Bharat Gaurav: ಫೆ.17 ರಂದು ಶ್ರೀರಾಮ್-ಜಾನಕಿ ಯಾತ್ರೆ ದೆಹಲಿಯಿಂದ ಫ್ರಾರಂಭ
ನವದೆಹಲಿ, ಜನವರಿ 14: ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಭಾರತೀಯ ರೈಲ್ವೆ ಇಲಾಖೆಯು ಫೆ.17ರಂದು ಶ್ರೀ ರಾಮ್-ಜಾನಕಿ ಯಾತ್ರೆ ಎಂಬ ವಿಶೇಷ ಪ್ರವಾಸವನ್ನು ಪ್ರಾರಂಭಿಸಲಿದೆ ಎಂದು ರೈಲ್ವೆ ಸಚಿವಾಲಯ ಪ್ರಕಟನೆಯಲ್ಲಿ ತಿಳಿಸಿದೆ.
ಉಭಯ ದೇಶಗಳಾದ ಭಾರತ ಮತ್ತು ನೇಪಾಳದ ನಡುವಿನ ಸಾಂಸ್ಕೃತಿಕ ಸಂಬಂಧಗಳನ್ನು ಉತ್ತೇಜಿಸಲು ದೆಹಲಿಯಿಂದ ಭಾರತ ಗೌರವ್ ರೈಲು ಪ್ರಯಾಣ ಆರಂಭಿಸಲಿದೆ. ಅಯೋಧ್ಯೆ ಮತ್ತು ಜನಕ್ಪುರವನ್ನು ಒಳಗೊಂಡಂತೆ ಒಟ್ಟು ಏಳು ದಿನಗಳ ವಿಶೇಷ ಪ್ರವಾಸ ಇದಾಗಿದೆ ಎಂದು ರೈಲ್ವೆ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಈ ಪ್ರವಾಸಿ ರೈಲು ನಂದಿಗ್ರಾಮ, ಸೀತಾಮರ್ಹಿ, ಕಾಶಿ ಮತ್ತು ಪ್ರಯಾಗ್ರಾಜ್ಗಳ ಮೂಲಕ ಸಂಚರಿಸಲಿದೆ. ಕ್ರಮವಾಗಿ ಜನಕ್ಪುರ ಮತ್ತು ವಾರಣಾಸಿಯಲ್ಲಿ ತಲಾ ಒಂದರಂತೆ ಹೋಟೆಲ್ಗಳಲ್ಲಿ ಎರಡು ರಾತ್ರಿ ತಂಗಲಿದೆ. ಅದರಂತೆ ಅಯೋಧ್ಯೆ, ಸೀತಾಮರ್ಹಿ ಮತ್ತು ಪ್ರಯಾಗ್ರಾಜ್ಗಳಲ್ಲಿ ಹಗಲಿನಲ್ಲಿ ತಂಗಲಿವೆ ಎಂದು ಸಚಿವಾಲಯ ಹೇಳಿದೆ.

ಏಳು ದಿನಗಳ ಭಾರತ್ ಗೌರವ್ ಟೂರಿಸ್ಟ್ ಟ್ರೈನ್ ಪ್ರವಾಸವು ಭಗವಾನ್ ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಮೊದಲ ನಿಲುಗಡೆಯನ್ನು ಹೊಂದಿದೆ. ಅಲ್ಲಿ ಪ್ರವಾಸಿಗರು ಶ್ರೀ ರಾಮ ಜನ್ಮಭೂಮಿ ದೇವಾಲಯ ಮತ್ತು ಹನುಮಾನ್ ದೇವಾಲಯ ಮತ್ತು ಹೆಚ್ಚುವರಿಯಾಗಿ ನಂದಿಗ್ರಾಮ್ನಲ್ಲಿರುವ ಭರತ ಮಂದಿರಕ್ಕೆ ಭೇಟಿ ನೀಡಲಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಟಿಕೆಟ್ಗಳು ಪ್ರತಿ ವ್ಯಕ್ತಿಗೆ ₹39,775/- ದಿಂದ ಪ್ರಾರಂಭವಾಗುತ್ತವೆ. ಇದು ಹೋಟೆಲ್ಗಳಲ್ಲಿ ಊಟ, ವಸತಿ, ಸೇರಿದಂತೆ ಇತರ ಶುಲ್ಕಗಳನ್ನು ಒಳಗೊಂಡಂತೆ ಬೆಲೆಯು ಸಂಪೂರ್ಣ ಪ್ರಯಾಣವನ್ನು ಒಳಗೊಂಡಿರುತ್ತದೆ. ಸ್ಟೇಟ್ ಆಫ್ ಆರ್ಟ್ ಡಿಲಕ್ಸ್ ಎಸಿ ಟೂರಿಸ್ಟ್ ಟ್ರೈನ್ ಎರಡು ಉತ್ತಮವಾದ ಭೋಜನದ ರೆಸ್ಟೋರೆಂಟ್ಗಳು, ಆಧುನಿಕ ಅಡುಗೆಮನೆ, ಕೋಚ್ಗಳಲ್ಲಿ ಶವರ್ ಕ್ಯುಬಿಕಲ್ಗಳು, ಸೆನ್ಸಾರ್ ಆಧಾರಿತ ವಾಶ್ರೂಮ್, ಫೂಟ್ ಮಸಾಜರ್ ಸೇರಿದಂತೆ ಹಲವು ವಿಶಿಷ್ಟವಾದ ಸೌಲ್ಯಭಗಳನ್ನು ಒಳಗೊಂಡಿರುತ್ತದೆ.

ಅಯೋಧ್ಯೆಯಿಂದ ಹೊರಟ ರೈಲು ಬಿಹಾರದ ಸೀತಾಮರ್ಹಿ ರೈಲು ನಿಲ್ದಾಣಕ್ಕೆ ತಲಪುತ್ತದೆ. ನಂತರ ಪ್ರವಾಸಿಗರು ನೇಪಾಳದ ಜನಕ್ಪುರಕ್ಕೆ ಬಸ್ಗಳ ಮೂಲಕ ಸೀತಾಮರ್ಹಿ ರೈಲು ನಿಲ್ದಾಣದಿಂದ 70 ಕಿಮೀ ದೂರ ಪ್ರಯಾಣಿಸಬೇಕು. ಜನಕ್ಪುರದಲ್ಲಿ ತಂಗುವ ಸಮಯದಲ್ಲಿ ಪ್ರವಾಸಿಗರು ರಾಮ್ ಜಾನಕಿ ದೇವಸ್ಥಾನ, ಸೀತಾ ರಾಮ್ ವಿವಾಹ ಮಂಟಪ ಮತ್ತು ಧನುಷ್ ಧಾಮ್ಗೆ ಭೇಟಿ ನೀಡಬಹುದು ಎಂದು ಭಾರತೀಯ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
EMI ಮೂಲಕ ಹಣ ಪಾವತಿಸಬಹುದು
ಜನ ಸಾಮಾನ್ಯರಿಗೂ ಈ ಧಾರ್ಮಿಕ ಪ್ರವಾಸ ಕೈಗೆಟುಕುವಂತೆ ಮಾಡಲು ರೈಲ್ವೆ ಇಲಾಖೆ ಇಎಂಐ ಆಯ್ಕೆ ನೀಡಿದೆ. ಈ ನಿಟ್ಟಿನಲ್ಲಿ Paytm ಮತ್ತು Razorpay ಆನ್ಲೈನ್ ಪೇಮೆಂಟ್ ಪೋರ್ಟಲ್ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಬಳಕೆದಾರರು 3 ರಿಂದ 24 ರ ತಿಂಗಳುಗಳ ಅವಧಿಗೆ ಹಣ ಪಾವತಿಸಬಹುದಾಗಿದೆ. ಇಎಂಐ ಪಾವತಿ ಆಯ್ಕೆಗಳನ್ನು ಡೆಬಿಟ್/ಕ್ರೆಡಿಟ್ ಕಾರ್ಡ್ಗಳ ಮೂಲಕ ಮಾಡಬಹುದಾಗಿದೆ ಎಂದು ಇಲಾಖೆ ತಿಳಿಸಿದೆ.












Click it and Unblock the Notifications