ಪಂಜಾಬ್ ಬಿಜೆಪಿಯಲ್ಲಿ ಭಿನ್ನಮತ: ಪಕ್ಷ ತೊರೆದಿಲ್ಲ ಎಂದ ಸಂಪ್ಲಾ
ನವದೆಹಲಿ, ಜನವರಿ 17: "ನಾನು ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ. ನಾನು ರಾಜೀನಾಮೆ ನೀಡಿದ್ದೇನೆ ಎನ್ನುವುದು ಗಾಳಿ ಸುದ್ದಿ,' ಹೀಗಂತ ಪಂಜಾಬ್ ಬಿಜೆಪಿ ಅಧ್ಯಕ್ಷ ವಿಜಯ್ ಸಂಪ್ಲಾ ಹೇಳಿದ್ದಾರೆ. ಈ ಮೂಲಕ ತಮ್ಮ ರಾಜೀನಾಮೆ ಸುತ್ತ ಮುತ್ತ ನಡೆಯುತ್ತಿದ್ದ ಗೊಂದಲಗಳಿಗೆ ಅವರು ತೆರೆ ಎಳೆದರು.
ದಿನದ ಆರಂಭದಲ್ಲಿ 'ಕೇಂದ್ರ ಸಚಿವ(MoS)ರೂ ಆಗಿರುವ ರಾಜ್ಯಾಧ್ಯಕ್ಷ ವಿಜಯ್ ಸಂಪ್ಲಾ, ಟಿಕೆಟ್ ಹಂಚಿಕೆ ಸರಿಯಾಗಿಲ್ಲ ಎಂದು ದೂರಿ ರಾಜೀನಾಮೆ ನೀಡಿದ್ದಾರೆ. ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ,' ಎಂದು ಸುದ್ದಿಯಾಗಿತ್ತು.

ಆದರೆ, ಇಂದು ಅಮಿತ್ ಶಾರನ್ನು ನವದೆಹಲಿಯ ನಿವಾಸದಲ್ಲಿ ಭೇಟಿಯಾದ ವಿಜಯ್ ಸಂಪ್ಲಾ ಸುದೀರ್ಘ ಚರ್ಚೆ ನಡೆಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನಾನು ರಾಜೀನಾಮೆ ನೀಡಿದ್ದೇನೆ ಎನ್ನುವುದು ಸುಳ್ಳು ಸುದ್ದಿ," ಎಂದು ಸ್ಪಷ್ಟಪಡಿಸಿದರು.
ಈ ಕುರಿತು ಮಾತನಾಡಿರುವ ಪಂಜಾಬ್ ಬಿಜೆಪಿ ಉಸ್ತುವಾರಿ ಪ್ರಭಾತ್ ಝಾ, "ಸಂಪ್ಲಾ ಬುದ್ಧಿವಂತರು ಮತ್ತು ಅವರಿಗೆ ರಾಜಕೀಯ ಗೊತ್ತಿದೆ. ಅವರು ರಾಜೀನಾಮೆ ನೀಡಲು ಕಾರಣಗಳೇ ಇಲ್ಲ," ಎಂದಿದ್ದಾರೆ.
ಸೋಮವಾರದಂದು ಬಿಜೆಪಿಯ ಆರು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಇದರಲ್ಲಿ ಫಗ್ವಾರಾ ಕ್ಷೇತ್ರದಿಂದ ಸೋಮ್ ಪ್ರಕಾಶ್ ಟಿಕೆಟ್ ಗಿಟ್ಟಿಸಿದ್ದರು. ಇದರಿಂದ ಸಂಪ್ಲಾ ಅಸಮಾಧಾನಗೊಂಡಿದ್ದರು. ಇದಾದ ಗಂಟೆಗಳ ಬಳಿಕ ಸಂಪ್ಲಾ ತಮ್ಮ ರಾಜೀನಾಮೆಯನ್ನು ಘೋಷಿಸಿದ್ದಾರೆ ಎನ್ನಲಾಗಿತ್ತು. ಆದರೆ ಅದೀಗ ಸುಳ್ಳು ಎಂದು ಅವರೇ ಹೇಳಿದ್ದಾರೆ.
ಪಂಜಾಬಿನಲ್ಲಿ ಫೆಬ್ರವರಿ 4 ರಂದು ಚುನಾವಣೆ ನಡೆಯಲಿದೆ. 117 ಸ್ಥಾನಗಳ ಪೈಕಿ ಬಿಜೆಪಿ ಮೈತ್ರಿ ಪಕ್ಷ ಶಿರೋಮಣಿ ಅಕಾಳಿದಳ 93 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದೆ. ಉಳಿದ ಸ್ಥಾನಗಳಲ್ಲಿ ಬಿಜೆಪಿ ಚುನಾವಣೆ ಎದುರಿಸಲಿದೆ. ಈಗಾಗಲೆ 17 ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು. ಇನ್ನುಳಿದ 7 ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಬೇಕಷ್ಟೆ.(ಒನ್ ಇಂಡಿಯಾ ಸುದ್ದಿ)












Click it and Unblock the Notifications