ಚಿತ್ರಗಳಲ್ಲಿ ಕಾರ್ಗಿಲ್ ಯುದ್ಧ ವಿಜಯೋತ್ಸವ ವಿಶೇಷ
ದ್ರಾಸ್, ಜು. 23 : ಕಾಶ್ಮೀರದ ಆಸೆಗಾಗಿ ಭಾರತದ ವಿರುದ್ಧ ಕಾಲುಕೆರೆದು ಯುದ್ಧಕ್ಕೆ ನಿಂತ ಪಾಕಿಸ್ತಾನವನ್ನು, ಪ್ರಾಣದ ಹಂಗು ತೊರೆದು ಸದೆಬಡಿದ ಧೀರೋದಾತ್ತ ಸೈನಿಕರಿಗೊಂದು ಸಲಾಂ. ಕಾರ್ಗಿಲ್ ಯುದ್ಧದಲ್ಲಿ ಶೌರ್ಯ ಮೆರೆದು ಪ್ರಾಣತೆತ್ತ ಭಾರತದ ಹೆಮ್ಮೆಯ ಕಲಿಗಳ ನೆನಪಿಗಾಗಿ ಜುಲೈ 26ರಂದು ಭಾರತ ಕಾರ್ಗಿಲ್ ವಿಜಯ್ ದಿವಸ್ ಆಚರಿಸುತ್ತಿದೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ನಿಯಂತ್ರಣಾ ಗಡಿಯನ್ನು ದಾಟಿ ಭಾರತದೊಳಗೆ ಶತ್ರುಪಡೆ ಪ್ರವೇಶಿಸಿದಾಗ 1999ರ ಮೇ 8ರಂದು ಅಧಿಕೃತವಾಗಿ ಯುದ್ಧ ಆರಂಭವಾಗಿತ್ತು. ಸತತ ಮೂರು ತಿಂಗಳ ಕಾಲ ನಡೆದ ಯುದ್ಧ ಜು.4ರಂದು, ಟೈಗರ್ ಹಿಲ್ ವಶಕ್ಕೆ ಪಡೆಯುವುದರೊಂದಿಗೆ ಕೊನೆಗೊಂಡಿತ್ತು. ದ್ರಾಸ್ ಪ್ರದೇಶ, ಪೂರ್ವ ಶ್ರೀನಗರದ ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡ ಭಾರತೀಯ ಸೇನೆ ಜು.26ರಂದು ಟೈಗರ್ ಹಿಲ್ ಮೇಲೆ ತ್ರಿವರ್ಣ ಧ್ವಜ ಹಾರಿಸಿತ್ತು.
ಅಮೆರಿಕದ ಅಂದಿನ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ಮಧ್ಯಸ್ಥಿಕೆಯಿಂದಾಗಿ ಪಾಕಿಸ್ತಾನದ ಅಂದಿನ ಪ್ರಧಾನಿ ನವಾಜ್ ಷರೀಫ್ ಅವರು ಪಾಕಿಸ್ತಾನಿ ಸೇನೆಯನ್ನು ಹಿಂತೆಗೆದುಕೊಂಡಿದ್ದರು. ಭಾರತದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಜು.26ರನ್ನು 'ಕಾರ್ಗಿಲ್ ವಿಜಯ್ ದಿವಸ್' ಎಂದು ಷೋಘಿಸಿದರು. ಯುದ್ಧದಲ್ಲಿ ಮಡಿದ 527 ಹುತಾತ್ಮ ಯೋಧರ ನೆನಪಿಗಾಗಿ ಈ ದಿನವನ್ನು ಸಮರ್ಪಿಸಲಾಗಿದೆ. ಯೋಧರ ನೆನಪಿಗಾಗಿ ಸ್ಥಾಪಿಸಲಾಗಿರುವ ಯುದ್ಧ ಸ್ಮಾರಕದ ಕುರಿತು ಇನ್ನಷ್ಟು ಮಾಹಿತಿ ಮುಂದಿದೆ. ['ದಿಕ್ಕೆಟ್ಟು ಓಡುತ್ತಿದ್ದ ನನ್ನನ್ನು ಜವಾನ ತಡೆಗಟ್ಟಿದ್ದ']

ಟೈಗರ್ ಹಿಲ್ ಮೇಲೆ ವಿಜಯೋತ್ಸವದ ಧ್ವಜ
'ಆಪರೇಷನ್ ವಿಜಯ್'ನ್ನು ಯಶಸ್ವಿಯಾಗಿ ಪೂರೈಸಿದ ಸವಿನೆನಪಿಗಾಗಿ ಜು.26ರಂದು ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಗುತ್ತಿದೆ. ಪಾಕಿಸ್ತಾನದ ನುಸುಳಕೋರರನ್ನು ಹತ್ತಿಕ್ಕಿದ ಭಾರತದ ಸೈನಿಕರು ಜುಲೈ 26ರಂದು ಟೈಗರ್ ಹಿಲ್ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಿಸಿದರು.

ಭಾರತದ ಸೈನಿಕರಿಗಾಗಿ ಯುದ್ಧ ಸ್ಮಾರಕ
ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿ 1ಡಿನಲ್ಲಿ, ಟೊಲೋಲಿಂಗ್ ಹಿಲ್ ಅಡಿಯಲ್ಲಿ ದ್ರಾಸ್ ಯುದ್ಧ ಸ್ಮಾರಕ ಅಥವಾ ವಿಜಯಪಥ್ ನಿರ್ಮಿಸಲಾಗಿದೆ. 1999ರಲ್ಲಿ ನಡೆದ ಭಾರತ-ಪಾಕಿಸ್ತಾನದ ನಡುವಿನ ಯುದ್ಧದಲ್ಲಿ ಜೀವತೆತ್ತ ಭಾರತೀಯ ಧೀರ ಯೋಧರ ನೆನಪಿಗಾಗಿ ಇದನ್ನು ನಿರ್ಮಿಸಲಾಗಿದೆ.

ತಾಯಿನಾಡಿಗಾಗಿ ಚಳಿಯನ್ನು ಲೆಕ್ಕಿಸದೆ ಹೋರಾಡಿದ ಸೈನಿಕರು
ದ್ರಾಸ್ ಪ್ರದೇಶವನ್ನು ವಿಶ್ವದ ಎರಡನೇ ಅತೀ ಹೆಚ್ಚು ಶೀತ ಪ್ರದೇಶವೆಂದು ಕರೆಯಲಾಗುತ್ತದೆ. ಇಂಥ ಪ್ರದೇಶದಲ್ಲಿ ಮರಗಟ್ಟಿಸುವ ಚಳಿಯನ್ನು ಲೆಕ್ಕಿಸದೆ ತಾಯಿನಾಡಿಗಾಗಿ ಭಾರತೀಯ ಸೈನಿಕರು ಎಷ್ಟು ಸಂಕಷ್ಟಮಯ ಪರಿಸ್ಥಿತಿಯನ್ನು ಎದುರಿಸಿರಬಹುದು ಎಂಬುದನ್ನು ನೆನೆದರು ಮೈಯಲ್ಲಿ ರಕ್ತ ಹೆಪ್ಪುಗಟ್ಟಿದಂತಾಗುತ್ತದೆ.

ಯಾವುದೇ ತ್ಯಾಗ ದೇಶಕ್ಕಿಂತ ದೊಡ್ಡದಲ್ಲ
ದ್ರಾಸ್ ನಲ್ಲಿ ನೆಡಲಾಗಿರುವ ಹೋರ್ಡಿಂಗ್ ನಲ್ಲಿ ಈ ರೀತಿ ಬರೆಯಲಾಗಿದೆ - "ಯಾವುದೇ ಕಾರ್ಯ ಕಷ್ಟಕರವಲ್ಲ, ಯಾವುದೇ ತ್ಯಾಗ (ದೇಶಕ್ಕಿಂತ) ದೊಡ್ಡದಲ್ಲ". ನಮ್ಮ ಸೈನಿಕರ ಶೂರತನಕ್ಕೆ ಈ ಸಂದೇಶ ಕನ್ನಡಿ ಹಿಡಿದಿದೆ.

ಯಾವಾಗಲೂ ಬೆಳಗುತ್ತಿರುವ ಅಮರ ಜವಾನ್ ಜ್ಯೋತಿ
ಭರತ ಭೂಮಿಗಾಗಿ ಪ್ರಾಣ ತೊರೆದ ಕಾರ್ಗಿಲ್ ಯುದ್ಧ ಹೀರೋಗಳ ನೆನಪಿಗಾಗಿ ನಿರ್ಮಿಸಲಾಗಿರುವ ಅಮರ ಜವಾನ್ ಜ್ಯೋತಿ ಯಾವತ್ತೂ ಬೆಳಗುತ್ತಿರುತ್ತದೆ. ದಿನದ 24 ಗಂಟೆಗಳ ಕಾಲ ಇದನ್ನು ಸೈನಿಕರು ಕಾಯುತ್ತಿರುತ್ತಾರೆ. ಪ್ರತಿ ವರ್ಷ ಪ್ರಧಾನಿ, ಸೇನೆಯ ಮುಖ್ಯಸ್ಥರು ಈ ಸ್ಥಳಕ್ಕೆ ಬಂದು ಹೂಗುಚ್ಛ ಇಟ್ಟು ಗೌರವ ಸೂಚಿಸುತ್ತಾರೆ.

ಧೀರ ಸೈನಿಕರ ಹೆಸರು ಸುವರ್ಣಾಕ್ಷರಗಳಲ್ಲಿ
ಕಾರ್ಗಿಲ್ ಯುದ್ಧದಲ್ಲಿ ಮಡಿದ ಹುತಾತ್ಮ ಯೋಧರ ಹೆಸರುಗಳನ್ನು ಈ ಸ್ಮಾರಕ ಗೋಡೆಯ ಮೇಲೆ ಬರೆಯಲಾಗಿದೆ. ಈ ಗೋಡೆಯ ಮೇಲೆ ಹೀಗೆ ಬರೆಯಲಾಗಿದೆ - "Beneath This Earth Young Warriors Sleep"

ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ
ಮಾಜಿ ಸಂಸದ ಮತ್ತು ಉದ್ಯಮಿ ನವೀನ್ ಜಿಂದಾಲ್ ಅವರು 2004ರಲ್ಲಿ ಇಲ್ಲಿ ಧ್ವಜ ಪ್ರತಿಷ್ಠಾನ ಸ್ಥಾಪಿಸಿ, ಸೇನೆಗೆ ಭಾರತೀಯ ಧ್ವಜವನ್ನು ಉಡುಗೊರೆಯಾಗಿ ನೀಡಿದ್ದಾರೆ. ಇಲ್ಲಿ ತ್ರಿವರ್ಣ ಧ್ವಜ ಯಾವತ್ತೂ ಹಾರುತ್ತಿರುತ್ತದೆ. ಇದು ನಮ್ಮ ದೇಶದ ಹೆಮ್ಮೆಯ ಪ್ರೀತಿಯ ಸಂಕೇತ. ನಾವು ಇದನ್ನು ಎಂದಿಗೂ ಗೌರವಿಸುತ್ತಿರಬೇಕು ಎಂದು ಜಿಂದಾಲ್ ಹೇಳಿದ್ದರು.

ಸೇನೆ ಸೇರಲು ಯುವಕರಿಗೆ ಪ್ರೇರೇಪಣೆ
ಯುವ ಭಾರತೀಯರು ಸೇನೆ ಸೇರಲು, ದೇಶಭಕ್ತಿ ಬೆಳೆಸಿಕೊಳ್ಳಲು ಮತ್ತು ಭಾರತವನ್ನು ಪ್ರೀತಿಸಲು ಯುದ್ಧ ಸ್ಮಾರಕ ಪ್ರೇರೇಪಣೆಯಾಗಿದೆ. ಪ್ರಸ್ತುತ ಕೇಂದ್ರ ಆಯವ್ಯಯದಲ್ಲಿ ದೆಹಲಿಯ ಪ್ರಿನ್ಸ್ ಪಾರ್ಕ್ ನಲ್ಲಿ ಯುದ್ಧ ಸ್ಮಾರಕ ಮತ್ತು ಯುದ್ಧ ಸಂಗ್ರಹಾಲಯ ಸ್ಥಾಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.

ಭಾರತೀಯ ಯೋಧರ ತ್ಯಾಗದ ಕಥೆ
ಪಾಕಿಸ್ತಾನಿ ಶತ್ರುಗಳನ್ನು ಬಗ್ಗುಬಡಿದು ಭಾರತೀಯ ತ್ರಿವರ್ಣ ಧ್ವಜವನ್ನು ಕಾಶ್ಮೀರದಲ್ಲಿ ಹಾರಿಸಿದ ಹುತಾತ್ಮ ಭಾರತೀಯ ಯೋಧರನ್ನು ಎಷ್ಟು ಸ್ಮರಿಸಿದರೂ ಸಾಲದು. ಕನಿಷ್ಠಪಕ್ಷ ಅವರಿಗಾಗಿ ಒಂದು ಸೆಲ್ಯೂಟನ್ನಾದರೂ ಹೊಡೆಯೋಣ.












Click it and Unblock the Notifications