Jharkhand Election: ಜಾರ್ಖಂಡ್ನಲ್ಲಿ ಬಿಜೆಪಿ ಪ್ರಯತ್ನ ವಿಫಲ; ಭರ್ಜರಿ ಗೆಲುವು ಸಾಧಿಸಿದ ಜೆಂಎಂಎಂ
ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗವಾಗಿದೆ. ಆಡಳಿತಾರೂಢ ಜೆಎಂಎಂ ಭರ್ಜರಿ ಮುನ್ನಡೆ ಸಾಧಿಸಿದ್ದು ಎರಡನೇ ಬಾರಿ ಸರ್ಕಾರ ರಚಿಸಲು ಸಜ್ಜಾಗಿದೆ. ಈ ಬಾರಿ ಎನ್ಡಿಎ ಇಂಡಿಯಾ ಒಕ್ಕೂಟಕ್ಕೆ ಕಠಿಣ ಸವಾಲಾಕಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು, ಚುನಾವಣೋತ್ತರ ಸಮೀಕ್ಷೆಗಳು ಕೂಡ ಈ ಬಾರಿ ಎನ್ಡಿಎ ಒಕ್ಕೂಟವೇ ಗೆಲ್ಲುತ್ತದೆ ಎಂದು ಹೇಳಿದ್ದವು. ಆದರೆ ಸಮೀಕ್ಷೆಗಳು ಸುಳ್ಳಾಗಿದ್ದು ಜೆಎಂಎಂ ಮತ್ತು ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ.
ಚುನಾವಣೆಯಲ್ಲಿ ಬಿಜೆಪಿ ಹಲವು ವಿಚಾರಗಳನ್ನು ಇಟ್ಟುಕೊಂಡು ಪ್ರಚಾರ ಮಾಡಿತ್ತು. ಬಾಂಗ್ಲಾದೇಶಿ ಒಳನುಸುಳುಕೋರರು ರಾಜ್ಯದಲ್ಲಿ ಡೆಮಾಗ್ರಫಿಯನ್ನು ಬದಲಾಯಿಸುತ್ತಿದ್ದಾರೆ ಮತ್ತು ಜಾರ್ಖಂಡ್ ಜನರ ಭೂಮಿ ಮತ್ತು ಉದ್ಯೋಗ ಕಸಿದುಕೊಳ್ಳುತ್ತಿದ್ದು, ಜೆಎಂಎಂ ಮತ್ತು ಕಾಂಗ್ರೆಸ್ ಅದಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿತ್ತು.

ಜಾರ್ಖಂಡ್ ಬುಡಕಟ್ಟು ಜನರ ರಕ್ಷಣೆಗಾಗಿ ಬಿಜೆಪಿ ಬದ್ದವಾಗಿದ್ದು, ರೋಟಿ, ಭೂಮಿ ಮತ್ತು ಮಹಿಳೆಯ ರಕ್ಷಣೆಗಾಗಿ ಬಿಜೆಪಿಗೆ ಮತ ಹಾಕುವಂತೆ ಪ್ರಚಾರ ಮಾಡಿತ್ತು. ತಾವು ಅಧಿಕಾರಕ್ಕೆ ಬಂದರೆ ಬಾಂಗ್ಲಾದೇಶಿ ನುಸುಳುಕೋರರನ್ನು ಗುರುತಿಸಿ ರಾಜ್ಯದಿಂದ ಹೊರಹಾಕುವುದಾಗಿ ಭರವಸೆ ನೀಡಿತ್ತು, ಆದರೆ ಜಾರ್ಖಂಡ್ ಮತದಾರ ಬಿಜೆಪಿಯನ್ನು ತಿರಸ್ಕರಿಸಿದ್ದು, ಆಡಳಿತಾರೂಢ ಸರ್ಕಾರಕ್ಕೆ ಮತ್ತೊಮ್ಮೆ ಜೈ ಅಂದಿದ್ದಾನೆ.
ಕೆಲಸ ಮಾಡದ ಬಿಜೆಪಿ ಗ್ಯಾರಂಟಿ
ಬಿಜೆಪಿ ಮತದಾರರನ್ನು ಸೆಳೆಯಲು ಭರ್ಜರಿ ಕೊಡುಗೆಗಳನ್ನು ಘೋಷಣೆ ಮಾಡಿತ್ತು. 5 ಲಕ್ಷ ಉದ್ಯೋಗ ಸೃಷ್ಟಿಸುವ ಭರವಸೆ ಕೊಟ್ಟಿತ್ತು. ಮಹಿಳೆಯರಿಗೆ ಮಾಸಿಕ 2100 ರೂಪಾಯಿ ಕೊಡುವುದಾಗಿ ಭರವಸೆ ನೀಡಿತ್ತು. ದೀಪಾವಳಿ ಮತ್ತು ರಕ್ಷಾಬಂಧನದ ವೇಳೆ ಉಚಿತ ಎಲ್ಪಿಜಿ ಸಿಲಿಂಡರ್ ಕೊಡುವುದಾಗಿ ಹೇಳಿತ್ತು. ಆದರೂ ಮತದಾರ ಬಿಜೆಪಿಯನ್ನು ತಿರಸ್ಕರಿಸಿದ್ದಾನೆ.
ಅಚ್ಚರಿ ಮೂಡಿಸಿದ ಆರ್ಜೆಡಿ
ಅಚ್ಚರಿ ಎನ್ನುವಂತೆ ರಾಜ್ಯದಲ್ಲಿ ಅಷ್ಟೇನೂ ಪ್ರಾಬಲ್ಯ ಹೊಂದಿರದ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಪಕ್ಷವು ಸ್ಪರ್ಧಿಸಿರುವ ಆರು ಸ್ಥಾನಗಳಲ್ಲಿ ಐದರಲ್ಲಿ ಮುನ್ನಡೆ ಸಾಧಿಸಿದೆ. ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಆರ್ಜೆಡಿ ಅಭ್ಯರ್ಥಿಗಳು ಹಾಲಿ ಬಿಜೆಪಿ ಶಾಸಕರಿಗಿಂತ ಮುಂದಿದ್ದಾರೆ.
ಆರ್ಜೆಡಿ ಜೆಎಂಎಂ-ಕಾಂಗ್ರೆಸ್ ಮೈತ್ರಿಕೂಟದ ಭಾಗವಾಗಿದೆ.
ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ರಾಜ್ಯದ ಒಟ್ಟು 81 ಸ್ಥಾನಗಳಿದ್ದು, 55 ಸ್ಥಾನಗಳಲ್ಲಿ ಜೆಎಂಎಂ ನೇತೃತ್ವದ ಒಕ್ಕೂಟ ಗೆಲುವು ಸಾಧಿಸಿದೆ. ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟ 25 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದು ಮತ್ತೆ ವಿಪಕ್ಷ ಸ್ಥಾನದಲ್ಲಿ ಮುಂದುವರೆಯಲಿದೆ. ಮತ್ತೊಮ್ಮೆ ಹೇಮಂತ್ ಸೊರೇನ್ ಮುಖ್ಯಮಂತ್ರಿಯಾಗುವುದು ಖಚಿತವಾಗಿದೆ.












Click it and Unblock the Notifications