.03: ಖಲಿಸ್ತಾನ್ಗಾಗಿ ತಮ್ಮ ಬೇಡಿಕೆಯನ್ನು ಮುಂದಿಟ್ಟುಕೊಂಡು ಕೆಲವು ಭಾರತ ವಿರೋಧಿ ಶಕ್ತಿಗಳು ಕೆನಡಾದಲ್ಲಿ ಜನಾಭಿಪ್ರಾಯ ಸಂಗ್ರಹಿಸಲು ಯೋಜಿಸುತ್ತಿರುವ ಬಗ್ಗೆ ಭಾರತ ಗುರುವಾರ ತನ್ನ ಕಳವಳ ವ್ಯಕ್ತಪಡಿಸಿದೆ.
ಕೆನಡಾದಲ್ಲಿ ನೆಲೆಗೊಂಡಿರುವ ವ್ಯಕ್ತಿಗಳು ಮತ್ತು ಗುಂಪುಗಳಿಂದ ನಡೆಯುತ್ತಿರುವ ಭಾರತ ವಿರೋಧಿ ಚಟುವಟಿಕೆಗಳನ್ನು ತಡೆಯುವಂತೆ ಆ ದೇಶಕ್ಕೆ ಕರೆ ನೀಡಿದೆ.
ಭಾರತೀಯ ಕಾನೂನುಗಳ ಅಡಿಯಲ್ಲಿ ಭಯೋತ್ಪಾದಕರೆಂದು ಘೋಷಿಸಲ್ಪಟ್ಟ ವ್ಯಕ್ತಿಗಳು ಮತ್ತು ಘಟಕಗಳನ್ನು ತನ್ನ ದೇಶದ ಕಾನೂನುಗಳ ಅಡಿಯಲ್ಲಿ ಭಯೋತ್ಪಾದಕರು ಎಂದು ಘೋಷಿಸುವಂತೆ ಕೆನಡಾವನ್ನು ಒತ್ತಾಯಿಸಿದೆ.

ಕೆನಡಾದಲ್ಲಿ ಖಲಿಸ್ತಾನ್ ಜನಾಭಿಪ್ರಾಯ ಸಂಗ್ರಹದ ಬಗ್ಗೆ ಮಾತನಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ವಕ್ತಾರ ಅರಿಂದಮ್ ಬಾಗ್ಚಿ, "ನಾವು ನಮ್ಮ ನಿಲುವನ್ನು ಒಂದೆರಡು ಬಾರಿ ಸ್ಪಷ್ಟಪಡಿಸಿದ್ದೇವೆ. ಖಲಿಸ್ತಾನ್ ಜನಾಭಿಪ್ರಾಯ ಸಂಗ್ರಹಣೆ ಎಂದು ಕರೆಯುವ ಭಾರತ ವಿರೋಧಿ ಶಕ್ತಿಗಳ ಪ್ರಯತ್ನಗಳ ಬಗ್ಗೆ ನಮ್ಮ ನಿಲುವು ಎಲ್ಲರಿಗೂ ತಿಳಿದಿದೆ. ಇದನ್ನು ನವದೆಹಲಿ ಮತ್ತು ಕೆನಡಾದಲ್ಲಿ ಕೆನಡಾ ಸರ್ಕಾರಕ್ಕೆ ತಿಳಿಸಲಾಗಿದೆ. ಕೆನಡಾ ಸರ್ಕಾರವು ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುತ್ತದೆ" ಎಂದಿದ್ದಾರೆ.
"ಇಲ್ಲಿನ ಕೆನಡಾದ ಹೈಕಮಿಷನರ್ ಮತ್ತು ಅವರ ಉಪ ವಿದೇಶಾಂಗ ಸಚಿವರು ಈ ವಾರದ ಆರಂಭದಲ್ಲಿ ಪ್ರತ್ಯೇಕ ಹೇಳಿಕೆಗಳಲ್ಲಿ ನಮ್ಮ ನಿಲುವನ್ನು ಪುನರುಚ್ಚರಿಸಿದ್ದಾರೆ. ಆದರೂ, ನಾವು ಮೊದಲೇ ಹೇಳಿದ್ದನ್ನು ನಾನು ಮತ್ತೆ ಪುನರುಚ್ಚರಿಸುತ್ತೇನೆ. ದೇಶವಿರೋಧಿ ಅಂಶಗಳ ರಾಜಕೀಯ ಪ್ರೇರಿತ ಕಸರತ್ತುಗಳು ಸ್ನೇಹಪರ ದೇಶದಲ್ಲಿ ನಡೆಯಲು ಅವಕಾಶ ನೀಡುವುದಿಲ್ಲ. ಈ ನಿಟ್ಟಿನಲ್ಲಿ ನಡೆದ ಹಿಂಸಾಚಾರದ ಇತಿಹಾಸವನ್ನು ನಾವೆಲ್ಲಾ ತಿಳಿದಿದ್ದೇವೆ" ಎಂದು ಹೇಳಿದ್ದಾರೆ.
"ನಾವು ಈ ವಿಷಯದಲ್ಲಿ ಕೆನಡಾ ಸರ್ಕಾರದ ಮೇಲೆ ಒತ್ತಡ ಹೇರುವುದನ್ನು ಮುಂದುವರಿಸುತ್ತೇವೆ. ಅವರ ದೇಶದಲ್ಲಿರುವ ವ್ಯಕ್ತಿಗಳು ಮತ್ತು ಗುಂಪುಗಳಿಂದ ಭಾರತ ವಿರೋಧಿ ಚಟುವಟಿಕೆಗಳನ್ನು ತಡೆಗಟ್ಟಲು ಮತ್ತು ನಮ್ಮ ಕಾನೂನುಗಳ ಅಡಿಯಲ್ಲಿ ಭಯೋತ್ಪಾದಕರು ಎಂದು ಘೋಷಿಸಲ್ಪಟ್ಟ ವ್ಯಕ್ತಿಗಳು ಮತ್ತು ಘಟಕಗಳನ್ನು ಅವರ ಕಾನೂನುಗಳ ಅಡಿಯಲ್ಲಿ ಭಯೋತ್ಪಾದಕರು ಎಂದು ಹೆಸರಿಸಲು ಅವರಿಗೆ ಕರೆ ನೀಡುತ್ತೇವೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿ ಹೇಳಿದ್ದಾರೆ.
ಸಿಖ್ಸ್ ಫಾರ್ ಜಸ್ಟಿಸ್ (SFJ) ನವೆಂಬರ್ 6 ರಂದು ಟೊರೊಂಟೊ ಬಳಿಯ ಮಿಸ್ಸಿಸ್ಸೌಗಾದಲ್ಲಿ ಜನಾಭಿಪ್ರಾಯ ಸಂಗ್ರಹಣೆಯನ್ನು ನಡೆಸಿದೆ. ಇದಕ್ಕೂ ಮೊದಲು ಸೆಪ್ಟೆಂಬರ್ 18 ರಂದು ಬ್ರಾಂಪ್ಟನ್ನಲ್ಲಿ ಜನಾಭಿಪ್ರಾಯ ಸಂಗ್ರಹಿಸಲಾಗಿತ್ತು.












Click it and Unblock the Notifications