Gaganyaan mission: ಬಾಹ್ಯಾಕಾಶಕ್ಕೆ ಹಾರಲಿರುವ ಗಗನಯಾತ್ರಿಗಳ ಹೆಸರು ಘೋಷಿಸಿದ ಪ್ರಧಾನಿ ಮೋದಿ
ನವದೆಹಲಿ, ಫೆಬ್ರವರಿ.27: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಗಗನಯಾನದ ಭಾಗವಾಗಿ ಬಾಹ್ಯಾಕಾಶಕ್ಕೆ ಹಾರಲಿರುವ ನಾಲ್ಕು ಗಗನಯಾತ್ರಿಗಳ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪ್ರಕಟಿಸಿದ್ದಾರೆ. ಇದು ಇಸ್ರೋ ಸಿಬ್ಬಂದಿಯ ಮೊದಲ ಭಾರತೀಯ ಬಾಹ್ಯಾಕಾಶ ಯಾತ್ರೆಯಾಗಿದೆ.
ಕೇರಳದ ತಿರುವನಂತಪುರಂನಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಲ್ವರ ಹೆಸರನ್ನು ಘೋಷಣೆ ಮಾಡಿದ್ದಾರೆ. ಪ್ರಶಾಂತ್ ಬಾಲಕೃಷ್ಣನ್ ನಾಯರ್, (ಗ್ರೂಪ್ ಕ್ಯಾಪ್ಟನ್) ಅಂಗದ್ ಪ್ರತಾಪ್, ಅಜಿತ್ ಕೃಷ್ಣನ್ ಮತ್ತು ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶಕ್ಕೆ ಭಾರತದ ಮೊದಲ ಸಿಬ್ಬಂದಿ ಮಿಷನ್ನಲ್ಲಿ ಗಗನಯಾತ್ರಿಗಳಾಗಿ ಆಯ್ಕೆಯಾಗಿದ್ದಾರೆ.

ಈ ನಾಲ್ವರು ಗಗನಯಾತ್ರಿಗಳು ಭಾರತೀಯ ವಾಯುಪಡೆಯ (ಐಎಎಫ್) ವಿಂಗ್ ಕಮಾಂಡರ್ಗಳು ಅಥವಾ ಗ್ರೂಪ್ ಕ್ಯಾಪ್ಟನ್ಗಳು ಮತ್ತು ಪರೀಕ್ಷಾ ಪೈಲಟ್ಗಳಾಗಿ ಕೆಲಸ ಮಾಡಿದ ದೊಡ್ಡ ಅನುಭವವನ್ನು ಹೊಂದಿದ್ದಾರೆ. ಏನಾದರೂ ತಪ್ಪುಗಳಾದ ಸಂದರ್ಭಗಳಲ್ಲಿ ತ್ವರಿತವಾಗಿ ಪ್ರತಿಕ್ರಿಯಿಸಲು ಈಗಾಗಲೇ ನಾಲ್ವರು ಸಾಕಷ್ಟು ತರಬೇತಿ ಪಡೆದಿದ್ದಾರೆ.
ನಾಲ್ವರು ಗಗನಯಾತ್ರಿಗಳು ಬೆಂಗಳೂರಿನಲ್ಲಿರುವ ಬಾಹ್ಯಾಕಾಶ ಸಂಸ್ಥೆಯ ಗಗನಯಾತ್ರಿಗಳ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಗಗನಯಾತ್ರಿಗಳ ಆಯ್ಕೆಯು ಐಎಎಫ್ನ ಇನ್ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ನಲ್ಲಿ ನಡೆದಿದೆ. ಇಸ್ರೋ ಮತ್ತು Glavkosmos (ರಷ್ಯಾದ ಬಾಹ್ಯಾಕಾಶ ಸಂಸ್ಥೆ Roscosmos ನ ಅಂಗಸಂಸ್ಥೆ) ಜೂನ್ 2019 ರಲ್ಲಿ ನಾಲ್ಕು ಗಗನಯಾತ್ರಿಗಳ ತರಬೇತಿಗಾಗಿ ಒಪ್ಪಂದದ ಪತ್ರಕ್ಕೆ ಸಹಿ ಹಾಕಿದವು.
ನಾಲ್ವರು ಗಗನಯಾತ್ರಿಗಳು ರಷ್ಯಾದ ಯೂರಿ ಗಗಾರಿನ್ ಕಾಸ್ಮೊನಾಟ್ ತರಬೇತಿ ಕೇಂದ್ರದಲ್ಲಿ ಫೆಬ್ರವರಿ 2020 ರಿಂದ ಮಾರ್ಚ್ 2021 ರವರೆಗೆ ತರಬೇತಿ ಪಡೆದಿದ್ದಾರೆ. ಚಂದ್ರಯಾನವನ್ನು ಯಶಸ್ವಿಯಾಗಿ ಮಾಡಿರುವ ಇಸ್ರೋ ಮೊದಲ ಬಾರಿಗೆ ಗಗನಯಾನಕ್ಕೆ ಕೈಹಾಕುತ್ತಿದೆ. ಹೀಗಾಗಿ ಇದು ಐತಿಹಾಸಿಕ ಘಟನೆ ಎನಿಸಿಕೊಂಡಿದೆ.

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾವು 2024 ರ ಅಂತ್ಯದ ವೇಳೆಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಮಿಷನ್ಗಾಗಿ ಭಾರತೀಯ ಗಗನಯಾತ್ರಿಗಳಿಗೆ ತರಬೇತಿ ನೀಡಲಿದೆ ಎಂದು ಏಜೆನ್ಸಿಯ ನಿರ್ವಾಹಕ ಬಿಲ್ ನೆಲ್ಸನ್ 2023 ರಲ್ಲಿ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದರು.
ಗಗನಯಾನ ಮಿಷನ್ 3 ದಿನಗಳ ಕಾರ್ಯಾಚರಣೆಗಾಗಿ ಗಗನಯಾತ್ರಿಗಳನ್ನು ಭೂಮಿಯ ಮೇಲಿಂದ 400 ಕಿಲೋಮೀಟರ್ ಕಕ್ಷೆಗೆ ಉಡಾವಣೆ ಮಾಡುವ ಮೂಲಕ ಭಾರತದ ಮಾನವ ಬಾಹ್ಯಾಕಾಶ ಹಾರಾಟದ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. ಅದರ ನಂತರ, ಭಾರತೀಯ ಸಮುದ್ರದ ನೀರಿನ ಮೇಲೆ ಇಳಿಯುವುದರೊಂದಿಗೆ ಸುರಕ್ಷಿತವಾಗಿ ಭೂಮಿಗೆ ತರಲಾಗುತ್ತದೆ.












Click it and Unblock the Notifications