ಇಂದು ಹಿಮಾಚಲ ಸಿಎಂ ಆಯ್ಕೆ, ರೇಸ್ ನಲ್ಲಿ ಜೈರಾಮ್, ಜೆಪಿ ನಡ್ಡಾ
ಶಿಮ್ಲಾ, ಡಿಸೆಂಬರ್ 24: ಶನಿವಾರ ರಾತ್ರಿ ಪ್ರೇಮ್ ಕುಮಾರ್ ದುಮಾಲ್ ಮುಖ್ಯಮಂತ್ರಿ ಹುದ್ದೆಯಿಂದ ಹಿಂದೆ ಸರಿದಿದ್ದಾರೆ. ಇಂದು ಬಿಜೆಪಿಯ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು ಸಭೆಗೂ ಮೊದಲು ದುಮಾಲ್ ಈ ಘೋಷಣೆ ಮಾಡಿದ್ದಾರೆ.
ಕುತೂಹಲ ಕೆರಳಿಸಿರುವ ಹಿಮಾಚಲ ಸಿಎಂ ಆಯ್ಕೆ
ಶಾಸಕಾಂಗ ಪಕ್ಷದ ಸಭೆಗೂ ಮೊದಲು ಐದು ಬಾರಿಯ ಶಾಸಕ ಜೈರಾಮ್ ಠಾಕೂರ್ ಮತ್ತು ಕೇಂದ್ರ ಸಚಿವ ಜೆಪಿ ನಡ್ಡಾ ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿದ್ದಾರೆ. ಇವರಲ್ಲಿ ಜೆ.ಪಿ ನಡ್ಡಾ ಮುಖ್ಯಮಂತ್ರಿಯಾಗುವ ಎಲ್ಲಾ ಸಾಧ್ಯತೆ ಇದೆ.
ಇಂದು ಶಾಸಕಾಂಗ ಸಭೆ ನಡೆಯಲಿದ್ದು ಹೈಕಮಾಂಡ್ ಕಡೆಯಿಂದ ನಿರ್ಮಲಾ ಸೀತಾರಾಮನ್ ಮತ್ತು ನರೇಂದ್ರ ಸಿಂಗ್ ತೋಮರ್ ವೀಕ್ಷಕರಾಗಿ ಆಗಮಿಸಿದ್ದಾರೆ. ಶಾಸಕರ ಜತೆ ಸಮಾಲೋಚನೆ ಮಾಡಿ ಮುಖ್ಯಮಂತ್ರಿ ಹುದ್ದೆಗೆ ಹೆಸರು ಅಂತಿಮಗೊಳಿಸಲಿದ್ದಾರೆ.
ಹಿಮಾಚಲದ ಸಿಎಂ ರೇಸ್: ಪ್ರೇಮ್ ಕುಮಾರ್ ಈಗಲೂ ನೆಚ್ಚಿನ ಆಯ್ಕೆ
"ಮಾಧ್ಯಮಗಳಲ್ಲಿ ನಾನು ಮುಖ್ಯಮಂತ್ರಿ ರೇಸ್ ನಲ್ಲಿದ್ದೇನೆ ಎಂದು ಗಾಳಿ ಸುದ್ದಿ ಹರಿದಾಡುತ್ತಿದೆ. ಆದರೆ ಫಲಿತಾಂಶದ ದಿನದಿಂದ ನಾನು ಇದನ್ನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ನಾನು ಮುಖ್ಯಮಂತ್ರಿ ರಸ್ ನಲ್ಲಿಲ್ಲ," ಎಂದು ಧುಮಾಲ್ ಶನಿವಾರ ಸ್ಪಷ್ಟಪಡಿಸಿದ್ದಾರೆ.
ಇದಕ್ಕೂ ಮೊದಲು ಗುರುವಾರ ಕೇಂದ್ರದ ವೀಕ್ಷಕರು ಆಗಮಿಸಿದಾಗ ಠಾಕೂರ್ ಮತ್ತು ಧುಮಾಲ್ ಬೆಂಬಲಿಗರು ಘೋಷಣೆಗಳನ್ನು ಕೂಗಿದ್ದರು. ಇದೀಗ ದುಮಾಲ್ ಮುಖ್ಯಮಂತ್ರಿ ಹಿಂದೆ ಸರಿದಿರುವುದರಿಂದ ಹೊಸ ನಾಯಕನ ಆಯ್ಕೆಗೆ ಹಾದಿ ಸುಗಮವಾಗಿದೆ.