ಅಲ್ಪಸಂಖ್ಯಾತರ ಪಟ್ಟಿಗೆ ಜೈನ ಸಮುದಾಯ
ನವದೆಹಲಿ, ಜ.8: ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಯುಪಿಎ ಸರ್ಕಾರ ತನ್ನ ವೋಟ್ ಬ್ಯಾಂಕ್ ಭದ್ರಪಡಿಸಿಕೊಳ್ಳುವತ್ತ ಹೆಜ್ಜೆ ಹಾಕಿದೆ. ಈ ನಿಟ್ಟಿನಲ್ಲಿ ಬಹು ದಿನಗಳ ಬೇಡಿಕೆಗಳನ್ನು ಒಂದೊಂದಾಗಿ ಪೂರೈಸುವ ಮೂಲಕ ಎಲ್ಲಾ ಸಮುದಾಯದಕ್ಕೆ ಸಲ್ಲುವ ಪಕ್ಷ ನಮ್ಮದು ಎನ್ನುವ ಹಣೆಪಟ್ಟಿ ಹೊತ್ತು ಚುನಾವಣೆ ಎದುರಿಸುವ ತಂತ್ರಗಾರಿಕೆ ರೂಪಿಸಲಾಗುತ್ತಿದೆ.
ಅಲ್ಪಸಂಖ್ಯಾತರ ತುಷ್ಟೀಕರಣ ಎನ್ನಬಹುದಾದರೆ ಜೈನ್ ಸಮುದಾಯವನ್ನು ರಾಷ್ಟ್ರೀಯ ಅಲ್ಪಸಂಖ್ಯಾತರ ಕಾಯ್ದೆಯಡಿ ಅಲ್ಪಸಂಖ್ಯಾತರ ಪಟ್ಟಿಗೆ ಸೇರಿಸಲು ಮುಂದಾಗಿರುವುದು ಯುಪಿಎ ಮೊದಲ ಹೆಜ್ಜೆ ಆಗಿದೆ. ಸಮಾನ ಅವಕಾಶ ಆಯೋಗ ರಚನೆಗೆ ಚಾಲನೆ ನೀಡಲಾಗಿದೆ ಎಂದು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕೆ.ರೆಹಮಾನ್ ಖಾನ್ ತಿಳಿಸಿದ್ದಾರೆ.[ಧರ್ಮಸ್ಥಳದಲ್ಲಿ ಸಮವಸರಣ ಪೂಜೆ]
ಸಾಚಾರ್ ಆಯೋಗದ ಶಿಫಾರಸಿನಂತೆ ಸಮಾನ ಅವಕಾಶ ಆಯೋಗ ರಚಿಸಲಾಗುತ್ತಿದೆ. ಈಗಾಗಲೇ ಸಮಾನ ಅವಕಾಶ ಆಯೋಗ ರಚನೆ ಕರಡು ಸಿದ್ಧವಾಗಿದ್ದು ಕೇಂದ್ರ ಸಂಪುಟದ ಮುಂದಿದೆ. ಸಾಧ್ಯವಾದಷ್ಟು ಶೀಘವಾಗಿ ಅದಕ್ಕೆ ಕಾನೂನು ರೂಪ ನೀಡಲಾಗುತ್ತದೆ ಎಂದು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕೆ.ರೆಹಮಾನ್ ಖಾನ್ ತಿಳಿಸಿದ್ದಾರೆ.

ಅಲ್ಪಸಂಖ್ಯಾತರ ಹಿತರಕ್ಷಣೆಗಾಗಿಯೇ ರೂಪುಗೊಳ್ಳುತ್ತಿರುವ ಸಮಾನ ಅವಕಾಶ ಆಯೋಗದ ವ್ಯಾಪ್ತಿಗೆ ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳು ಒಳಪಡುತ್ತವೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಯಾವುದೇ ವ್ಯಕ್ತಿ ತನಗೆ ತಾರತಮ್ಯವಾಗಿದೆ ಎಂದೆನಿಸಿದರೆ ಆಯೋಗಕ್ಕೆ ದೂರು ನೀಡಬಹುದು. ಸಂವಿಧಾನದತ್ತ ಅಧಿಕಾರ ಪಡೆಯುವ ಆಯೋಗವು ದೂರುಗಳನ್ನು ವಿಲೇವಾರಿ ಮಾಡಿ ದೂರುದಾರರಿಗೆ ನ್ಯಾಯ ಒದಗಿಸುತ್ತದೆ.[ಮಹಾವೀರನಿಗೆ ಮದುವೆಯಾಗಿತ್ತಂತೆ?]
ಜೈನ ಸಮುದಾಯವನ್ನು ರಾಷ್ಟ್ರೀಯ ಅಲ್ಪಸಂಖ್ಯಾತರ ಪಟ್ಟಿಗೆ ಸೇರಿಸುವ ಪ್ರಕ್ರಿಯೆಯೂ ಅಂತಿಮ ಹಂತದಲ್ಲಿದೆ. ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದ ಪ್ರಸ್ತಾಪಕ್ಕೆ ಅಟಾರ್ನಿ ಜನರಲ್ ಮತ್ತು ಕಾನೂನು ಸಚಿವಾಲಯ ಅನುಮೋದನೆ ನೀಡಿದೆ. ಈಗಾಗಲೇ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಪ್ರಸ್ತಾವ ರವಾನಿಸಲಾಗಿದೆ ಎಂದು ಕೆ.ರೆಹಮಾನ್ ಖಾನ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಈಗಾಗಲೇ ಕಾನೂನು ಸಚಿವಾಲಯದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಸುಪ್ರೀಂಕೋರ್ಟಿನಲ್ಲಿ ಆಕ್ಷೇಪಣೆ ಸಲ್ಲಿಕೆಯಾಗದಿದ್ದರೆ ಶೀಘ್ರದಲ್ಲೇ ಜೈನರ ಮೇಲೆ ಅಲ್ಪ ಸಂಖ್ಯಾತ ಎಂಬ ಟ್ಯಾಗ್ ಬೀಳಲಿದೆ. ಭಾರತದಲ್ಲಿ ಮುಸ್ಲಿಂ, ಸಿಖ್, ಬೌದ್ಧರು, ಕ್ರೈಸ್ತರು ಹಾಗೂ ಪಾರ್ಸಿಗಳು ಅಲ್ಪಸಂಖ್ಯಾತ ಪಟ್ಟಿಯಲ್ಲಿದ್ದಾರೆ.
ಭಾರತದಲ್ಲಿ ಜೈನ ಸಮುದಾಯ ಮಧ್ಯಪ್ರದೇಶ, ಮಹಾರಾಷ್ಟ್ರ, ದೆಹಲಿ, ಆಂಧ್ರಪ್ರದೇಶ, ಕರ್ನಾಟಕ, ಛತ್ತೀಸ್ ಗಢ, ಜಾರ್ಖಂಡ್ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.












Click it and Unblock the Notifications