ಲವ್ ಜಿಹಾದ್: 'ನನಗೆ ನನ್ನ ಸ್ವಾತಂತ್ರ್ಯ ಬೇಕು' ಎಂದ ಹಾದಿಯಾ
ನವದೆಹಲಿ, ನವೆಂಬರ್ 27: ಕೇರಳ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಪ್ರಿಂ ಕೋರ್ಟ್ ನಲ್ಲಿ ಮಹತ್ವದ ವಿಚಾರಣೆ ನಡೆಯಿತು. ಈ ವೇಳೆ ಪ್ರಕರಣದ ಕೇಂದ್ರ ಬಿಂದು ಹಾದಿಯಾ "ನನಗೆ ನನ್ನ ಸ್ವಾತಂತ್ರ್ಯ ಬೇಕು," ಎಂದು ಹೇಳಿದ್ದಾರೆ. ಜತೆಗೆ ನಾನು ನನ್ನ ಪತಿಯ ಜತೆ ಹೋಗಲು ಇಚ್ಛಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಕೋರ್ಟ್ ರೂಂ ನಲ್ಲಿ ನಡೆದ ಪ್ರಕರಣದ ವಿಚಾರಣೆಗೆ ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿರುವ ಹಾದಿಯಾ ಹಾಜರಾಗಿದ್ದರು.

ಈ ಸಂದರ್ಭ ದೀಪಕ್ ಮಿಶ್ರಾ, "ರಾಜ್ಯದ ಖರ್ಚಿನಲ್ಲಿ ಶಿಕ್ಷಣ ಮುಂದುವರೆಸಬೇಕು ಎಂದು ಬಯುಸುತ್ತಿಯಾ?" ಎಂದು ಹಾದಿಯಾರನ್ನು ಕೇಳಿದರು. ಇದಕ್ಕೆ ಉತ್ತರಿಸಿದ ಹಾದಿಯಾ "ನಾನು ಶಿಕ್ಷಣ ಮುಂದುವರೆಸಲು ಬಯಸುತ್ತೇನೆ. ಆದರೆ ರಾಜ್ಯದ ಖರ್ಚಿನಲ್ಲಲ್ಲ; ನನ್ನ ಗಂಡ ನನ್ನ ಖರ್ಚು ನೋಡಿಕೊಳ್ಳುತ್ತಿದ್ದಾರೆ," ಎಂದು ಉತ್ತರಿಸಿದರು.
ಇದಕ್ಕೂ ಮೊದಲು ವಿಚಾರಣೆ ವೇಳೆ, ಅಖಿಲಾ (ಹಾದಿಯಾ ಹಿಂದಿನ ಹೆಸರು) ಳನ್ನು ಒತ್ತಾಯಪೂರ್ವಕವಾಗಿ ಮತಾಂತರಿಸಲಾಗಿದೆ ಎಂದು ಪೋಷಕರು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಹಾದಿಯಾ ಪತಿ ಶಾಫಿ ಜಹಾನ್ ಪರ ವಕೀಲ ಕಪಿಲ್ ಸಿಬಲ್, "ಅವರು (ಹಾದಿಯಾ ಪತಿ) ಇವತ್ತು ತುಂಬಾ ಬೇಸರಗೊಂಡಿದ್ದಾರೆ. ನಾವು ಇವತ್ತು ಹಾದಿಯಾಳಿಗೆ ಏನು ಬೇಕು ಎಂಬುದನ್ನು ಆಕೆಯಲ್ಲೇ ಕೇಳುವ ಬದಲು ಸುದ್ದಿ ವಾಹಿನಿಗಳ ಮೂಲಕ ನಮ್ಮ ತಲೆಗೆ ತುಂಬಿದ ವಿಷವನ್ನು ತೆಗೆದುಕೊಳ್ಳುತ್ತಿದ್ದೇವೆ," ಎಂದು ವಾದಿಸಿದರು.
"ಹಾದಿಯಾ ಇಲ್ಲಿರುವಾಗ ಕೋರ್ಟ್ ಆಕೆಯನ್ನೇ ಕೇಳಬೇಕು. ಅದರ ಬದಲು ಎನ್ಐಎಯನ್ನು ಪ್ರಶ್ನಿಸುವುದಲ್ಲ. ಆಕೆ ತನ್ನ ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಮರ್ಥಳಿದ್ದಾಳೆ," ಎಂದು ಸಿಬಲ್ ನ್ಯಾಯಾಲಯದಲ್ಲಿ ಹೇಳಿದರು.
ಇದೇ ವೇಳೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) 100 ಪುಟಗಳ ತನಿಖಾ ವರದಿಯನ್ನು ಸುಪ್ರಿಂ ಕೋರ್ಟ್ ಗೆ ಸಲ್ಲಿಸಿತು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಹಾದಿಯಾ ತಂದೆ ಪರ ವಕೀಲರು, "ಎನ್ಐಎ ಆರಂಭದಲ್ಲಿ ಸಲ್ಲಿಸಿದ ವರದಿಯನ್ನು ನೋಡಬೇಕು ಮತ್ತು ನಂತರ ಆಕೆ ಮಾತನಾಡಬೇಕು," ಎಂದು ಹೇಳಿದರು.
ಹಾದಿಯಾರನ್ನು ಶಿಕ್ಷಣಕ್ಕಾಗಿ ಕಾಲೇಜಿಗೆ ಕರೆದೊಯ್ಯಬೇಕು ಮತ್ತು ಆಕೆಗೆ ಕಾಲೇಜಿನಲ್ಲಿ ಹಾಸ್ಟೆಲ್ ಸೌಲಭ್ಯವನ್ನು ನೀಡಬೇಕು ಎಂದು ಸುಪ್ರಿಂ ಕೋರ್ಟ್ ಸೂಚನೆ ನೀಡಿದೆ.ನಂತರ ವಿಚಾರಣೆಯನ್ನು ಮುಂದೂಡಲಾಗಿದ್ದು ಮುಂದಿನ ದಿನಾಂಕವನ್ನು ಜನವರಿ ಮೂರನೇ ವಾರಕ್ಕೆ ನಿಗದಿಪಡಿಸಲಾಗಿದೆ.












Click it and Unblock the Notifications