ಕುಲಪತಿಗಳ ರಾಜೀನಾಮೆ ಕೇಳಿದ ಕೇರಳ ರಾಜ್ಯಪಾಲ; ಕಾನೂನು ಸಚಿವರ ತಿರುಗೇಟು
ತಿರುವನಂತಪುರಂ, ಅ. 24: ಕೇರಳದ ಒಂಬತ್ತು ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳ ರಾಜೀನಾಮೆ ಕೇಳಿದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿರುದ್ಧ ಕೇರಳ ಕಾನೂನು ಸಚಿವ ಪಿ ರಾಜೀವ್ ತಿರುಗೇಟು ನೀಡಿದ್ದಾರೆ.
ವಿಶ್ವವಿದ್ಯಾನಿಲಯ ಅನುದಾನ ಆಯೋಗದ (ಯುಜಿಸಿ) ಯಾವುದೇ ನಿಯಂತ್ರಣ ಅಥವಾ ಸಂವಿಧಾನವು ಕುಲಪತಿಗಳು ರಾಜ್ಯಪಾಲರಾಗಿರಬೇಕು ಎಂದು ಹೇಳುವುದಿಲ್ಲ ಎಂದು ಸಚಿವ ಪಿ ರಾಜೀವ್ ಹೇಳಿದ್ದಾರೆ.
ಕೇರಳ ನರಬಲಿ: ಹತ್ಯೆಯಾದ ಮಹಿಳೆಯರ ಬಗ್ಗೆ ಮಕ್ಕಳು ನೀಡಿದ ಮಾಹಿತಿ ಇಲ್ಲಿದೆ
ಈ ಹಿಂದೆ ಕೇರಳದ ವಿವಿಧ ವಿಶ್ವವಿದ್ಯಾನಿಲಯಗಳಿಗೆ ವಿಸಿ ನೇಮಕಾತಿ ವಿಚಾರವನ್ನು ಪ್ರಸ್ತಾಪಿಸಿದ ಗವರ್ನರ್ ಆರಿಫ್ ಮೊಹಮ್ಮದ್ ಖಾನ್, ಉಪಕುಲಪತಿಗಳ ನೇಮಕವು ರಾಜ್ಯಪಾಲರ ಜವಾಬ್ದಾರಿ ಎಂದು ಸುಪ್ರೀಂ ಕೋರ್ಟ್ ಸ್ವತಃ ಸ್ಪಷ್ಟಪಡಿಸಿದೆ ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಾಜೀವ್, "ರಾಜ್ಯಪಾಲರು ಮತ್ತು ಕುಲಪತಿಗಳು ಇಬ್ಬರು ಬೇರೆ ಬೇರೆ. ರಾಜ್ಯಪಾಲರದ್ದು ಸಾಂವಿಧಾನಿಕ ಸ್ಥಾನ. ಕುಲಪತಿಗಳದ್ದು ಶಾಸನಬದ್ಧ ಸ್ಥಾನ. ಕುಲಪತಿ ಹುದ್ದೆಯು ಶಾಸಕಾಂಗವು ಅಂಗೀಕರಿಸಿದ ಕಾನೂನುಗಳಿಂದ ಪ್ರದಾನ ಮಾಡುವ ಅಧಿಕಾರವನ್ನು ಮಾತ್ರ ಹೊಂದಿದೆ. ಭಾರತದ ಸಂವಿಧಾನದಲ್ಲಿ ಎಲ್ಲಿಯೂ ಕುಲಪತಿಯೇ ರಾಜ್ಯಪಾಲರಾಗಿರಬೇಕು ಎಂದು ಹೇಳಿಲ್ಲ. ವಿಶ್ವವಿದ್ಯಾನಿಲಯ ಅನುದಾನ ಆಯೋಗದ (ಯುಜಿಸಿ) ಯಾವುದೇ ನಿಯಮಾವಳಿಯಲ್ಲಿ ಕುಲಪತಿಗಳು ರಾಜ್ಯಪಾಲರಾಗಿರಬೇಕು ಎಂದು ಎಲ್ಲಿಯೂ ಹೇಳಿಲ್ಲ" ಎಂದು ತಿರುಗೇಟು ನೀಡಿದ್ದಾರೆ.
ಕೇರಳ ಡ್ರಗ್ಸ್ ರಾಜಧಾನಿಯಾಗಿ ಬದಲಾಗುತ್ತಿದೆ ಎಂದು ಪಂಜಾಬ್ ಮತ್ತು ಕೇರಳವನ್ನು ಹೋಲಿಸಿರುವ ರಾಜ್ಯಪಾಲರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, "ಕೆಲವರು ಕೇರಳದ ಮೇಲೆ ಯುದ್ಧ ಘೋಷಿಸಿದ್ದಾರೆ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಅದನ್ನು ಮಾಡುತ್ತಾರೆ?" ಎಂದಿದ್ದಾರೆ.
"ಕೇರಳವು ಕಾನೂನು ಸುವ್ಯವಸ್ಥೆಯನ್ನು ಹೊಂದಿರುವ ರಾಜ್ಯವಾಗಿದೆ, ಕೇರಳದಲ್ಲಿ, ಮಾದಕವಸ್ತು ಸೇವನೆಯ ವಿರುದ್ಧ ಸರ್ಕಾರವು ಅತ್ಯಂತ ಕಠಿಣ ಮತ್ತು ರಾಜಿಯಿಲ್ಲದ ಕ್ರಮವನ್ನು ತೆಗೆದುಕೊಳ್ಳುತ್ತಿದೆ" ಎಂದು ಸಚಿವರು ಕಿಡಿಕಾರಿದ್ದಾರೆ.
"ಪ್ರಸ್ತುತ, ಕೇಂದ್ರ ಕಾನೂನುಗಳಲ್ಲಿ ಮಿತಿಗಳಿವೆ. ಅವುಗಳನ್ನು ಹೋಗಲಾಡಿಸಲು ನಾವು ಒತ್ತಾಯಿಸಿದ್ದೇವೆ. ರಾಜ್ಯ ಸರ್ಕಾರವು ಡ್ರಗ್ಸ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ. ಅನೇಕ ಜನರು ಕೇರಳದ ಮಾನಹಾನಿ ಮಾಡಲು ಪಿತೂರಿ ಮಾಡುತ್ತಿದ್ದಾರೆ. ಇದು ಅದರ ಭಾಗವಾಗಿದೆಯೇ ಎಂದು ಖಚಿತವಾಗಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವಾಗ ಮಾಡುವ ಭಾಷಣಗಳು ಮತ್ತು ಹೇಳಿಕೆಗಳು ಸತ್ಯವನ್ನು ಆಧರಿಸಿರಬೇಕು" ಎಂದು ಕಾನೂನು ಸಚಿವ ರಾಜೀವ್ ಆಕ್ರೋಶ ಹೊರಹಾಕಿದ್ದಾರೆ.
ಇತ್ತಿಚೆಗೆ, ಪಿಣರಾಯಿ ವಿಜಯನ್ ಸರ್ಕಾರದ ಮದ್ಯ ನೀತಿಯನ್ನು ಟೀಕಿಸಿದ ರಾಜ್ಯಪಾಲರು, ಎಲ್ಲರೂ ಮದ್ಯ ಸೇವನೆ ವಿರುದ್ಧ ಅಭಿಯಾನ ನಡೆಸುತ್ತಿದ್ದರೆ, ಕೇರಳ ಸರ್ಕಾರ ಅದಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದು ಆರೋಪಿಸಿದ್ದರು.