ಜಮ್ಮು ಕಾಶ್ಮೀರ ತಾತ್ಕಾಲಿಕ ಕೇಂದ್ರಾಡಳಿತ ಪ್ರದೇಶ: ಮೋದಿ
ನವದೆಹಲಿ, ಆಗಸ್ಟ್ 08: ಆರ್ಟಿಕಲ್ 370 ರದ್ದಾಗಿ ಜಮ್ಮು ಕಾಶ್ಮೀರ ಮತ್ತು ಲಡಾಕ್ ಕೇಂದ್ರಾಡಳಿತ ಪ್ರದೇಶವಾಗಿ ವಿಂಗಡಣೆ ಆದ ಬಳಿಕ ಪ್ರಧಾನಿ ಮೋದಿ ಅವರು ಮೊದಲ ಬಾರಿಗೆ ಇಂದು ಜಮ್ಮು ಕಾಶ್ಮೀರದ ಬಗ್ಗೆ ಮಾತನಾಡಿದ್ದಾರೆ.
ಜಮ್ಮು ಕಾಶ್ಮೀರದ ಜನ ದಶಕಗಳ ಕಾಲ ಯಾವ-ಯಾವ ಹಕ್ಕುಗಳಿಂದ ವಂಚಿತರಾಗಿದ್ದರು ಎಂದು ವಿವರಿಸಿದ ಮೋದಿ, ಕೇಂದ್ರ ಸರ್ಕಾರವು ಕಣಿವೆ ರಾಜ್ಯದ ಜನರಿಗಾಗಿ ಮಾಡಲಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ನೀಲ ನಕ್ಷೆಯನ್ನೂ ನೀಡಿದರು.
ಈದ್ ಹಬ್ಬ ಆಚರಣೆಗೆ ಅವಕಾಶ ಕೊಡಲಾಗುತ್ತದೆ, ಕೆಲವೇ ತಿಂಗಳಲ್ಲಿ ಚುನಾವಣೆಯನ್ನೂ ನಡೆಸಲಾಗುತ್ತದೆ ಎಂಬ ಭರವಸೆ ನೀಡಿದ ಮೋದಿ ತಮ್ಮ ಸುದೀರ್ಘ ಭಾಷಣದಲ್ಲಿ ಮಹತ್ವದ ವಿಷಯವೊಂದನ್ನು ಹೇಳಿದರು.

ಜಮ್ಮು ಕಾಶ್ಮೀರವನ್ನು ತಾತ್ಕಾಲಿಕವಾಗಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿದೆ ಕಾಲ ಸರಿದಂತೆ ಜಮ್ಮು ಕಾಶ್ಮೀರವು ದೇಶದ ಇತರ ರಾಜ್ಯಗಳಂತೆ ಅದೂ ಸಹ ರಾಜ್ಯದ ಸ್ಥಾನ ಮಾನ ಪಡೆದುಕೊಳ್ಳಲಿದೆ ಎಂದು ಮೋದಿ ಅವರು ಭಾಷಣದಲ್ಲಿ ಹೇಳಿದರು.
ಜಮ್ಮು ಕಾಶ್ಮೀರವನ್ನು ಪುನಃ ರಾಜ್ಯವನ್ನಾಗಿ ಬದಲಾಯಿಸುವುದಾಗಿ ಹೇಳಿದ ಮೋದಿ ಅವರು ಲಡಾಕ್ ಅನ್ನು ಮಾತ್ರ ಕೇಂದ್ರಾಡಳಿತ ಪ್ರದೇಶವನ್ನಾಗಿಯೇ ಇಡುವುದಾಗಿಯೂ ಸ್ಪಷ್ಟಪಡಿಸಿದರು.
ಸಂಸತ್ನಲ್ಲಿ ಅಂಗೀಕಾರವಾದ ಜಮ್ಮು ಕಾಶ್ಮೀರ ವಿಭಜನೆ ವಿಧೇಯಕದಂತೆ ಪ್ರಸ್ತುತ ಜಮ್ಮು ಕಾಶ್ಮೀರವು ವಿಧಾನಸಭೆಯುಳ್ಳ ಕೇಂದ್ರಾಡಳಿತ ಪ್ರದೇಶವಾಗಿದೆ. ಲಡಾಕ್ ವಿಧಾನಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶವಾಗಿ ವಿಂಗಡಣೆ ಆಗಿದೆ.












Click it and Unblock the Notifications