ಕೊಡು-ಕೊಳ್ಳುವ ವ್ಯವಹಾರದಲ್ಲಿ ಗೆದ್ದ ಅಮೆರಿಕ; ಅಡಕತ್ತರಿಯಲ್ಲಿ ಸಿಕ್ಕಿದ ಇರಾನ್ ನ ಸಚಿವರು ಭಾರತಕ್ಕೆ
ಮೇ 1ನೇ ತಾರೀಕಿನ ತನಕ ಅಮೆರಿಕವು ಭಾರತಕ್ಕೆ ನೀಡಿದ್ದ ವಿನಾಯಿತಿ ಕೊನೆಗೊಳಿಸಿದೆ. ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳುವುದಕ್ಕೆ ನೀಡಿದ್ದ ಅಂತಿಮ ಗಡುವು ಅದಾಗಿತ್ತು. ಇದೀಗ ಇರಾನ್ ನ ವಿದೇಶಾಂಗ ಖಾತೆ ಸಚಿವರಾದ ಮೊಹ್ಮದ್ ಜಾವದ್ ಝರೀಫ್ ಅವರು ಸೋಮವಾರ ರಾತ್ರಿ ಭಾರತಕ್ಕೆ ಬಂದಿದ್ದು, ಮಂಗಳವಾರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರನ್ನು ಭೇಟಿ ಆಗುವುದು ನಿಕ್ಕಿ ಆಗಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳುವ ದೇಶಗಳಿಗೆ ಇನ್ನು ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ದ್ ಟ್ರಂಪ್ ಘೋಷಿಸಿದ ಮೂರು ವಾರದ ನಂತರ ಝರೀಫ್ ಈ ಪ್ರವಾಸ ಕೈಗೊಂಡಿದ್ದಾರೆ. ವಿನಾಯಿತಿಗೆ ಇತಿಶ್ರೀ ಎಂದರೆ ಅರ್ಥ, ಭಾರತವು ಇರಾನ್ ನಿಂದ ಯಾವುದೇ ತೈಲ ಆಮದು ಮಾಡಿಕೊಳ್ಳುವಂತಿಲ್ಲ. ಅದನ್ನು ಮೀರಿಯೂ ಆಮದು ಮಾಡಿಕೊಂಡರೆ ಸರಕಾರಿ ಅಥವಾ ಖಾಸಗಿ ಸ್ವಾಮ್ಯದ ಕಂಪೆನಿಗಳ ಮೇಲೆ ಅಮೆರಿಕ ದಿಗ್ಬಂಧನ ವಿಧಿಸುತ್ತದೆ.
ಮಂಗಳವಾರ ಸುಷ್ಮಾ ಸ್ವರಾಜ್ ರನ್ನು ಭೇಟಿಯಾಗುವ ಮುನ್ನ, ಭಾನುವಾರ- ಸೋಮವಾರ ತುರ್ಕ್ ಮೇನಿಸ್ತಾನದಲ್ಲಿ ಝರೀಫ್ ಇದ್ದರು. ಭಾರತ ಹಾಗೂ ಇರಾನ್ ಎರಡೂ ಕಡೆಯಿಂದಲೂ ಅಮೆರಿಕದ ನಿರ್ಧಾರದಿಂದ ಆಗುವ ಪರಿಣಾಮಗಳ ಚರ್ಚೆ ಆಗಲಿದೆ. ಇದರ ಜತೆಗೆ ಛಬಾರ್ ಬಂದರು ಯೋಜನೆ ಬಗ್ಗೆ ಕೂಡ ಚರ್ಚೆ ನಡೆಯಲಿದೆ. ಏಕೆಂದರೆ, ಛಬಾರ್ ಬಂದರು ಯೋಜನೆಗೆ ವಿನಾಯಿತಿ ನೀಡುವುದಾಗಿ ಅಮೆರಿಕ ಈಗಾಗಲೇ ಖಾತ್ರಿ ನೀಡಿದೆ.

ನಿಲುವು ಸಡಿಲಿಸಲು ಸಿದ್ಧವಿಲ್ಲದ ಅಮೆರಿಕ
ಕಳೆದ ವಾರ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರಾಸ್ ಭಾರತಕ್ಕೆ ಭೇಟಿ ನೀಡಿದ್ದಾಗಲೇ ಇರಾನ್ ತೈಲ ಆಮದಿನ ಬಗ್ಗೆ ಚರ್ಚೆ ನಡೆದಿತ್ತು. ಆ ವೇಳೆ ಅಮೆರಿಕ ತನ್ನ್ ನಿಲುವು ಸಡಿಲಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು. ಈಗಿನ ನಿರ್ಧಾರದಿಂದ ಭವಿಷ್ಯದಲ್ಲಿ ಜಂಟಿ ಸಮಗ್ರ ಕಾರ್ಯಾಚರಣೆ ಯೋಜನೆ (JCPOA) ಮೇಲೆ ಆಗುವ ಪರಿಣಾಮಗಳ ಬಗ್ಗೆ ಚರ್ಚೆ ನಡೆಸುವುದು ಝರೀಫ್ ಉದ್ದೇಶ. ಅವರು ಈ ವರ್ಷದ ಜನವರಿಯಲ್ಲೂ ಭಾರತಕ್ಕೆ ಬಂದಿದ್ದರು. ಈಗಿನದೂ ಸೇರಿದರೆ ಅವರ ಎರಡನೇ ಭೇಟಿ ಇದಾಗಲಿದೆ. ಅಮೆರಿಕ ತಾಕೀತು ಮಾಡುತ್ತಿರುವ ಪ್ರಕಾರ JCPOAನಿಂದಲೂ ಹಿಂತೆಗೆದುಕೊಳ್ಳ ಬೇಕಾಗುತ್ತದೆ. ಕಳೆದ ವರ್ಷ ಮೇ ತಿಂಗಳಲ್ಲಿ ಆರು ತಿಂಗಳ ಸಮಯ ನೀಡಿ, ಇರಾನ್ ನಿಂದ ಆಮದು ಮಾಡಿಕೊಳ್ಳುವ ತೈಲ ಪ್ರಮಾಣವನ್ನು ಶೂನ್ಯಕ್ಕೆ ತರಬೇಕು ಎನ್ನಲಾಗಿತ್ತು.

ಪರಸ್ಪರ ಒಪ್ಪಂದದ ಮಾತನಾಡಿದ್ದರು ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ P-5+1 ರಾಷ್ಟ್ರಗಳು ಮತ್ತು ಇರಾನ್ ಮಧ್ಯದ ಮಹತ್ವದ ಒಪ್ಪಂದವನ್ನು ನಿಷೇಧಿಸಿದ್ದರು. ಇದಕ್ಕೆ ಈ ಒಪ್ಪಂದದಲ್ಲಿ ಇರುವ ಇತರ ರಾಷ್ಟ್ರಗಳಾದ ಯು.ಕೆ., ಫ್ರಾನ್ಸ್, ಜರ್ಮನಿ, ಚೀನಾ, ರಷ್ಯಾ ಮತ್ತು ಇರಾನ್ ಆಕ್ಷೇಪ ವ್ಯಕ್ತಪಡಿಸಿ, ವಿರೋಧಿಸಿದ್ದವು. ಕಳೆದ ವರ್ಷದ ನವೆಂಬರ್ ನಲ್ಲಿ ಅಮೆರಿಕವು ಭಾರತ ಸೇರಿದಂತೆ ಎಂಟು ರಾಷ್ಟ್ರಗಳಿಗೆ ಇರಾನ್ ನಿಂದ ಆಮದು ಮಾಡಿಕೊಳ್ಳುವ ತೈಲ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಲು ಮತ್ತೆ ಆರು ತಿಂಗಳ ಗಡುವು ನೀಡಿತ್ತು. ಏಪ್ರಿಲ್ ನಲ್ಲಿ ಮತ್ತೊಮ್ಮೆ ಅಮೆರಿಕವು ಭಾರತಕ್ಕೆ ಸಂದೇಶವೊಂದನ್ನು ರವಾನಿಸಿ, ಪುಲ್ವಾಮಾ ದಾಳಿ ವಿಚಾರವಾಗಿ ಭಾರತದ ಪರವಾಗಿ ಅಮೆರಿಕ ನಿಲ್ಲುತ್ತದೆ. ಅದಕ್ಕೆ ಪ್ರತಿಯಾಗಿ ಇರಾನ್ ನಲ್ಲಿನ ಭಯೋತ್ಪಾದನೆ ಜಾಲವನ್ನು ಪೂರ್ತಿ ನಾಶಪಡಿಸಲು ಟ್ರಂಪ್ ಆಡಳಿತ ಬದ್ಧವಾಗಿರುವುದಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂದು ಹೇಳಿತ್ತು.

ಮಸೂದ್ ಅಜರ್ ಜಾಗತಿಕ ಉಗ್ರ ಎಂದು ಘೋಷಿಸಲು ನೆರವು
ಜೈಷ್-ಇ-ಮೊಹ್ಮದ್ ನ ಉಗ್ರ ಮಸೂದ್ ಅಜರ್ ನನ್ನು 'ಜಾಗತಿಕ ಭಯೋತ್ಪಾದಕ' ಎಂದು ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ಘೋಷಣೆ ಮಾಡುವ ಸಂಬಂಧ ಅಮೆರಿಕವು ಮುಂಚೂಣಿಯಲ್ಲಿತ್ತು. ಅದರ ಲೆಕ್ಕಾಚಾರದ ಪ್ರಕಾರ ಇದು ಕೊಟ್ಟು-ತೆಗೆದುಕೊಳ್ಳುವ ಲೆಕ್ಕಾಚಾರ ಆಗಿತ್ತು. ಮೇ ಒಂದರಿಂದ ಇರಾನ್ ನಿಂದ ಯಾವುದೇ ತೈಲ ಆಮದು ಮಾಡಿಕೊಳ್ಳಬಾರದು. ಬದಲಿಯಾಗಿ ಮಸೂದ್ ಅಜರ್ ನಲ್ಲಿ ಜಾಗತಿಕ ಭಯೋತ್ಪಾದಕ ಎಂದು ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ಘೋಷಣೆ ಮಾಡಲು ನೆರವಾಗುವುದಾಗಿ ಹೇಳಿತ್ತು. ಮತ್ತು ಅದೇ ರೀತಿಯಲ್ಲಿ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡುವುದರಲ್ಲಿ ಪ್ರಮುಖ ಪಾತ್ರ ಕೂಡ ವಹಿಸಿತು. ತನ್ನ ಮಾತನ್ನು ಉಳಿಸಿಕೊಂಡಿರುವ ಅಮೆರಿಕ, ಇದೀಗ ಭಾರತದಿಂದಲೂ ಅಂಥದ್ದೇ ನಡವಳಿಕೆಯ ನಿರೀಕ್ಷೆಯಲ್ಲಿದೆ ಮತ್ತು ಇರಾನ್ ನಿಂದ ತೈಲ ಆಮದು ಸಂಪೂರ್ಣ ನಿಲ್ಲಿಸಲಿ ಎಂಬ ಉದ್ದೇಶದಲ್ಲಿದೆ.

ಚೀನಾದ ನಂತರ ಅತಿ ಹೆಚ್ಚು ತೈಲ ಖರೀದಿಸುವ ಭಾರತ
ಚೀನಾದ ನಂತರ ಇರಾನ್ ನಿಂದ ಅತಿ ಹೆಚ್ಚು ತೈಲ ಖರೀದಿಸುವ ದೇಶ ಭಾರತ. ಇಪ್ಪತ್ತೆರಡೂವರೆ ಮಿಲಿಯನ್ ಟನ್ ನಿಂದ ಹದಿನೈದು ಮಿಲಿಯನ್ ಟನ್ ಗೆ ಮೊದಲಿಗೆ ಇಳಿಸಲಾಯಿತು. ಕಳೆದ ವರ್ಷ ಅಮೆರಿಕದ ಜತೆಗೆ ಮಾತುಕತೆ ನಡೆಸುವ ವೇಳೆ, ಇರಾನ್ ನ ತೈಲ ಆಮದು ನಿರ್ಬಂಧದಿಂದ ಆಗುವ ಪರಿಣಾಮಗಳನ್ನು ಭಾರತ ವಿವರಿಸಿತ್ತು. ಆ ನಂತರ ಕೆಲ ಕಾಲದ ಮಟ್ಟಿಗೆ ನಿರ್ಬಂಧದ ಬಗ್ಗೆ ಮಾತನಾಡದೆ ಸುಮ್ಮನಿದ್ದ ಅಮೆರಿಕ, ಕೊನೆಗೆ ಮೇ ಒಂದನೇ ತಾರೀಕಿಗೆ ಸಂಪೂರ್ಣ ಆಮದು ನಿರ್ಬಂಧಕ್ಕೆ ಸೂಚಿಸಿದೆ. ಈ ನಿರ್ಧಾರಕ್ಕೆ ತಾನು ಸಿದ್ಧವಿರುವುದಾಗಿ ಭಾರತ ಕೂಡ ಕಳೆದ ತಿಂಗಳು ತಿಳಿಸಿತ್ತು. ಭಾರತದ ವಿದೇಶಾಂಗ ಖಾತೆ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಮಾತನಾಡಿ, ಭಾರತದ ಇಂಧನ ಹಾಗೂ ಆರ್ಥಿಕ ಭದ್ರತೆಗೆ ಪೂರಕವಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಮಿತ್ರ ದೇಶಗಳ ಜತೆಗೆ ಸೇರಿ, ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಜಗತ್ತಿನಲ್ಲೇ ಅತಿ ಹೆಚ್ಚು ತೈಲ ಬಳಸುವ ಮೂರನೇ ದೊಡ್ಡ ದೇಶ ಭಾರತ. ಅದರಲ್ಲಿ ಎಂಬತ್ತೈದು ಪರ್ಸೆಂಟ್ ಕಚ್ಚಾ ತೈಲ, ಮೂವತ್ತೈದರಷ್ಟು ಅನಿಲ ಆಮದು ಮಾಡಿಕೊಳ್ಳಲಾಗುತ್ತದೆ. ಸೌದಿ ಅರೇಬಿಯಾ ಹಾಗೂ ಇರಾಕ್ ನಂತರ ಭಾರತಕ್ಕೆ ರಫ್ತು ಮಾಡುವ ಮೂರನೇ ದೊಡ್ಡ ದೇಶ ಇರಾನ್.












Click it and Unblock the Notifications