ಆಗ ತೆಗಳೋದು, ಈಗ ಹೊಗಳೋದು, ಕಾಂಗ್ರೆಸ್ 'ಯು-ಟರ್ನ್': ಬಿಜೆಪಿ ಟೀಕೆ
ನವದೆಹಲಿ, ಮೇ 18: ತನ್ನ ವಿರುದ್ಧವಾದ ತೀರ್ಪುಗಳ ಹೊರಬಂದಾಗ ನ್ಯಾಯಾಂಗ ವ್ಯವಸ್ಥೆಯನ್ನು ಕೆಲವೊಮ್ಮ ತೀವ್ರವಾಗಿ ಟೀಕಿಸುವ ಕಾಂಗ್ರೆಸ್, ಪರವಾದ ತೀರ್ಪು ಬಂದಾಗ ನ್ಯಾಯಾಂಗ ಶ್ರೇಷ್ಠ ಎಂದು ಯೂ ಟರ್ನ್ ತೆಗೆದುಕೊಳ್ಳುತ್ತದೆ.
ಸುಪ್ರೀಂಕೋರ್ಟ್ ಕುರಿತ ತನ್ನ ಅಭಿಪ್ರಾಯವನ್ನು ಕಾಂಗ್ರೆಸ್ ತನಗೆ ಬೇಕಾದಂತೆ ಬದಲಿಸಿಕೊಳ್ಳುತ್ತಿರುತ್ತದೆ ಎಂದು ಬಿಜೆಪಿ ಶನಿವಾರ ಟೀಕಿಸಿದೆ.
ಇದೇ ಕಾಂಗ್ರೆಸ್ ಭಾರತೀಯ ನ್ಯಾಯಾಂಗ ವ್ಯವಸ್ಥೆಯನ್ನು ಪಾಕಿಸ್ತಾನಕ್ಕೆ ಹೋಲಿಸಿತ್ತು. ಆದರೆ, ಈಗ ಕರ್ನಾಟಕದಲ್ಲಿ
ವಿಶ್ವಾಸಮತ ಯಾಚನೆ ಸಂಬಂಧ ತೀರ್ಪು ಹೊರಬರುತ್ತಿದ್ದಂತೆಯೇ ಕಾಂಗ್ರೆಸ್ ಸುಪ್ರೀಂಕೋರ್ಟ್ ಅನ್ನು ಹೊಗಳಲು ಆರಂಭಿಸಿದೆ.

'ರಾಹುಲ್ ಗಾಂಧಿ ಅವರು ನಾಚಿಕೆಯಿಲ್ಲದೆ ಸುಪ್ರೀಂಕೋರ್ಟ್ಅನ್ನು ಪಾಕಿಸ್ತಾನಕ್ಕೆ ಹೋಲಿಸಿದ್ದರು. ಇದೇ ಕಾಂಗ್ರೆಸ್ ಸುಪ್ರೀಂಕೋರ್ಟ್ ವಿರುದ್ಧ ಮಹಾಭಿಯೋಗ ನಿಲುವಳಿಯನ್ನೂ ಮಂಡಿಸಿತ್ತು. ಈಗ ಅದು ಸರ್ವೋಚ್ಛ ನ್ಯಾಯಾಲಯದ ಮೇಲಿನ ನಂಬಿಕೆಯನ್ನು ಮರಳಿ ಹೊಂದಲು ನಿರ್ಧರಿಸಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಟೀಕಿಸಿದ್ದಾರೆ.
ಸರ್ಕಾರ ರಚನೆಯ ಬಿಜೆಪಿಯ ಪ್ರಯತ್ನವನ್ನು ಪ್ರಶ್ನಿಸಿ ಕಾಂಗ್ರೆಸ್-ಜೆಡಿಎಸ್ ಅರ್ಜಿ ಸಲ್ಲಿಸಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕದಲ್ಲಿ ಜನರು ನೀಡಿದ ತೀರ್ಪನ್ನು ಕಾಂಗ್ರೆಸ್ ಕೊಂದು ಹಾಕಿದೆ. ಪ್ರಜಾಪ್ರಭುತ್ವದಲ್ಲಿ ಜನರ ತೀರ್ಪಿಗಿಂತ ಮಿಗಿಲಾದದ್ದು ಬೇರೊಂದಿಲ್ಲ.
ತನಗೆ ಬೇಕಾದಂತೆ ವರ್ತಿಸುವ ಕಾಂಗ್ರೆಸ್ನ ಆಟ ನಡೆಯುವುದಿಲ್ಲ. ಕಾಂಗ್ರೆಸ್ ಪಕ್ಷದ ಹುಳುಕುಗಳೆಲ್ಲ ಸಂಪೂರ್ಣ ಬಯಲಾಗಿದೆ. ಇದು ಕಾಂಗ್ರೆಸ್ನ ನೈಜ ಮುಖ. ಅವರು ದೇಶದ ಸಂವಿಧಾನವನ್ನು ತಮಗೆ ಎಷ್ಟು ಬೇಕೋ ಅಷ್ಟು ಮಾತ್ರ ಓದಲು ಬಯಸುತ್ತಾರೆ. ಗಾಂಧಿಗಳ ಹುಚ್ಚಾಟಗಳಿಗೆ ತಕ್ಕಂತೆ ಸಂವಿಧಾನವನ್ನು ಬದಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.












Click it and Unblock the Notifications