ದುಬೈನಲ್ಲಿರುವ ಭಾರತೀಯರ ನೆರವಿಗೆ ಧಾವಿಸುವಂತೆ ಕೇರಳ ಸಿಎಂ ಮನವಿ ಪತ್ರ
ತಿರುವನಂತಪುರಂ, ಏಪ್ರಿಲ್ 14:ದುಬೈನಲ್ಲಿರುವ ಭಾರತೀಯರ ನೆರವಿಗೆ ಬರುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರದ ಮುಖೇನ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರವೊಂದನ್ನು ಬರೆದಿರುವ ಅವರು ಯುಎಇನಲ್ಲಿ ಐಸೊಲೇಷನ್ ಹಾಗೂ ಕ್ವಾರಂಟೈನ್ ವ್ಯವಸ್ಥೆ ಎರಡೂ ಅಸಮರ್ಪಕವಾಗಿದೆ. ದುಬೈನಲ್ಲಿ 2.8 ಮಿಲಿಯನ್ ಭಾರತೀಯರಿದ್ದು ಅದರಲ್ಲಿ 1 ಮಿಲಿಯನ್ ಎಂದರೆ 10 ಲಕ್ಷ ಕೇರಳದವರಿದ್ದಾರೆ.
ದುಬೈನಲ್ಲಿ ಅವರ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.ಅಲ್ಲಿ ಕ್ವಾರಂಟೈನ್ ಹಾಗೂ ಐಸೊಲೇಷನ್ ವ್ಯವಸ್ಥೆ ಎರಡೂ ಸರಿಯಿಲ್ಲ ಎನ್ನುವ ಸಾಕಷ್ಟು ದೂರುಗಳು ನಮಗೆ ಬಂದಿವೆ. ಅಲ್ಲಿ ಸಮುದಾಯಕ್ಕೂ ಕೊರೊನಾ ವೈರಸ್ ವ್ಯಾಪಿಸುತ್ತಿದೆ. ಆದರೂ ಕೂಡ ಯಾವುದೇ ಕಠಿಣ ಕ್ರಮಕ್ಕೆ ಮುಂದಾಗಿಲ್ಲ.
ಈ ವಿಷಯವನ್ನು ಯುಎಇ ಸರ್ಕಾರದ ಬಳಿ ಕೊಂಡೊಯ್ಯುವ ಅಗತ್ಯವಿದೆ. ಅಲ್ಲಿ ಕೆಲಸ ಮಾಡುತ್ತಿರುವ ಭಾರತೀಯರಿಗೆ ಊಟ, ಔಷಧ, ಕ್ವಾರಂಟೈನ್ ಹಾಗೂ ತುರ್ತು ಸೇವೆಗಳನ್ನು ಒದಗಿಸುವಂತೆ ಮನವಿ ಮಾಡಬೇಕು ಇರದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆವಹಿಸಬೇಕು ಎಂದು ಪಿಣರಾಯಿ ವಿಜಯನ್ ಮನವಿ ಮಾಡಿದ್ದಾರೆ.
ಯಾರು ದುಬೈನಿಂದ ಕೇರಳಕ್ಕೆ ಆಗಮಿಸಿದರೆ ಅವರ ಊಟ, ಔಷಧ, ಕ್ವಾರಂಟೈನ್ ವ್ಯವಸ್ಥೆಯನ್ನ ಕೇರಳ ಸರ್ಕಾರ ಮಾಡುತ್ತದೆ. ವಿಶೇಷ ವಿಮಾನ ವ್ಯವಸ್ಥೆ ಕಲ್ಪಿಸಿ ಅಲ್ಲಿರುವ ಭಾರತೀಯರನ್ನು ಮರಳಿ ಇಲ್ಲಿಗೆ ಕರೆಸಿಕೊಳ್ಳಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಕೇರಳದವರು ತಮ್ಮ ಊರಿಗೆ ಮರಳಲು ಸಿದ್ಧರಿದ್ದಾರೆ.