ಪ.ಬಂಗಾಳದ ಬಿಜೆಪಿ ಸಂಸದನ ಪ್ರಮಾಣವಚನದ ವೇಳೆ ಮೊಳಗಿದ ಜೈಶ್ರೀರಾಂ ಘೋಷಣೆ
ನವದೆಹಲಿ, ಜೂನ್ 17: ಹದಿನೇಳನೇ ಲೋಕಸಭೆಯ ಮೊದಲ ಅಧಿವೇಶನ ಸೋಮವಾರ (ಜೂ 17) ಆರಂಭಗೊಂಡಿದ್ದು, ನೂತನ 542 ಸಂಸದರು ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ.
ಮೋದಿ ಪ್ರಮಾಣ ವಚನ ಸ್ವೀಕಾರದ ವೇಳೆ, ಭಾರತ್ ಮಾತಾ ಕೀ ಜೈ, ಮೋದಿ, ಮೋದಿ ಎಂದು ಬಿಜೆಪಿ ಸಂಸದರು ಹರ್ಷೋದ್ಗಾರ ಮಾಡಿದರೆ, ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ ಪ್ರಮಾಣವಚನ ಸ್ವೀಕರಿಸಿದಾಗ, 'ಜೈ ಶ್ರೀರಾಂ' ಘೋಷಣೆ ಲೋಕಸಭೆಯಲ್ಲಿ ಮೊಳಗಿದೆ.
ಕಳೆದ ಲೋಕಸಭಾ ಚುನಾವಣೆಯ ಪ್ರಚಾರದ ನಂತರ, ಪಶ್ಚಿಮ ಬಂಗಾಳ, ಮಮತಾ ಬ್ಯಾನರ್ಜಿ, ಬಿಜೆಪಿ, ಜೈಶ್ರೀರಾಂ ನಡುವೆ ವಿಶೇಷ ಅನುಬಂಧ ಇರುವುದರಿಂದ, ಬಿಜೆಪಿ ಸಂಸದರು ಬಾಬುಲ್ ಸುಪ್ರಿಯೋ ಪ್ರಮಾಣವಚನ ಸ್ವೀಕಾರದ ವೇಳೆ, ತೃಣಮೂಲ ಕಾಂಗ್ರೆಸ್ ಸಂಸದರ ಕಣ್ಣುಕಾಯಿಸಲೆಂದೇ ಘೋಷಣೆ ಕೂಗಿದಂತಿತ್ತು.

ಪಶ್ಚಿಮ ಬಂಗಾಳದ ಅಸನ್ಸೋಲ್ ಸಂಸದ ಬಾಬುಲ್ ಸುಪ್ರಿಯೋ ಅವರಿಗೆ ಪ್ರಮಾಣವಚನ ಸ್ವೀಕರಿಸಲು ಸ್ಪೀಕರ್ ಹೇಳುತ್ತಿದ್ದಂತೆಯೇ, ಬಿಜೆಪಿ ಸಂಸದರು ಮೇಜು ಕುಟ್ಟಿ, ಶ್ರೀರಾಮನನ್ನು ನೆನಪಿಸಿಕೊಂಡರು.
ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಇತ್ತೀಚೆಗೆ ರಾಜ್ಯದ 24 ಪರಗಣ ಜಿಲ್ಲೆಯಲ್ಲಿ ಪ್ರವಾಸದಲ್ಲಿದ್ದಾಗ, ಕೆಲವರು 'ಜೈಶ್ರೀರಾಂ' ಘೋಷಣೆಯನ್ನು ಕೂಗಿದ್ದರು. ಅದಕ್ಕೆ, ಮಮತಾ ಕಾರಿನಿಂದ ಕೆಳಗಿಳಿದು ಘೋಷಣೆ ಕೂಗಿದವರನ್ನು ತರಾಟೆಗೆ ತೆಗೆದುಕೊಂಡು, ಕೇಸ್ ಜಡಾಯಿಸಿದ್ದರು.
ಜೈಶ್ರೀರಾಂ ವಿಚಾರವನ್ನೂ ಇಟ್ಟುಕೊಂಡು ಬಿಜೆಪಿ ಲೋಕಸಭಾ ಚುನಾವಣೆಯ ವೇಳೆ ಪ್ರಚಾರವನ್ನು ಮಾಡಿತ್ತು. ಅಸನ್ಸೋಲ್ ಲೋಕಸಭಾ ಕ್ಷೇತ್ರದಿಂದ ಬಾಬುಲ್ ಸುಪ್ರಿಯೊ, ಟಿಎಂಸಿಯ ಮೂನ್ ಮೂನ್ ಸೇನ್ ವಿರುದ್ದ 197,637 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.












Click it and Unblock the Notifications