ಲೈಂಗಿಕ ಕಿರುಕುಳ: ಕೇರಳದ 'ಮಾತೃಭೂಮಿ' ಚಾನಲ್ ಪತ್ರಕರ್ತನ ಬಂಧನ
ತಿರುವನಂತಪುರಂ, ಜುಲೈ 26: ಕೇರಳದ ಪ್ರಖ್ಯಾತ ಸುದ್ದಿ ವಾಹಿನಿ 'ಮಾತೃಭೂಮಿ'ಯ ಹಿರಿಯ ಪತ್ರಕರ್ತರೊಬ್ಬರನ್ನು ಕಿರಿಯ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧಿಸಲಾಗಿದೆ.
ಮಾತೃಭೂಮಿ ವಾಹಿನಿಯಲ್ಲಿ ಹಿರಿಯ ಸುದ್ದಿ ಸಂಪಾದಕರಾಗಿದ್ದ ಅಮಲ್ ವಿಷ್ಣುದಾಸ್ ವಿರುದ್ಧ ಮಹಿಳಾ ಸಿಬ್ಬಂದಿಯೊಬ್ಬರು ಮಂಗಳವಾರ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಬುಧವಾರ ಬೆಳಿಗ್ಗೆ ತಿರುವನಂತಪುರಂ ನಗರ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಅಮಲ್ ವಿಷ್ಣುದಾಸ್ ವಿರುದ್ಧ ಐಪಿಸಿ ಸೆಕ್ಷನ್ 376 (ರೇಪ್), 377 ಮತ್ತು 506ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಮಹಿಳಾ ಸಹೋದ್ಯೋಗಿ ಮತ್ತು ಅಮಲ್ ವಿಷ್ಣುದಾಸ್ ಕಳೆದ ಒಂದು ವರ್ಷಗಳಿಂದ ಸಂಬಂಧದಲ್ಲಿದ್ದರು. 'ಮುದುವೆಯಾಗುವುದಾಗಿ ಹೇಳಿ ವಿಷ್ಣುದಾಸ್ ತನ್ನನ್ನು ಬಳಸಿಕೊಂಡು ವಂಚಿಸಿದ್ದಾನೆ' ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ಅಮಲ್ ಗೆ ಈ ಹಿಂದೆಯೇ ಮದುವೆಯಾಗಿತ್ತು. ತನಗೆ ವಿಚ್ಛೇದನ ಸಿಕ್ಕಿದ ಬಳಿಕ ತಾನು ನಿನ್ನನ್ನು ಮದುವೆಯಾಗುವುದಾಗಿ ಅಮಲ್ ಯುವತಿಗೆ ಹೇಳಿದ್ದರು ಎನ್ನಲಾಗಿದೆ. ಆದರೆ ಅಮಲ್ ಗೆ ವಿಚ್ಛೇದನ ಸಿಕ್ಕಿದ ಬಳಿಕವೂ ಮದುವೆಯಾಗಲು ನಿರಾಕರಿಸಿದ್ದಾರೆ. ಹೀಗಾಗಿ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಇದರ ಜತೆಗೆ 'ತಮ್ಮ ಸಂಬಂಧ ಬಹಿರಂಗಪಡಿಸಿದರೆ ತಾನು ನಿನ್ನ ಭವಿಷ್ಯವನ್ನೇ ಮುಗಿಸುತ್ತೇನೆ' ಎಂದು ಅಮಲ್ ವಿಷ್ಣುದಾಸ್ ಬೆದರಿಕೆಯನ್ನೂ ಹಾಕಿದ್ದರಂತೆ. ಜತೆಗೆ ತನ್ನಿಂದ ಹಣವನ್ನೂ ಪಡೆದುಕೊಂಡಿರುವುದಾಗಿ ಯುವತಿ ದೂರಿದ್ದಾರೆ.
ಇದೇ ವೇಳೆ ಮಾತೃಭೂಮಿ ಸಂಸ್ಥೆ ಅಮಲ್ ವಿಷ್ಣುದಾಸ್ ರನ್ನು ಕೆಲದಿಂದ ವಜಾ ಮಾಡಿದೆ. ಇತ್ತೀಚೆಗೆ ಇದೇ ಮಾತೃಭೂಮಿ ಸಂಸ್ಥೆ ಮಹಿಳಾ ಉದ್ಯೋಗಿಗಳಿಗೆ 'ಪೀರಿಯಡ್ ಲೀವ್' ಸೌಲಭ್ಯ ನೀಡಿ ಮಾದರಿಯಾಗಿತ್ತು.