ಸುಪ್ರೀಂಕೋರ್ಟಿನ ಎರಡು ಆದೇಶ ಬದಲಾಯಿಸಲು ಕರ್ನಾಟಕದಿಂದ ಮನವಿ
ಬೆಂಗಳೂರು, ಅಕ್ಟೋಬರ್ 01: ಕಾವೇರಿ ನದಿ ನೀರು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ಎರಡು ಆದೇಶಗಳನ್ನು ಬದಲಾಯಿಸುವಂತೆ ಕೋರಿ ಕರ್ನಾಟಕ ಸರ್ಕಾರ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ.
ಸೆಪ್ಟೆಂಬರ್ 20 ಹಾಗೂ 30ರಂದು ಸುಪ್ರೀಂಕೋರ್ಟ್ ನೀಡಿರುವ ಆದೇಶಗಳಲ್ಲಿ ಬದಲಾವಣೆ ಕೋರಿ ಕರ್ನಾಟಕ ಸರ್ಕಾರ ಅರ್ಜಿ ಸಲ್ಲಿಸಲಿದೆ.
ಶುಕ್ರವಾರ ನೀಡಿದ್ದ ಆದೇಶದಲ್ಲಿ ಅಕ್ಟೋಬರ್ 1 ರಿಂದ 6ರ ತನಕ ಪ್ರತಿದಿನ 6,000 ಕ್ಯೂಸೆಕ್ಸ್ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚಿಸಲಾಗಿತ್ತು. ಈ ಮೂಲಕ 3.12 ಟಿಎಂಸಿ ಅಡಿಗೂ ಅಧಿಕ ನೀರು ತಮಿಳುನಾಡಿಗೆ ಹರಿಯಬೇಕಿತ್ತು.

ಆದರೆ, ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿರುವ ನೀರಿನ ಪ್ರಮಾಣ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದು, ಕೆಆರ್ಎಸ್, ಕಬಿನಿ, ಹಾರಂಗಿ ಹಾಗೂ ಹೇಮಾವತಿ ಅಣೆಕಟ್ಟುಗಳಲ್ಲಿರುವ ನೀರಿನ ಪ್ರಮಾಣದಿಂದ ಕುಡಿಯುವ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ಡೆಡ್ ಸ್ಟೋರೇಜ್ ತಲುಪಿದರೆ, ಕುಡಿಯುವ ನೀರಿಗೂ ಬರ ಎದುರಾಗಲಿದೆ ಎಂದು ಸುಪ್ರೀಂಗೆ ಮನವಿ ಮಾಡಲಾಗುತ್ತದೆ.,
ಉಭಯ ರಾಜ್ಯಗಳಲ್ಲಿನ ಅಣೆಕಟ್ಟಿನ ಸದ್ಯದ ಪರಿಸ್ಥಿತಿಯನ್ನು ಪರಿಶೀಲಿಸಲು ತಜ್ಞರ ತಂಡವನ್ನು ನೇಮಿಸಲು ಕೂಡಾ ರಾಜ್ಯ ಕೋರುವ ಸಾಧ್ಯತೆಯಿದೆ.
ಈ ನಡುವೆ ಉದ್ದೇಶಿತ ಕಾವೇರಿ ನಿರ್ವಹಣಾ ಮಂಡಳಿಯಲ್ಲಿ ಯಾವೆಲ್ಲ ಸದಸ್ಯರಿರಬೇಕು ಎಂಬ ಹೆಸರುಗಳನ್ನು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಇವತ್ತೇ ನೀಡಬೇಕಿದೆ. ಇದೆಲ್ಲದರ ಬಗ್ಗೆ ಶುಕ್ರವಾರ ಸಂಜೆ ನಡೆಯುವ ಸರ್ವಪಕ್ಷಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ.












Click it and Unblock the Notifications