ಜಾರಿ ನಿರ್ದೇಶನಾಲಯದ ಸಮನ್ಸ್ ಸಿಕ್ಕಿಲ್ಲ ಎಂದ ಜಾಕಿರ್ ನಾಯಕ್
ಆರ್ಥಿಕ ಅವ್ಯವಹಾರಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ನಾಲ್ಕು ಬಾರಿ ಸಮನ್ಸ್ ಜಾರಿಗೊಳಿಸಿರುವ ಜಾರಿ ನಿರ್ದೇಶನಾಲಯ
ಮುಂಬೈ, ಫೆಬ್ರವರಿ 27: ಆರ್ಥಿಕ ಅವ್ಯವಹಾರಗಳ ಆರೋಪಗಳನ್ನು ಎದುರಿಸುತ್ತಿರುವ ಇಸ್ಲಾಂ ಧರ್ಮ ಬೋಧಕ ಜಾಕಿರ್ ಹುಸೇನ್ ಅವರು ಇದೇ ಪ್ರಕರಣಗಳ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ (ಇಡಿ) ತಮಗೆ ಜಾರಿಗೊಳಿಸಲಾಗಿರುವ ಸಮನ್ಸ್ ಗಳ್ಯಾವೂ ದೊರಕಿಲ್ಲ ಎಂದು ತಿಳಿಸಿರುವುದಾಗಿ ಝೀ ನ್ಯೂಸ್ ವರದಿ ಮಾಡಿದೆ. ತಾವು ಓರ್ವ ಅನಿವಾಸಿ ಭಾರತೀಯನಾಗಿರುವುದರಿಂದ ತಮಗೆ ಸಮನ್ಸ್ ಗಳ್ಯಾವೂ ಸಿಕ್ಕಿಲ್ಲವೆಂದು ಹೇಳಿದ್ದಾರೆಂದು ವರದಿಯಲ್ಲಿ ಹೇಳಲಾಗಿದೆ.
ಆದರೆ, ಅವರ ಇಡಿ ಪ್ರಕಾರ, ಈವರೆಗೆ ಜಾಕಿರ್ ವಿರುದ್ಧ ಸುಮಾರು 4 ಸಮನ್ಸ್ ಗಳು ಜಾರಿಗೊಂಡಿವೆ. ಇದ್ಯಾವುದಕ್ಕೂ ಜಾಕಿರ್ ಜಗ್ಗಿಲ್ಲ. ಹಾಗಾಗಿ, ಸೋಮವಾರ, ಜಾಕಿರ್ ಅವರು ವಿಚಾರಣೆಗೆ ಹಾಜರಾಗಬೇಕೆಂದು ಸೋಮವಾರ ನಾಲ್ಕನೇ ಬಾರಿ ಸಮನ್ಸ್ ಜಾರಿಗೊಳಿಸಿದ್ದು, ಪ್ರಾಯಶಃ ಇದೇ ಅಂತಿಮ ಸಮನ್ಸ್ ಗಳನ್ನು ಎಂದು ಹೇಳಲಾಗಿದೆ.[ರಿಯಲ್ ಎಸ್ಟೇಟ್ ನಲ್ಲಿ ಜಾಕಿರ್ ನೂರು ಕೋಟಿ ರು. ಬಂಡವಾಳ ಪತ್ತೆ]
ಈ ಹಿಂದಿನ ಸಮನ್ಸ್ ಗಳನ್ನು ಜಾಕಿರ್ ಅವರ ವಕೀಲರು ಹಾಗೂ ಜಾಕಿರ್ ಅವರ ಸ್ವಂತ ಇ-ಮೇಲ್ ಖಾತೆಗೆ ಸಮನ್ಸ್ ಜಾರಿಗೊಳಿಸಲಾಗಿತ್ತು. ಆದರೂ, ಜಾಕಿರ್ ತಮಗೆ ಈ ಸಮನ್ಸ್ ಗಳ್ಯಾವೂ ಸಿಕ್ಕೇ ಇಲ್ಲ ಎಂದಿದ್ದಾರೆ.
ಏತನ್ಮಧ್ಯೆ, ನಾವು ಅನಿವಾಸಿ ಭಾರತೀಯನಾಗಿರುವುದರಿಂದ ತಾವು ಇಡಿ ನಡೆಸುವ ವಿಚಾರಣೆಗೆ ವಿದೇಶದಿಂದಲೇ ವೀಡಿಯೋ ಕಾನ್ಫರೆನ್ಸ್ ಮೂಲಕ ಉತ್ತರ ನೀಡಲು ಅನುಮತಿ ನೀಡಬೇಕಾಗಿ ಜಾಕಿರ್ ಹುಸೇನ್ ಸಲ್ಲಿಸಿದ್ದ ಮನವಿಯನ್ನು ಜಾರಿ ನಿರ್ದೇಶನಾಲಯ ತಳ್ಳಿಹಾಕಿದೆ.[ಜಾಕೀರ್ ನಾಯಕ್ ಎನ್ ಜಿಒ 5 ವರ್ಷಗಳ ಕಾಲ ನಿಷೇಧ]
ಇದರ ಜತೆಯಲ್ಲೇ ಜಾಕಿರ್ ಅವರು, ಕೇಂದ್ರ ಸರ್ಕಾರವು ತಮ್ಮ ಸರ್ಕಾರೇತರ ಸಂಸ್ಥೆಯನ್ನು ನಿಷೇಧಗೊಳಿಸಿರುವ ಕ್ರಮವನ್ನು ಪ್ರಶ್ನಿಸಿ ನ್ಯಾಯಾಧೀಕರಣದ ಮೆಟ್ಟಿಲೇರಿದ್ದು, ಅಲ್ಲಿನ ತೀರ್ಪು ಬರುವವರೆಗೂ ತಮ್ಮನ್ನು ವಿಚಾರಣೆಗೊಳಪಡಿಸಕೂಡದೆಂದು ಜಾರಿ ನಿರ್ದೇಶನಾಯಕ್ಕೆ ತಾಕೀತು ಮಾಡಿದ್ದಾರೆಂದು ವರದಿಯಲ್ಲಿ ಹೇಳಲಾಗಿದೆ.