Jagdeep Dhankhar: ಭಾರತದ ಉಪರಾಷ್ಟ್ರಪತಿಯಾಗಿ ಜಗದೀಪ್ ಧನಕರ್ ಆಯ್ಕೆ
ನವದೆಹಲಿ, ಆಗಸ್ಟ್.6: ಭಾರತದ 14ನೇ ಉಪರಾಷ್ಟ್ರಪತಿಯಾಗಿ ಎನ್ಡಿಎ ಬೆಂಬಲಿತ ಅಭ್ಯರ್ಥಿ ಜಗದೀಪ್ ಧನಕರ್ ಆಯ್ಕೆಯಾಗಿದ್ದಾರೆ.
ಜಗದೀಪ್ ಧನಕರ್ 528 ಮತಗಳನ್ನು ಪಡೆದರೆ, ವಿರೋಧ ಪಕ್ಷದ ಅಭ್ಯರ್ಥಿ ಮಾರ್ಗರೆಟ್ ಆಳ್ವ 182 ಮತಗಳನ್ನು ಪಡೆದರು. ಮತದಾನದಲ್ಲಿ 15 ಮತಗಳು ಅಸಿಂಧುಗೊಂಡಿವೆ.
ಭಾರತದ ಎರಡನೇ ಅತ್ಯುನ್ನತ ನಾಗರಿಕ ಸ್ಥಾನವಾದ ಉಪರಾಷ್ಟ್ರಪತಿ ಸ್ಥಾನಕ್ಕೆ ಎನ್ಡಿಎ ಅಭ್ಯರ್ಥಿಯಾಗಿ ಬಿಜೆಪಿ ಬೆಂಬಲಿತ ಜಗದೀಪ್ ಧನಕರ್ ಅವರು ನಾಮಪತ್ರ ಸಲ್ಲಿಸಿದ್ದರು. ಅವರಿಗೆ ಪ್ರತಿಸ್ಪರ್ಧಿಯಾಗಿ ಯುಪಿಎ ಒಕ್ಕೂಟದಿಂದ ಕಾಂಗ್ರೆಸ್ ಬೆಂಬಲಿತ ಮಂಗಳೂರು ಮೂಲದವರಾದ ಮಾರ್ಗರೇಟ್ ಆಳ್ವ ಅವರು ಕಣಕ್ಕೆ ಇಳಿದಿದ್ದರು.
ರಾಜಸ್ಥಾನ ರಾಜ್ಯದ ಕಿತನಾ ಎಂಬ ಗ್ರಾಮದಲ್ಲಿ ಜನಿಸಿದ್ದ ಜಗದೀಪ್ ಧನಕರ್ ಅವರು ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೊದಲು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದವರು. ಜುಲೈ 18ರಂದು ಉಪರಾಷ್ಟ್ರಪತಿ ಚುನಾವಣೆಗೆ ಜಗದೀಪ್ ದಂಖರ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ್ದರು. ಇಂದು (ಆಗಸ್ಟ್ 6) ಸಂಸತ್ತಿನಲ್ಲಿಉಪರಾಷ್ಟ್ರಪತಿ ಚುನಾವಣೆಗೆ ಮತದಾನ ಆರಂಭವಾಗಿತ್ತು.
ಪ್ರಸ್ತುತ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರ ಅವಧಿ ಆಗಸ್ಟ್ 10 ರಂದು ಕೊನೆಗೊಳ್ಳಲಿದ್ದು, ನೂತನ ರಾಷ್ಟ್ರಪತಿ ಆಗಸ್ಟ್ 11ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಉಪರಾಷ್ಟ್ರಪತಿ ಚುನಾವಣೆಗೆ ಶೇ. 93ರಷ್ಟ್ರು ಮತದಾನ ನಡೆದಿತ್ತು. ಜಗದೀಪ್ ದಂಖರ್ ಅವರು ನಾಮಪತ್ರ ಸಲ್ಲಿಸಿದ ಮರು ಗಳಿಗೆಯೇ ಅವರು ಗೆಲ್ಲುವುದು ಬಹುತೇಕ ಖಚಿತವಾಗಿತ್ತು.ಜಗದೀಪ್ ದಂಖರ್ ಅವರಿಗೆ ಹಲವಾರು ಎನ್ಡಿಎಯೇತರ ಪಕ್ಷಗಳಾದ ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳ, ಜಗನ್ಮೋಹನ್ ರೆಡ್ಡಿ ಅವರ ವೈಎಸ್ಆರ್ ಕಾಂಗ್ರೆಸ್, ಮಾಯಾವತಿಯ ಬಹುಜನ ಸಮಾಜ ಪಕ್ಷ, ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ, ಜಾರ್ಖಂಡ್ ಮುಕ್ತಿ ಮೋರ್ಚಾ, ಅಕಾಲಿದಳ ಮತ್ತು ಶಿವನ ಸೇನಾ ಏಕನಾಥ್ ಶಿಂಧೆ ಬಣದ ಬೆಂಬಲವಿತ್ತು.
ಟಿಎಸ್ಆರ್, ಜಾರ್ಖಂಡ್ ಮುಕ್ತಿ ಮೋರ್ಚಾ, ತೆಲಂಗಾಣ ರಾಷ್ಟ್ರ ಸಮಿತಿ, ಆಮ್ ಆದ್ಮಿ ಪಕ್ಷ ಮತ್ತು ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಒಂಬತ್ತು ಸಂಸದರು ಮಾರ್ಗರೇಟ್ ಆಳ್ವಾ ಅವರನ್ನು ಬೆಂಬಲಿಸಿದರು. ಜಗದೀಪ್ ಧನಕರ್ ಅವರು ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಬೆನ್ನಲ್ಲೇ ಎಲ್ಲ ಎನ್ಡಿಎ ಸೇರಿದಂತೆ ರಾಜಕೀಯ ಗಣ್ಯರು ಅಭಿನಂಧನೆ ಸಲ್ಲಿಸಿದ್ದಾರೆ.