ಬದುಕಿದ್ದವನ ಫೋಟೋಗೆ ಹಾರ ಹಾಕಿಸಿ ನಗೆಪಾಟಲಿಗೀಡಾದ ಜೈಪುರ ಪೊಲೀಸರು
ಜೈಪುರ, ಆಗಸ್ಟ್ 6: ಅಪಾಯಕಾರಿ ಕಿಕಿ ಡ್ಯಾನ್ಸ್ ಚಾಲೆಂಜ್ ವಿರುದ್ಧ ಜಾಗೃತಿ ಮೂಡಿಸಲು ಪೊಲೀಸರು ವಿವಿಧ ಬಗೆಯ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.
ಕಿಕಿ ಡ್ಯಾನ್ಸ್ ಮಾಡಿದವರ ಗತಿ ಏನಾಗಬಹುದು ಎಂಬುದರ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸಲು ಹೊರಟ ರಾಜಸ್ಥಾನದ ಜೈಪುರ ಪೊಲೀಸರು ಮಾಡಿದ ಯಡವಟ್ಟು ನಗೆಪಾಟಲಿಗೆ ಈಡಾಗಿದೆ.
ಜೈಪುರ ಪೊಲೀಸರು ಯುವಕನೊಬ್ಬನ ಫೋಟೋಗೆ ಹಾರ ಹಾಕಿ ಅದರ ಕೆಳಗೆ 'ಕೆಕೆಯ ಅಮರ ನೆನಪುಗಳಲ್ಲಿ. ಕಿಕಿಯ ಪ್ರಿಯಕರ, ಶಿಗ್ಗಿ (ಕಿಕಿ ಡ್ಯಾನ್ಸ್ ಆರಂಭಿಸಿದ ಅಮೆರಿಕದ ಕಾಮಿಡಿಯನ್) ಮಾಡುವಾಗ ಮೃತಪಟ್ಟ (ಫೆಬ್ರುವರಿ 1995- ಜುಲೈ 2018) ಎಂದು ಬರೆಯಲಾಗಿತ್ತು.
ಈ ಫೋಟೊವುಳ್ಳ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ, ಟಿವಿ ವಾಹಿನಿಗಳಲ್ಲಿ ವ್ಯಾಪಕವಾಗಿ ಹರಿದಾಡಿ ಆ 'ಬದುಕಿರುವ' ವ್ಯಕ್ತಿಗೂ ತಲುಪಿದಾಗಲೇ ಈ ಯಡವಟ್ಟಿನ ಕೆಲಸ ಗೊತ್ತಾಗಿದ್ದು.

ಅಂದಹಾಗೆ, ಈ ಫೋಟೋದಲ್ಲಿರುವ ವ್ಯಕ್ತಿ ಜೈಪುರದವರೂ ಅಲ್ಲ. ನಮ್ಮ ನೆರೆಯ ಕೇರಳದ ಕೊಚ್ಚಿಯವರು. ಎತ್ತಣ ಜೈಪುರ, ಎತ್ತಣ ಕೊಚ್ಚಿ? ಈ ಫೋಟೋದಲ್ಲಿದ್ದ ವ್ಯಕ್ತಿಯ ಹೆಸರು ಜವಹರ್ ಸುಭಾಷ್ ಚಂದ್ರ (30).
'ಮಂಗಳವಾರ ರಾತ್ರಿ ನನ್ನ ಹೆಂಡತಿಗೆ ವಾಟ್ಸಾಪ್ ಸಂದೇಶ ಬಂದಿತ್ತು. ಆದರೆ ನಾವ್ಯಾರೂ ಅದನ್ನು ನೋಡಿರಲಿಲ್ಲ. ಬುಧವಾರ ಬೆಳಿಗ್ಗೆ ಕಚೇರಿಗೆ ಹೋದ ಬಳಿಕ ನನ್ನ ಮೊಬೈಲಿಗೆ ಕರೆಗಳು ಬರತೊಡಗಿದವು.
ವರ್ಷಗಳಿಂದ ನಾನು ಸಂಪರ್ಕ ಇರಿಸಿಕೊಳ್ಳದವರೂ ಫೋನ್ ಮಾಡಿ ನಾನು ಕ್ಷೇಮವಾಗಿದ್ದೇನೆಯೇ ಎಂದು ವಿಚಾರಿಸತೊಡಗಿದವು. ಬಳಿಕವೇ ಆ ಜಾಹೀರಾತಿನ ಬಗ್ಗೆ ಗೊತ್ತಾಗಿದ್ದು' ಎಂದು ಜವಹರ್ ತಿಳಿಸಿದ್ದಾರೆ.
'ಎಲ್ಲೆಂಲ್ಲಿಂದಲೋ ಕರೆಗಳು ಬರುತ್ತಿದ್ದವು. ನಾನು ಮತ್ತು ಕುಟುಂಬದವರು ಹೇಗಿದ್ದೇವೆ ಎಂದು ವಿಚಾರಿಸುತ್ತಿದ್ದರು. ಒಂದು ಗಂಟೆ ಫೋನ್ ಬಿಟ್ಟು ಹೋದರೂ ಕನಿಷ್ಠ 6-7 ಮಿಸ್ಡ್ ಕಾಲ್ಗಳು ಇರುತ್ತಿದ್ದವು. ನನ್ನ ಮನೆಯವರಿಗೂ ಫೋನ್ಗಳು ಬರುತ್ತಿದ್ದವು.
ಆದರೆ, ಇದರಿಂದ ಒಂದು ಲಾಭವೂ ಆಯಿತು. ನಾನು ಸತ್ತೇ ಹೋದೆನೆಂದು ತಿಳಿದು ಕರೆಮಾಡಿದ ಕೆಲವು ಹಳೆಯ ಸ್ನೇಹಿತರು ಮತ್ತೆ ಸಿಕ್ಕರು' ಎಂದು ನಗುತ್ತಾ ಹೇಳಿದ್ದಾರೆ ಅವರು.
ಈ ಜಾಹೀರಾತಿನ ಕಿರಿಕಿರಿ ತಮ್ಮನ್ನು ಕಾಡುವ ಮುನ್ನ ಕಿಕಿ ಡ್ಯಾನ್ಸ್ ಬಗ್ಗೆ ಅಷ್ಟೇನೂ ಮಾಹಿತಿ ಇರಲಿಲ್ಲ ಎಂದು ಜವಹರ್ ಹೇಳಿದ್ದಾರೆ.
'ಜನರು ನರ್ತಿಸುವ ಕೆಲವು ತಮಾಷೆಯ ವಿಡಿಯೋಗಳನ್ನು ವಾಟ್ಸಾಪ್ನಲ್ಲಿ ನೋಡಿದ್ದೆ. ಆದರೆ ನನ್ನ ಫೋಟೋಗೆ ಹೂವಿನ ಹಾರ ಹಾಕಿದ ಜಾಹೀರಾತು ಬರುವವರೆಗೂ ಆ ಚಾಲೆಂಜ್ ಏನೆಂಬುದು ನನಗೆ ಗೊತ್ತೇ ಇರಲಿಲ್ಲ.
ಈಗ ಡ್ರೇಕ್ (ಕಿಕಿ ಹಾಡಿನ ಸೃಷ್ಟಕರ್ತ) ಹಾಗೂ ಕಿಕಿ ಚಾಲೆಂಜ್ ಬಗ್ಗೆ ತಿಳಿದುಕೊಂಡಿದ್ದೇನೆ. ಬೇರಾವುದೋ ರಾಜ್ಯದ ಪೊಲೀಸರು ತಮ್ಮ ಅಧಿಕೃತ ಆಂದೋಲನಕ್ಕಾಗಿ ನನ್ನ ಫೋಟೋ ಬಳಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. ನಾನು ಜೈಪುರಕ್ಕೆ ಇದುವರೆಗೂ ಹೋಗಿಲ್ಲ' ಎಂದಿದ್ದಾರೆ.
ಭಾರತದ ದಕ್ಷಿಣ ಭಾಗದ ಕೊಚ್ಚಿಯಲ್ಲಿರುವ ಯುವಕನ ಫೋಟೋವನ್ನು ಉತ್ತರ ಭಾಗದ ಜೈಪುರದ ಪೊಲೀಸರು ಬಳಸಿಕೊಂಡಿದ್ದು ಹೇಗೆ?
'ಆ ಫೋಟೋ 10 ವರ್ಷ ಹಳೆಯದು. ಜಾಹೀರಾತು ಛಾಯಾಗ್ರಾಹಕನಾದ ನನ್ನ ಬಾಮೈದ ಆ ಫೋಟೋ ತೆಗೆದಿದ್ದ. ಬಳಿಕ ಆ ಫೋಟೋ ಷಟರ್ಸ್ಟಾಕ್ (ಫೋಟೋಗಳ ಸಂಗ್ರಹ ಮಾಡುವ ಅಮೆರಿಕ ಮೂಲದ ವೆಬ್ಸೈಟ್) ಸೇರಿತ್ತು. ಪೊಲೀಸರು ಅದನ್ನು ಅಲ್ಲಿಂದ ಪಡೆದುಕೊಂಡು ಬಳಸಿದ್ದಾರೆ'.
'ನಾವು ಒಪ್ಪಂದ ಮಾಡಿಕೊಂಡ ಜಾಹೀರಾತು ಕಂಪೆನಿ ಕೂಡ ಆಂದೋಲನಕ್ಕೆ ಫೋಟೋ ಆಯ್ಕೆ ಮಾಡುವುದರಲ್ಲಿ ಪಾಲ್ಗೊಂಡಿತ್ತು. ಷಟರ್ಸ್ಟಾಕ್ನಲ್ಲಿ ಬಹಳಷ್ಟು ಮಾಡೆಲ್ಗಳ ಫೋಟೋಗಳಿವೆ. ಅದರಲ್ಲಿ ಜವಹರ್ ಅವರದ್ದೂ ಇತ್ತು. ಆ ಫೋಟೋಗೆ ಹಣ ಕೊಟ್ಟು ಪಡೆದುಕೊಂಡಿದ್ದೇವೆ ಮತ್ತು ಅದು ಕಾನೂನುಬದ್ಧವಾಗಿದೆ' ಎಂದು ಜೈಪುರದ ಪೊಲೀಸ್ ಆಯುಕ್ತ ಸಂಜಯ್ ಅಗರ್ವಾಲ್ ಹೇಳಿದ್ದಾರೆ.
ಈ ಪ್ರಸಂಗದಿಂದ ಸಾಕಷ್ಟು ಕಿರಿಕಿರಿ ಅನುಭವಿಸಿದ್ದರೂ, ಇದರಿಂದ ಒಂದು ಒಳ್ಳೆಯ ಸಂಗತಿ ತಿಳಿದುಕೊಂಡಿದ್ದಾಗಿ ಜವಹರ್ ಹೇಳಿದ್ದಾರೆ.
'ಒಂದು ವೇಳೆ ನಾನು ನಿಜವಾಗಿಯೂ ಸತ್ತರೆ, ನನ್ನ ಹಾಗೂ ನನ್ನ ಕುಟುಂಬದ ಕುರಿತು ತುಂಬಾ ಜನರು ವಿಚಾರಿಸಿಕೊಳ್ಳುತ್ತಾರೆ ಎನ್ನುವುದು ಅರ್ಥವಾಗಿದೆ. ಈ ಬಗ್ಗೆ ಖುಷಿಯಿದೆ' ಎಂದು ಹೇಳಿದ್ದಾರೆ.
Don't challenge death. Be wise - keep away from silly stunts & advise your friends as well to stay safe.#InOurFeelings #KikiKills #InMyFeeling #KikiChallenge #JaipurPolice #SafeJaipur pic.twitter.com/9TdYo0CKQa
— Jaipur Police (@jaipur_police) 30 July 2018
ಇಷ್ಟೆಲ್ಲಾ ಆದರೂ ಈಗ ಜಾಹೀರಾತಿಗೆ ಬಳಸಿಕೊಳ್ಳುತ್ತಿರುವ ಚಿತ್ರವನ್ನು ವಾಪಸ್ ಪಡೆಯಲು ಜೈಪುರ ಪೊಲೀಸರು ಸಿದ್ಧರಾಗಿಲ್ಲ.
'ಮರಣಶಯ್ಯೆಯಲ್ಲಿರುವ ರೋಗಿಗಳಂತೆ ಕ್ಯಾನ್ಸರ್ ಹಾಗೂ ತಂಬಾಕು ಜಾಹೀರಾತುಗಳಿಗೆ ಅನೇಕ ಮಾಡೆಲ್ಗಳನ್ನು ಬಳಸಿಕೊಂಡಿದ್ದೇವೆ. ಇದರರ್ಥ ಅವರು ಸಾಯುತ್ತಿದ್ದಾರೆ ಎಂದಲ್ಲ. ಇಂತಹ ಅವಘಡಗಳಿಗೆ ಕೈಹಾಕಬೇಡಿ ಎಂದು ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸುವ ಆಂದೋಲನ ಇದು. ಇದರಿಂದ ಯಾರಿಗೂ ನೋವಾಗುವುದಿಲ್ಲ. ನಾವು ಜವಹರ್ಗೆ ಅವರಿಗೆ ಆಲ್ ದಿ ಬೆಸ್ಟ್ ಹೇಳುತ್ತೇವೆ' ಪೊಲೀಸ್ ಆಯುಕ್ತರು ಹೇಳಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications