Get Updates
Get notified of breaking news, exclusive insights, and must-see stories!

ಕರ್ನಾಟಕ, ಗೋವಾ ಗಣಿ ಸ್ಥಗಿತದಿಂದ ಕೆಲಸ ಕಳೆದುಕೊಂಡಿದ್ದು 12.8 ಲಕ್ಷ ಮಂದಿ

ಬೆಂಗಳೂರು, ಸೆಪ್ಟೆಂಬರ್ 12: ಕರ್ನಾಟಕ ಮತ್ತು ಗೋವಾದ ಗಣಿ ಉದ್ಯಮಗಳಲ್ಲಿ 12.8 ಲಕ್ಷದಷ್ಟು ನೇರ ಹಾಗೂ ಪರೋಕ್ಷ ಉದ್ಯೋಗ ನಷ್ಟ ಉಂಟಾಗಿದೆ.

ದೃಷ್ಟಿಕೋನದ ಕೊರತೆ, ನ್ಯಾಯಾಂಗ ಹಸ್ತಕ್ಷೇಪ, ಆಡಳಿತ ನಿಯಂತ್ರಣದ ವೈಫಲ್ಯ ಮತ್ತು ಅನೇಕ ಗಣಿಗಳ ಸ್ಥಗಿತ ಮುಂತಾದ ಕಾರಣಗಳಿಂದಾಗಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಳ್ಳುವಂತಾಗಿದೆ ಎಂದು ಗಣಿ ಉದ್ಯಮದ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ 'ಎಕನಾಮಿಕ್ಸ್ ಟೈಮ್ಸ್' ವರದಿ ಮಾಡಿದೆ.

ಗಣಿ ಉದ್ಯಮದಲ್ಲಿ ಒಂದು ನೇರ ಉದ್ಯೋಗ ಸೃಷ್ಟಿಯಾದರೆ, ಅದಕ್ಕೆ ಪೂರಕವಾಗಿ ಹತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಗಣಿ ಉತ್ಪನ್ನವನ್ನು ಹೊರತೆಗೆಯುವ ಆರಂಭದಿಂದ ಕೊನೆಯವರೆಗಿನ ವಿವಿಧ ಸರಪಣಿಗಳಲ್ಲಿ ಹಲವು ಮಂದಿ ಉದ್ಯೋಗ ಪಡೆದುಕೊಳ್ಳುತ್ತಾರೆ.

ಒಂದು ಗಣಿ ಸಂಸ್ಥೆ ಚಟುವಟಿಕೆ ನಡೆಸಿದರೆ ಅದಕ್ಕೆ ಸಂಬಂಧಿಸಿದ ಟ್ರಕ್ ಮಾಲೀಕರು, ಚಾಲಕರು, ಕ್ಲೀನರ್‌ಗಳು, ರಿಪೇರಿ ಅಂಗಡಿಗಳು, ಪೆಟ್ರೋಲ್ ಡೀಸೆಲ್ ಚಿಲ್ಲರೆ ಮಳಿಗೆಗಳು, ಹೋಟೆಲ್‌ಗಳು, ದಿನಸಿ ಪದಾರ್ಥ ವ್ಯಾಪಾರಿಗಳು ಬ್ಯಾಂಕುಗಳು ಹೀಗೆ ಎಲ್ಲದಕ್ಕೂ ಪರೋಕ್ಷ ಉದ್ಯೋಗ ಸೃಷ್ಟಿಯಾಗುತ್ತದೆ.

ರಾಜ್ಯದಲ್ಲಿ 8.8 ಲಕ್ಷ ಉದ್ಯೋಗ ನಷ್ಟ

ರಾಜ್ಯದಲ್ಲಿ 8.8 ಲಕ್ಷ ಉದ್ಯೋಗ ನಷ್ಟ

2011ರಿಂದ ಇಲ್ಲಿಯವರೆಗೂ ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ 166 ಕಬ್ಬಿಣ ಅದಿರು ಗಣಿಗಳನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ 80 ಸಾವಿರ ಮಂದಿ ನೇರವಾಗಿ ಕೆಲಸ ಕಳೆದುಕೊಂಡಿದ್ದರೆ, 8 ಲಕ್ಷ ಮಂದಿ ಪರೋಕ್ಷ ಅವಲಂಬಿತರು ಸಹ ಉದ್ಯೋಗ ನಷ್ಟ ಅನುಭವಿಸಿದ್ದಾರೆ. ಅದೇ ರೀತಿ ಗೋವಾದಲ್ಲಿ 2012ರಿಂದ ಎಲ್ಲ ಗಣಿ ಚಟುವಟಿಕೆಗಳಿಗೂ ಅಂಕುಶ ಹಾಕಲಾಗಿದೆ. ಇದರಿಂದ ಸುಮಾರು ಒಂದು ಲಕ್ಷ ಮಂದಿ ನೇರವಾಗಿ ಮತ್ತು ಮೂರು ಲಕ್ಷ ಮಂದಿ ಪರೋಕ್ಷವಾಗಿ ಉದ್ಯೋಗ ಕಳೆದುಕೊಂಡಿದ್ದಾರೆ.

ಗಣಿಗಾರಿಕೆಗೆ ಸುಪ್ರೀಂಕೋರ್ಟ್ ತಡೆ

ಗಣಿಗಾರಿಕೆಗೆ ಸುಪ್ರೀಂಕೋರ್ಟ್ ತಡೆ

ದೇಶದಲ್ಲಿ ಕೃಷಿ ಮತ್ತು ನಿರ್ಮಾಣ ವಲಯದ ನಂತರ ಅತಿ ಹೆಚ್ಚು ಉದ್ಯೋಗ ಸೃಷ್ಟಿಯ` ವಲಯವೆಂದರೆ ಗಣಿ ವಲಯ. 2011-12ರಿಂದ ಕರ್ನಾಟಕ ಮತ್ತು ಗೋವಾದಲ್ಲಿನ ಗಣಿಗಳ ಸ್ಥಗಿತದ ಬಳಿಕ 12,80,000 ನೇರ ಹಾಗೂ ಪರೋಕ್ಷ ಉದ್ಯೋಗ ನಷ್ಟ ಉಂಟಾಗಿದೆ ಎಂದು ಭಾರತೀಯ ಖನಿಜ ಕೈಗಾರಿಕೆಗಳ ಸಂಸ್ಥೆಯ (ಫಿಮಿ) ಅಧ್ಯಕ್ಷ ಸುನಿಲ್ ದುಗ್ಗಲ್ ತಿಳಿಸಿದ್ದಾರೆ.

2001-2011ರ ಅವಧಿಯಲ್ಲಿ ಬಳ್ಳಾರಿಯಲ್ಲಿ ನಡೆದ ಬಹುಕೋಟಿ ಗಣಿ ಹಗರಣಗಳ ಬಳಿಕ ಸುಪ್ರೀಂಕೋರ್ಟ್ ಗಣಿ ಉದ್ಯಮಕ್ಕೆ ಅಂಕುಶ ಹಾಕಿತ್ತು. ಇದರ ಪರಿಣಾಮವಾಗಿ ಗಣಿಗಳನ್ನು ಗುತ್ತಿಗೆ ನೀಡುವುದು ಮತ್ತು ಗಣಿ ಮಾಲೀಕರ ಪರವಾನಗಿಯನ್ನು ನವೀಕರಣ ಮಾಡುವ ಬದಲು ಹರಾಜು ನಡೆಸುವ ಸಂಬಂಧ ಸೂಚನೆ ನೀಡಿತ್ತು.

166 ಗಣಿಗಳು ಬಂದ್

166 ಗಣಿಗಳು ಬಂದ್

2011ರ ಜುಲೈ 29 ಮತ್ತು ಆಗಸ್ಟ್ 26ರಂದು ನೀಡಿದ್ದ ಆದೇಶಗಳಲ್ಲಿ ಸುಪ್ರೀಂಕೋರ್ಟ್, ರಾಜ್ಯದ ಈ ಮೂರು ಅತ್ಯಂತ ಸಿರಿವಂತ ಗಣಿ ಜಿಲ್ಲೆಗಳಲ್ಲಿನ ಎಲ್ಲ ಚಟುವಟಿಕೆಗಳನ್ನು ನಿಷೇಧಿಸಿತ್ತು. ಗುತ್ತಿಗೆ ಪಡೆದ ಗಣಿ ಪ್ರದೇಶದಾಚೆಯೂ ಒತ್ತುವರಿ ಮತ್ತು ಎಸೆಯುವಿಕೆ ನಡೆಯುತ್ತಿದ್ದವು. ಇಲ್ಲಿ 166 ಗಣಿ ಸಂಸ್ಥೆಗಳು ಗಣಿಗಾರಿಕೆ ನಡೆಸುತ್ತಿದ್ದವು ಎಂದು ದುಗ್ಗಲ್ ತಿಳಿಸಿದ್ದಾರೆ.

ಗೋವಾದ 88 ಗಣಿಗಳು ಬಂದ್

ಗೋವಾದ 88 ಗಣಿಗಳು ಬಂದ್

ಇದೇ ರೀತಿ 2012ರ ಅ. 5ರಂದು ಗೋವಾದಲ್ಲಿನ ಎಲ್ಲ ಗಣಿ ಕಾರ್ಯಾಚರಣೆಗಳನ್ನು ಕೂಡ ಸುಪ್ರೀಂಕೋರ್ಟ್ ರದ್ದುಗೊಳಿಸಿತ್ತು. ಇಲ್ಲಿ ಗಣಿ ಗುತ್ತಿಗೆಗಳ ಪರವಾನಗಿ ನವೀಕರಣ ಹಲವು ವರ್ಷಗಳಿಂದ ಬಾಕಿ ಇದ್ದವು. ಸುರಕ್ಷತಾ ಮಾನದಂಡಗಳ ಕೊರತೆಯಿಂದ ಈ ಭಾಗದಲ್ಲಿ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ ಎಂದು ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿತ್ತು.

2014ರಲ್ಲಿ ಗೋವಾ ಸರ್ಕಾರ ವರ್ಷಕ್ಕೆ 20 ಮಿಲಿಯನ್ ಟನ್ ಕಬ್ಬಿಣದ ಅದಿರು ಹೊರತೆಗೆಯಲು ಅನುಮತಿ ನೀಡಿ ಗುತ್ತಿಗೆ ನವೀಕರಿಸಿತ್ತು. 2018ರ ಫೆ. 7ರಂದು 88 ಗಣಿಗಳ ಗುತ್ತಿಗೆ ನವೀಕರಣ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತು. ಇದರಿಂದ 2018ರ ಮಾರ್ಚ್ 16ರಿಂದ ಗಣಿಗಳು ಮುಚ್ಚಿಹೋದವು.

ರಾಜ್ಯಕ್ಕೆ 10 ಸಾವಿರ ಕೋಟಿ ಆದಾಯ ನಷ್ಟ

ರಾಜ್ಯಕ್ಕೆ 10 ಸಾವಿರ ಕೋಟಿ ಆದಾಯ ನಷ್ಟ

ಗೋವಾದಲ್ಲಿ ಗಣಿಗಳನ್ನು ಸ್ಥಗಿತಗೊಳಿಸಿರುವುದು ಅಲ್ಲಿನ ಆದಾಯಕ್ಕೆ ಭಾರಿ ಹೊಡೆತ ನೀಡಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ 5,830 ಕೋಟಿ ಆದಾಯ ನಷ್ಟವಾಗಿದೆ. ಕರ್ನಾಟಕ ಸರ್ಕಾರವೂ ಕಳೆದ ಏಳೆಂಟು ವರ್ಷಗಳಲ್ಲಿ ಪರವಾನಗಿ ಶುಲ್ಕ, ರಾಯಧನ, ತೆರಿಗೆಗಳು ಮತ್ತು ಸುಂಕಗಳ ರೂಪದಲ್ಲಿ ಸುಮಾರು 10 ಸಾವಿರ ಕೋಟಿ ರೂ. ಆದಾಯ ನಷ್ಟ ಅನುಭವಿಸಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಕೂಡ 50 ಸಾವಿರ ಕೋಟಿ ರೂವರೆಗೆ ಆಸ್ತಿ ನಷ್ಟ ಅನುಭವಿಸಿವೆ ಎಂದು ಅವರು ವಿವರಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+