Jharkhand Election: ಜಾರ್ಖಂಡ್ನಲ್ಲಿ ಸರ್ಕಾರ ರಚಿಸೋದು ನಾವೇ ಎಂದ ಜೆಎಂಎಂ ನಾಯಕಿ ಕಲ್ಪನಾ ಸೊರೇನ್
ಜಾರ್ಖಂಡ್ನಲ್ಲಿ ಎರಡನೇ ಹಂತದ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು 38 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಮತದಾನದ ದಿನ ಮಾಧ್ಯಮಗಳ ಜೊತೆ ಮಾತನಾಡಿರುವ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷದ ನಾಯಕಿ ಕಲ್ಪನಾ ಸೊರೇನ್, ರಾಜ್ಯದಲ್ಲಿ ಮತ್ತೆ ನಮ್ಮದೇ ಸರ್ಕಾರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂಡಿಯಾ ಒಕ್ಕೂಟದ ಪಕ್ಷಗಳು ಒಗ್ಗಟ್ಟಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಜೆಎಂಎಂ, ಕಾಂಗ್ರೆಸ್ ಇತರ ಮೈತ್ರಿ ಪಕ್ಷಗಳು ಸೀಟು ಹಂಚಿಕೆ ಮಾಡಿಕೊಂಡಿದ್ದು ಸ್ಪರ್ಧಿಸಿದೆ. ಬಿಜೆಪಿ ನೇತೃತ್ವದ ಎನ್ಡಿಎ ಈ ಬಾರಿ ಇಂಡಿಯಾ ಒಕ್ಕೂಟ ಸೋಲಿಸಿ ಅಧಿಕಾರದ ಗದ್ದುಗೆ ಏರುವ ವಿಶ್ವಾಸದಲ್ಲಿದೆ.

ಬುಧವಾರ ಮಾತನಾಡಿದ ಕಲ್ಪನಾ ಸೊರೇನ್, ಇಂಡಿಯಾ ಬ್ಲಾಕ್ ಈ ಬಾರಿ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಅವರ ಅಭಿವೃದ್ಧಿ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹೇಮಂತ್ ಸೊರೇನ್ ಪರಿಣಾಮಕಾರಿ ನಾಯಕ, ಅವರು ಮತ್ತೆ ಜಾರ್ಖಂಡ್ ಮುಖ್ಯಮಂತ್ರಿಯಾಗಬೇಕು ಎಂದು ಹೇಳಿದ್ದಾರೆ.
"ಜಾರ್ಖಂಡ್ ರಾಜ್ಯವು ರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಮಹಿಳೆಯರಿಗೆ ಸಿಗಬೇಕಾದ ಗೌರವ ಸಿಗುತ್ತಿದೆ. ಹೇಮಂತ್ ಸೊರೇನ್ ರಾಜ್ಯದ ಮಹಿಳೆಯರ ಮಗ ಮತ್ತು ಸಹೋದರನಂತೆ ಕೆಲಸ ಮಾಡಿದ್ದಾರೆ. ಜಾರ್ಖಂಡ್ ರಾಜ್ಯದ ಅಭಿವೃದ್ಧಿಗಾಗಿ ಹೇಮಂತ್ ಸೋರೆನ್ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ನನ್ನ ಆಲೋಚನೆಗಳನ್ನು ನನ್ನ ಕೆಲಸದ ಮೂಲಕ ಹೇಳಲು ಪ್ರಯತ್ನಿಸುತ್ತೇನೆ, ಬಿಜೆಪಿ ಅಭಿವೃದ್ಧಿ ಬಗ್ಗೆ ಮಾತನಾಡಲು ಬಯಸುವುದಿಲ್ಲ, ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಮನವಿ
ಪ್ರಜಾಪ್ರಭುತ್ವದ ಉಳಿವಿಗಾಗಿ ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಮತ ಚಲಾಯಿಸಬೇಕು ಎಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ. ಎಕ್ಸ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದು, ಜಾರ್ಖಂಡ್ ಮತ್ತು ಮಹಾರಾಷ್ಟ್ರ ಜನತೆಗೆ ವಿಶೇಷ ಸಂದೇಶ ನೀಡಿದ್ದಾರೆ.
"ಶಿವಾಜಿ-ಶಾಹು-ಫುಲೆ-ಅಂಬೇಡ್ಕರ್ ಅವರ ಸಿದ್ಧಾಂತವನ್ನು ಅನುಸರಿಸುವ ಮಹಾರಾಷ್ಟ್ರದ ಎಲ್ಲಾ ಮತದಾರರು ಗರಿಷ್ಠ ಸಂಖ್ಯೆಯಲ್ಲಿ ಮತ ಚಲಾಯಿಸಬೇಕು, ಮಹಾರಾಷ್ಟ್ರದ ಹೆಮ್ಮೆ, ರಾಜ್ಯದ ಏಳಿಗೆ ಮತ್ತು ದಶಕಗಳಿಂದ ಆಗುತ್ತಿರುವ ಅಭಿವೃದ್ಧಿಯನ್ನು ಕಾಪಡಬೇಕು. ಅವಕಾಶವಾದಿ ರಾಜಕಾರಣ, ಆಯ್ದ ಬಂಡವಾಳಶಾಹಿಗಳು ಮತ್ತು ರೈತರ ಮತ್ತು ಯುವಕರ ಭವಿಷ್ಯಕ್ಕೆ ಧಕ್ಕೆ ತರುವ ಶಕ್ತಿಗಳಿಳನ್ನು ಮಹಾರಾಷ್ಟ್ರದಿಂದ ದೂರವಿಡಿ ಎಂದು ಮನವಿ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಹಣಬಲ ಮತ್ತು ಸ್ನಾಯುಬಲದ ರಾಜಕಾರಣ ಯಾವತ್ತೂ ನಡೆದಿಲ್ಲ, ಮತ ಹಾಕುವ ಮುನ್ನ ಕುಸಿಯುತ್ತಿರುವ ರಾಜಕೀಯ ಮಾನದಂಡಗಳು ಮಹಾರಾಷ್ಟ್ರದ ಸ್ವಾಭಿಮಾನಕ್ಕೆ ಎಷ್ಟು ಘಾಸಿ ಮಾಡಿದೆ ಎನ್ನುವುದನ್ನು ಮತದಾರ ಯೋಚಿಸಬೇಕು ಎಂದಿದ್ದಾರೆ.
ಜಾರ್ಖಂಡ್ನ ಜನರು ಮೊದಲ ಹಂತದಲ್ಲಿ ಸಾರ್ವಜನಿಕ ಕಲ್ಯಾಣ, ನೀರು, ಅರಣ್ಯ, ಭೂಮಿ ಮತ್ತು ಬುಡಕಟ್ಟು ನಾಗರಿಕತೆಯ ರಕ್ಷಣೆಗಾಗಿ ಮತ ಹಾಕಿದ್ದಾರೆ, ಈ ಹಂತದಲ್ಲೂ ನೀವು ನಿಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕು. ಸಾಮಾಜಿಕ ನ್ಯಾಯದ ಗೆಲುವು ನಿಶ್ಚಿತ, ಧ್ರುವೀಕರಣದ ಸೋಲು ನಿಶ್ಚಿತವಾಗಿದೆ ಎಂದು ಹೇಳಿದ್ದಾರೆ.
ಯುವ ಮತದಾರರು ಮರೆಯದೇ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಹಬ್ಬದಲ್ಲಿ ಭಾಗವಹಿಸಬೇಕು. ನೀವೂ ಮತ ಹಾಕಿ ಮತ್ತು ಮತ ಹಾಕಲು ಇತರರನ್ನು ಪ್ರೋತ್ಸಾಹಿಸಿ ಎಂದು ಕೇಳಿದ್ದಾರೆ.












Click it and Unblock the Notifications