Jharkhand Election 2024: ನಾವು ಅಧಿಕಾರಕ್ಕೆ ಬಂದರೆ 2.87 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ- ಶಿವರಾಜ್ ಸಿಂಗ್ ಭರವಸೆ
ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಸಿದ್ಧವಾಗುತ್ತಿದೆ. ಪ್ರಬಲ ಪಕ್ಷಗಳು ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಹಲವಾರು ಭರವಸೆಗಳನ್ನು ನೀಡುತ್ತಿವೆ. ಇಂದು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಮತದಾರರನ್ನು ಸೆಳೆಯಲು ಪ್ರಮುಖ ಭರವಸೆಯನ್ನು ನೀಡಿದರು.
ಹೌದು.. ಜಾರ್ಖಂಡ್ ನ ಬಹರಗೋರಾದಲ್ಲಿ ಪರಿವರ್ತನ್ ಯಾತ್ರೆಯ ವೇಳೆ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಜನರನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಅವರು ಮುಂಬರುವ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದರೆ ಸರ್ಕಾರಿ ವಲಯದಲ್ಲಿ ಖಾಲಿ ಇರುವ 2.87 ಲಕ್ಷಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿದರು. ಜಾರ್ಖಂಡ್ನಲ್ಲಿ ಉದ್ಯೋಗ ಸಮಸ್ಯೆಗಳನ್ನು ಪರಿಹರಿಸಲು ಪಕ್ಷದ ಬದ್ಧತೆಯನ್ನು ಎತ್ತಿ ತೋರಿಸಲು ಬಿಜೆಪಿ ಈ ಭರವಸೆಯನ್ನು ನೀಡಿದೆ.

ಈ ವೇಳೆ ಪ್ರಸ್ತುತ ಹೇಮಂತ್ ಸೊರೆನ್ ಸರ್ಕಾರ ಉದ್ಯೋಗ ಸೃಷ್ಟಿಯಲ್ಲಿ ವಿಫಲವಾಗಿದೆ ಎಂದು ಚೌಹಾಣ್ ಟೀಕಿಸಿದರು. ಹೇಮಂತ್ ಸೊರೆನ್ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ನಿರುದ್ಯೋಗವನ್ನು ನಿಭಾಯಿಸುತ್ತಿಲ್ಲ ಎಂದು ಅವರು ದೂರಿದರು. ಆದರೆ ನಿರುದ್ಯೋಗವನ್ನು ದೂರ ಮಾಡಲು ಬಿಜೆಪಿ ಬೇಕಿರುವ ಎಲ್ಲಾ ಪ್ರಯತ್ನವನ್ನು ಮಾಡಲಿದೆ ಎಂದು ಅವರು ಹೇಳಿದರು.
ಹೇಮಂತ್ ಸೊರೆನ್ ಸರ್ಕಾರ ಉದ್ಯೋಗ ಸೃಷ್ಟಿಯಲ್ಲಿ ಹಿಂದೇಟು ಹಾಕುತ್ತಿದೆ. ಅಲ್ಲದೆ ಪ್ರಸ್ತುತ ಈ ಸರ್ಕಾರ ಜಾರ್ಖಂಡ್ ನಿವಾಸಿಗಳ ಭದ್ರತೆ, ಅವರ ಭೂಮಿ ಮತ್ತು ಅವರ ಹಕ್ಕುಗಳಿಗೆ ಅಪಾಯವನ್ನುಂಟುಮಾಡುತ್ತಿದೆ ಎಂದು ಅವರು ಆರೋಪಿಸಿದರು. ಅಕ್ರಮ ವಲಸಿಗರ ಸಮಸ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಕೇಂದ್ರ ಸಚಿವ ಶಿವರಾಜ್ ಸಿಂಗ್, ಸೋರೆನ್ ಸರ್ಕಾರವು ಸಮಸ್ಯೆಯನ್ನು ನಿಭಾಯಿಸಲು ವಿಫಲವಾಗಿರುವುದು ಮಾತ್ರವಲ್ಲದೆ ಚುನಾವಣಾ ಲಾಭಕ್ಕಾಗಿ ಮತದಾರರ ಪಟ್ಟಿ ಮತ್ತು ಆಧಾರ್ ದಾಖಲೆಗಳು ಇಲ್ಲದ ವ್ಯಕ್ತಿಗಳನ್ನು ಸೇರಿಸುವ ಮೂಲಕ ಅದನ್ನು ಉಲ್ಬಣಗೊಳಿಸಿದೆ ಎಂದು ಆರೋಪಿಸಿದರು. ಹೀಗಾಗಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಕ್ರಮ ವಲಸಿಗರನ್ನು ಗುರುತಿಸಿ ಗಡಿಪಾರು ಮಾಡಲು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ಸಿ) ಸೇರಿದಂತೆ ನುಸುಳುಕೋರರ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದರು.

ಜಾರ್ಖಂಡ್ನಾದ್ಯಂತ ನಾಗರಿಕರೊಂದಿಗೆ ಸಂಪರ್ಕ ಸಾಧಿಸುವ ಗುರಿಯನ್ನು ಹೊಂದಿರುವ ಆರು ಪರಿವರ್ತನ್ ಯಾತ್ರೆ ನಡೆಸಲು ಬಿಜೆಪಿ ನಿರ್ಧರಿಸಿದೆ. ಈ ಯಾತ್ರೆ 24 ಜಿಲ್ಲೆಗಳ ಎಲ್ಲಾ 81 ವಿಧಾನಸಭಾ ಕ್ಷೇತ್ರಗಳ ಮೂಲಕ ಹಾದು 5,400 ಕಿಲೋಮೀಟರ್ ದೂರವನ್ನು ಕ್ರಮಿಸಲಿದ್ದು, ಅಕ್ಟೋಬರ್ 2 ರಂದು ಮುಕ್ತಾಯಗೊಳ್ಳಲಿದೆ.
ಈ ಯಾತ್ರೆಯಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಸುಮಾರು 50 ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಬಿಜೆಪಿ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ. ಅವರು ಜೆಎಂಎಂ ನೇತೃತ್ವದ ಸರ್ಕಾರದ ನ್ಯೂನತೆಗಳನ್ನು ಎತ್ತಿ ತೋರಿಸಲು ಮತ್ತು ರಾಜ್ಯದ ಭವಿಷ್ಯದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಪ್ರಸ್ತುತಪಡಿಸಲು ಯಾತ್ರೆಯಲ್ಲಿ ಒಗ್ಗೂಡಲಿದ್ದಾರೆ.
ಉದ್ಯೋಗ ಮತ್ತು ನೇಮಕಾತಿ ವಿಷಯಗಳಲ್ಲಿ ಸೊರೆನ್ ಆಡಳಿತ ವಿಫಲವಾಗಿದೆ. ಹಲವಾರು ಹಗರಣಗಳು ಸೊರೆನ್ ಸರ್ಕಾರದಲ್ಲಿ ನಡೆದಿದ್ದು ಅದನ್ನು ಜನತೆಗೆ ತಿಳಿಸಲು ಹಾಗೂ ಸಮಾಜದಲ್ಲಿ ಬದಲಾವಣೆಗೆ ಒಗ್ಗೂಡಲು ಈ ಯಾತ್ರೆ ಮೂಲಕ ಬಿಜೆಪಿ ಮತಯಾಚನೆ ಮಾಡಲಿದೆ.












Click it and Unblock the Notifications