ಚರ್ಚ್ ಲೈಂಗಿಕ ಹಗರಣದಲ್ಲಿ ನಾಲ್ವರು ಪಾದ್ರಿಗಳ ವಿರುದ್ಧ ಪ್ರಕರಣ ದಾಖಲು
ತಿರುವನಂತಪುರಂ (ಕೇರಳ), ಜುಲೈ 2: ಚರ್ಚ್ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪಾದ್ರಿಗಳ ವಿರುದ್ಧ ಕೇರಳ ಪೊಲೀಸರು ಸೋಮವಾರ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ. ಅಪರಾಧ ವಿಭಾಗದ ಅಧಿಕಾರಿಗಳ ಎದುರು ತನ್ನ ಹೇಳಿಕೆ ದಾಖಲಿಸಲು ಸಂತ್ರಸ್ತೆ ಮುಂದೆ ಬಂದಿದ್ದರಿಂದ ಪ್ರಕರಣ ದಾಖಲಾಗಿದೆ.
"ನನ್ನ ಹೆಂಡತಿ ಚರ್ಚ್ ನಲ್ಲಿ ಹೇಳಿಕೊಂಡ ತಪ್ಪೊಪ್ಪಿಗೆಯನ್ನು ಬ್ಲ್ಯಾಕ್ ಮೇಲ್ ಮಾಡಲು ಬಳಸಿ, ಆ ನಂತರ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ" ಎಂದು ಮಲಂಕರ ಸಿರಿಯನ್ ಚರ್ಚ್ ನ ಐವರು ಪಾದ್ರಿಗಳ ವಿರುದ್ಧ ಪತ್ತನಮಿಟ್ಟ ಜಿಲ್ಲೆಯ ವ್ಯಕ್ತಿಯೊಬ್ಬರು ಆರೋಪ ಮಾಡಿದ್ದರು.
ಇದೀಗ ಪಾದ್ರಿಗಳಾದ ಅಬ್ರಾಹಂ ವರ್ಗೀಸ್ (ಸೋನಿ), ಜೈಸ್ ಕೆ.ಜಾರ್ಜ್, ಜಾಬ್ ಮಾಥ್ಯೂ, ಜಾನ್ಸನ್ ಮಾಥ್ಯೂ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. "ಐವರು ಪಾದ್ರಿಗಳಿಗೆ ಶಿಕ್ಷೆ ಆಗಿ ನ್ಯಾಯ ಸಿಗುವ ತನಕ ಹೋರಾಡುತ್ತೇನೆ" ಎಂದು ಸಂತ್ರಸ್ತೆಯ ಪತಿ ಹೇಳಿದ್ದಾರೆ.

ನನ್ನ ಆರೋಪಕ್ಕೆ ಏನು ಸಾಕ್ಷ್ಯಗಳಿವೆ ಎಂದು ಕೇಳುತ್ತಿದ್ದಾರೆ. ನನ್ನ ಹೆಂಡತಿ ಬರೆದುಕೊಟ್ಟ ಪತ್ರವೇ ಸಾಕ್ಷಿ. ಅವಳ ಹೇಳಿಕೆ ಪತ್ರದ ಜತೆಗೆ ದೂರು ನೀಡಿದ್ದೇನೆ ಎಂದು ಕೂಡ ಆತ ಹೇಳಿದ್ದಾರೆ.
ಕೇರಳದಲ್ಲಿ ಈ ಪ್ರಕರಣ ಭಾರೀ ಸುದ್ದಿಯಾಗಿದ್ದು, ರಾಷ್ಟ್ರೀಯ ಮಹಿಳಾ ಆಯೋಗವು ಸಂಪೂರ್ಣ ತನಿಖೆ ಹಾಗೂ ನಿಷ್ಪಕ್ಷಪಾತ ಕ್ರಮಕ್ಕೆ ಕೇಳಿದೆ. ಇನ್ನು ಕೊಟ್ಟಾಯಂ ಮೂಲದ ಚರ್ಚ್ ಸ್ಪಷ್ಟ ಹಾಗೂ ನಿಷ್ಪಕ್ಷಪಾತ ತನಿಖೆ ಮಾಡಿ, ತಪ್ಪಿತಸ್ಥರೆಂದು ಕಂಡುಬಂದಲ್ಲಿ ಕ್ರಮ ಕೈಗೊಳ್ಳುವ ಬಗ್ಗೆ ಹೇಳಿದೆ.
ಆರೋಪಿಗಳನ್ನು ರಕ್ಷಣೆ ಮಾಡುವುದಿಲ್ಲ ಮತ್ತು ಅದೇ ರೀತಿ ನಿರ್ದೋಷಿಗಳಿಗೆ ಶಿಕ್ಷೆ ಕೂಡ ಆಗಬಾರದು ಎಂದು ಚರ್ಚ್ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇನ್ನು ವಿವಾಹಿತೆ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಆರೋಪ ಕೇಳಿಬಂದ ಮೇಲೆ, ಶತಮಾನಗಳ ಹಳೆಯ ಪದ್ಧತಿಗಳನ್ನು ಬದಲಿಸುವಂತೆ ಕ್ರೈಸ್ತ ಸನ್ಯಾಸಿನಿಯರು ಮನವಿ ಮಾಡಿದ್ದಾರೆ. ಹೆಣ್ಣುಮಕ್ಕಳು ಚರ್ಚ್ ಗಳಲ್ಲಿ ತಪ್ಪೊಪ್ಪಿಗೆಯನ್ನು ಸನ್ಯಾಸಿನಿಯರ ಎದುರಿಗೆ ಮಾಡಲು ಅವಕಾಶ ಆಗಬೇಕು ಎಂದು ಕೇಳಿದ್ದಾರೆ.












Click it and Unblock the Notifications