2005ರಲ್ಲಿ ಅರ್ಜಿ ಹಾಕಿದ್ದ ವ್ಯಕ್ತಿಗೆ 18 ವರ್ಷದ ನಂತರ ಸಿಕ್ತು ಸರ್ಕಾರಿ ಕೆಲಸ! ಆದರೆ...
ತಿರುವನಂತಪುರಂ: ನಮ್ಮ ದೇಶದ ಸರ್ಕಾರಿ ನೇಮಕಾತಿ ಪ್ರಕ್ರಿಯೆಗಳು ಎಷ್ಟು ನಿಧಾನಗತಿಯಲ್ಲಿ ಸಾಗುತ್ತವೆ ಎಂಬುದಕ್ಕೆ ಕೇರಳದಲ್ಲಿ ನಡೆದಿರುವ ಈ ಒಂದು ಘಟನೆಯೇ ಸಾಕ್ಷಿ. 2005 ರಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಪರೀಕ್ಷೆ ಬರೆದು ಕಾಯುತ್ತಿದ್ದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 18 ವರ್ಷಗಳ ನಂತರ ನೇಮಕಾತಿ ಪತ್ರ ಕೈಸೇರಿದೆ. ಆದರೆ ದುರದೃಷ್ಟವಶಾತ್, ಈ ಆದೇಶ ಪ್ರತಿ ಬರುವಷ್ಟರಲ್ಲಿ ಆ ವ್ಯಕ್ತಿಗೆ ವಯೋಮಿತಿ ಮೀರಿ ಹೋಗಿರುವುದರಿಂದ, ಸಿಕ್ಕ ಕೆಲಸವೂ ಕೈ ತಪ್ಪಿದಂತಾಗಿದೆ. ಈ ಕಥೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಕೇರಳದ ಮಲಪ್ಪುರಂ ಜಿಲ್ಲೆಯ ಕಾಳಿಕಾವು ನಿವಾಸಿಯಾದ 61 ವರ್ಷದ ಅಬ್ದುಲ್ ಮಜೀದ್ ಈ ದುರದೃಷ್ಟ ವ್ಯಕ್ತಿ ಎನ್ನಬಹುದು. ಇವರು 2005ರಲ್ಲಿ ಕೇರಳ ಪಬ್ಲಿಕ್ ಸರ್ವಿಸ್ ಕಮಿಷನ್ (PSC) ನಡೆಸಿದ್ದ ಅರೆಕಾಲಿಕ ಜೂನಿಯರ್ ಅರೇಬಿಕ್ ಶಿಕ್ಷಕ ಹುದ್ದೆಯ ಪರೀಕ್ಷೆಯನ್ನು ಬರೆದಿದ್ದರು. ಆ ಸಂದರ್ಭದಲ್ಲಿ ಇವರ ಹೆಸರನ್ನು ರ್ಯಾಂಕ್ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಈ ರ್ಯಾಂಕ್ ಪಟ್ಟಿಯು 3 ವರ್ಷಗಳ ಕಾಲ ಚಾಲ್ತಿಯಲ್ಲಿದ್ದು, ನಂತರ ಅಂದರೆ 2008ರಲ್ಲಿ ರದ್ದಾಗಿತ್ತು.

ಆದರೆ, ನಿಯಮಗಳ ಪ್ರಕಾರ ರ್ಯಾಂಕ್ ಪಟ್ಟಿ ರದ್ದಾಗಿದ್ದರೂ, ಆ ಅವಧಿಯಲ್ಲಿ ಖಾಲಿ ಇದ್ದ ಹುದ್ದೆಯೊಂದನ್ನು ಭರ್ತಿ ಮಾಡದ ಕಾರಣ, ಇಲಾಖೆಯು ತಡವಾಗಿ ಪ್ರಕ್ರಿಯೆ ನಡೆಸಿ 2026ರ ಏಪ್ರಿಲ್ 24ರಂದು ಮಜೀದ್ ಅವರಿಗೆ ನೇಮಕಾತಿ ಪತ್ರವನ್ನು ರವಾನಿಸಿದೆ.
ನೇಮಕಾತಿ ಪತ್ರ ಬಂದಿರುವುದು ಮಜೀದ್ ಅವರಿಗೆ ಆಶ್ಚರ್ಯ ತಂದಿದ್ದರೂ, ಅದರ ಜೊತೆಯಲ್ಲೇ ಭಾರಿ ನಿರಾಶೆಯನ್ನೂ ಉಂಟುಮಾಡಿದೆ. ಏಕೆಂದರೆ ಅಧಿಕೃತ ದಾಖಲೆಗಳ ಪ್ರಕಾರ ಮಜೀದ್ ಅವರು 2026ರ ಮೇ 27ರಂದು 60 ವರ್ಷಗಳನ್ನು ಪೂರೈಸಿದ್ದಾರೆ. ಕೇರಳ ಸರ್ಕಾರದ ನಿಯಮಗಳ ಪ್ರಕಾರ ಅವರು ಈಗಾಗಲೇ ನಿವೃತ್ತಿಯ ವಯಸ್ಸನ್ನು ದಾಟಿರುವುದರಿಂದ ಉದ್ಯೋಗಕ್ಕೆ ಸೇರಲು ಅರ್ಹರಲ್ಲ.
ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಮಜೀದ್, "ವ್ಯವಸ್ಥೆಯ ಸುದೀರ್ಘ ವಿಳಂಬವು ನನ್ನ ಉದ್ಯೋಗದ ಅವಕಾಶವನ್ನು ಕಸಿದುಕೊಂಡಿದೆ. 18 ವರ್ಷಗಳ ಕಾಲ ಹುದ್ದೆಯನ್ನು ಭರ್ತಿ ಮಾಡದೆ ಖಾಲಿ ಇಡಲಾಗಿತ್ತು. ಈಗ ನಾನು ವಯೋಮಿತಿ ದಾಟಿರುವುದರಿಂದ ಕೆಲಸ ಸೇರಲು ಸಾಧ್ಯವೇ ಇಲ್ಲದಂತಾಗಿದೆ" ಎಂದು ಬೇಸರ ಹೊರಹಾಕಿದ್ದಾರೆ.
ಮಜೀದ್ ಅವರ ಎಸ್ಎಸ್ಎಲ್ಸಿ ಪ್ರಮಾಣಪತ್ರದಲ್ಲಿ ಅವರ ಜನ್ಮದಿನಾಂಕ ಮೇ 27, 1966 ಎಂದಿದೆ. ಆದರೆ ತಮ್ಮ ನಿಜವಾದ ಜನ್ಮದಿನಾಂಕ ಮೇ 27, 1967 ಎಂದು ಅವರು ವಾದಿಸುತ್ತಿದ್ದಾರೆ. ಒಂದು ವೇಳೆ ದಾಖಲೆಗಳಲ್ಲಿ ಈ ತಿದ್ದುಪಡಿಯಾದರೆ ತಮಗೆ ಕನಿಷ್ಠ ಒಂದು ವರ್ಷವಾದರೂ ಸೇವೆ ಸಲ್ಲಿಸಲು ಅವಕಾಶ ಸಿಗಬಹುದು ಎಂಬ ಭರವಸೆಯಲ್ಲಿ ಅವರು ಕೇರಳದ ಶಿಕ್ಷಣ ಸಚಿವರು ಮತ್ತು ಶಾಸಕ ಎನ್. ಶಂಸುದ್ದೀನ್ ಅವರಿಗೆ ಮನವಿ ಸಲ್ಲಿಸಿದ್ದು, ಸಕಾರಾತ್ಮಕ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
ಈ ಸುದ್ದಿ ಹರಡುತ್ತಿದ್ದಂತೆ ಇಂಟರ್ನೆಟ್ನಲ್ಲಿ ನೆಟ್ಟಿಗರು ಸರ್ಕಾರದ ನಿಧಾನಗತಿಯ ಆಡಳಿತ ವೈಖರಿಯನ್ನು ಕಟುವಾಗಿ ಟೀಕಿಸುತ್ತಿದ್ದಾರೆ. "ಭಾರತೀಯ ಸರ್ಕಾರಿ ವ್ಯವಸ್ಥೆಯ ವೇಗಕ್ಕೆ ಸಾಟಿಯೇ ಇಲ್ಲ, ಯೌವನದಲ್ಲಿ ಅರ್ಜಿ ಹಾಕಿದ ಉದ್ಯೋಗ ನಿವೃತ್ತಿಯ ವಯಸ್ಸಿಗೆ ಕೈಸೇರಿದೆ" ಎಂದು ಒಬ್ಬರು ವ್ಯಂಗ್ಯವಾಡಿದ್ದಾರೆ. "ಒಬ್ಬ ಸೋಮಾರಿ ಅಧಿಕಾರಿಯ ಬೇಜವಾಬ್ದಾರಿತನ ಮತ್ತೊಬ್ಬರ ಕನಸನ್ನು ನುಚ್ಚುನೂರು ಮಾಡಿದೆ" ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಪರೀಕ್ಷೆಗಳ ವಿಳಂಬ, ಫಲಿತಾಂಶ ವಿಳಂಬ ಮತ್ತು ಭ್ರಷ್ಟಾಚಾರದಿಂದಾಗಿ ದೇಶದ ಲಕ್ಷಾಂತರ ಯುವಕರ ಕನಸುಗಳು ಹೇಗೆ ಭಗ್ನಗೊಳ್ಳುತ್ತಿವೆ ಎಂಬುದಕ್ಕೆ ಈ ಘಟನೆಯೇ ಕನ್ನಡಿ ಹಿಡಿದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications