ಐಸಿಸ್ ಉಗ್ರ ಸಂಘಟನೆ ಭಾರತದಲ್ಲಿ ನೆಲೆಯೂರಿದೆಯೇ?: ಶಾಕಿಂಗ್ ಮಾಹಿತಿ
ನವದೆಹಲಿ, ಮೇ 11: ನೆರೆಯ ಪಾಕಿಸ್ತಾನ ಐಸಿಸ್ ಸೇರಿದಂತೆ ವಿವಿಧ ಭಯೋತ್ಪಾದನಾ ಸಂಘಟನೆಗಳ ತವರೂರು. ಅದು ಕಾಶ್ಮೀರದ ಜನರನ್ನು ಸೆಳೆಯುವ ಮೂಲಕ ಆಂತರಿಕ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ ಎಂದು ಭಾರತ ಆರೋಪಿಸುತ್ತಿದೆ. ಆದರೆ, ಇಸ್ಲಾಮಿಕ್ ಸ್ಟೇಟ್ ಭಾರತದಲ್ಲಿ ತನ್ನ ನೆಲೆ ಸ್ಥಾಪಿಸಿಕೊಂಡಿರುವುದಾಗಿ ಹೇಳಿದೆ.
ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಕಾಶ್ಮೀರದಲ್ಲಿ ನಡೆದ ಸಂಘರ್ಷದಲ್ಲಿ ಒಬ್ಬ ಉಗ್ರನನ್ನು ಸೇನಾ ಪಡೆ ಹತ್ಯೆ ಮಾಡಿತ್ತು. ಈ ಘಟನೆ ಬಳಿಕ ಐಎಸ್ ಮೊದಲ ಬಾರಿಗೆ ಭಾರತದಲ್ಲಿ ತನ್ನ 'ಪ್ರಾಂತ್ಯ' ಸ್ಥಾಪನೆ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದೆ. ಇದು ಐಎಸ್ ಗೊಂದಲ ಮೂಡಿಸುವ ಸಲುವಾಗಿ ನೀಡಿದ ಹೇಳಿಕೆ ಎಂದೆನಿಸಿದರೂ, ಶ್ರೀಲಂಕಾದಲ್ಲಿ ನಡೆದ ದಾಳಿಯಲ್ಲಿ ಐಎಸ್ ಪಾತ್ರ ಇರುವುದು, ಆಘಾತ ಮೂಡಿಸುವಂತಿದೆ.
ಭಾರತದಲ್ಲಿ 'ವಿಲಾಯಾಹ್ ಹಿಂದ್' ಎಂಬ ಪ್ರಾಂತ್ಯ ಸ್ಥಾಪನೆ ಮಾಡಿಕೊಂಡಿರುವುದಾಗಿ ಐಎಸ್ನ ಅಮಾಕ್ ನ್ಯೂಸ್ ಸುದ್ದಿ ಸಂಸ್ಥೆ ಶುಕ್ರವಾರ ಪ್ರಕಟಿಸಿದೆ. ಕಾಶ್ಮೀರದ ಶೋಫಿಯಾನ್ ಜಿಲ್ಲೆಯ ಅಮ್ಶಿಪೋರಾ ಪಟ್ಟಣದಲ್ಲಿ ನಡೆದ ಘರ್ಷಣೆ ವೇಳೆ ಭಾರತೀಯ ಸೇನಾ ಪಡೆ ಯೋಧರಿಗೆ ಹಾನಿ ಮಾಡಿರುವುದಾಗಿ ಅದು ಪ್ರತಿಪಾದಿಸಿದೆ.

ಶೋಫಿಯಾನ್ನಲ್ಲಿ ನಡೆದ ಉಗ್ರರೊಂದಿಗಿನ ಎನ್ಕೌಂಟರ್ನಲ್ಲಿ ಇಷ್ಫಾಕ್ ಅಹ್ಮದ್ ಸೋಫಿ ಎಂಬಾತನನ್ನು ಸೇನಾ ಪಡೆ ಹತ್ಯೆ ಮಾಡಿತ್ತು. ಇದನ್ನು ಒಪ್ಪಿಕೊಂಡಿರುವ ಐಎಸ್, ಆತ ತನ್ನ ಸಂಘಟನೆಯವನೆಂದು ಹೇಳಿಕೊಂಡಿದೆ.
ಇರಾಕ್ ಮತ್ತು ಸಿರಿಯಾದಲ್ಲಿನ ತನ್ನ 'ಕ್ಯಾಲಿಫೇಟ್' (ಕಾಲೀಫ್ ರಾಜ್ಯ) ಸ್ಥಳದಿಂದ ಹೊಡೆದೋಡಿಸಿದ ಬಳಿಕ ಐಎಸ್ ಹೊಸ ನೆಲೆಯನ್ನು ಸ್ಥಾಪಿಸಿಕೊಂಡಿರುವುದಾಗಿ ತಿಳಿಸಿದೆ. ಐಎಸ್ ಕಳೆದ ತಿಂಗಳು ಶ್ರೀಲಂಕಾದಲ್ಲಿ ಸರಣಿ ಆತ್ಮಾಹುತಿ ಬಾಂಬ್ ದಾಳಿಗಳನ್ನು ನಡೆಸಿ ಕನಿಷ್ಠ 253 ಜನರ ಹತ್ಯೆಗೆ ಕಾರಣವಾಗಿತ್ತು.
ಪ್ರದೇಶವೊಂದರಲ್ಲಿ ನೆಲೆಯನ್ನು ಸ್ಥಾಪಿಸಿಕೊಳ್ಳುವುದು ಅದರ ಆಡಳಿತವನ್ನು ಹಿಡಿತಕ್ಕೆ ತೆಗೆದುಕೊಂಡಿದೆ ಎಂದರ್ಥವಲ್ಲ. ಆದರೆ, ಅದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಇಸ್ಲಾಮಿಕ್ ಉಗ್ರರ ಜಾಡನ್ನು ಹಿಂಬಾಲಿಸುತ್ತಿರುವ ಗುಪ್ತಚರ ಸಂಸ್ಥೆ ಎಸ್ಐಟಿಇ ಇಂಟೆಲ್ನ ರಿಟಾ ಕಾಟ್ಜ್ ಹೇಳಿದ್ದಾರೆ.
ಸಂಘರ್ಷದಲ್ಲಿ ಹತನಾದ ಉಗ್ರ ಸೋಫಿ, ಕಾಶ್ಮೀರದಲ್ಲಿ ವಿವಿಧ ಉಗ್ರ ಸಂಘಟನೆಗಳ ಜತೆಗೂಡಿ ದಶಕಗಳಿಂದಲೂ ಹೆಚ್ಚು ಸಮಯದಿಂದ ಚಟುವಟಿಕೆ ನಡೆಸುತ್ತಿದ್ದ. ಆತನಿಗೆ ಇಸ್ಲಾಮಿಕ್ ಸ್ಟೇಟ್ನ ನಂಟು ಇತ್ತು. ಆತ ಕಾಶ್ಮೀರದಲ್ಲಿ ಐಎಸ್ ಜೊತೆ ಸಂಪರ್ಕ ಹೊಂದಿದ್ದ ಕೊನೆಯ ಉಗ್ರನಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಮತ್ತು ಸೇನಾ ಮೂಲಗಳು ಹೇಳಿವೆ.












Click it and Unblock the Notifications