ಕಾಶ್ಮೀರದಲ್ಲಿ ಶಾಂತಿ ಕದಡಲು 30 ಕೋಟಿಗೂ ಹೆಚ್ಚು ಹಣ: ಎನ್ ಐಎ ತನಿಖೆ
ಕಾಶ್ಮೀರ, ಆಗಸ್ಟ್ 20: ಕಳೆದ ಒಂದು ತಿಂಗಳಿಂದ ಜಮ್ಮು-ಕಾಶ್ಮೀರದಲ್ಲಿ ಅನುಮಾನಾಸ್ಪದವಾಗಿ ನಡೆದ ಬ್ಯಾಂಕ್ ವ್ಯವಹಾರಗಳ ಮೇಲೆ ರಾಪ್ಟ್ರೀಯ ತನಿಖಾ ದಳ ಕಣ್ಣಿರಿಸಿದ್ದು, ಅನುಮಾನ ಮೂಡಿಸುವಂಥ ಬ್ಯಾಂಕ್ ಖಾತೆಗಳ ಪಟ್ಟಿ ತಯಾರಿಸುವಲ್ಲಿ ನಿರತವಾಗಿದೆ.
ಜುಲೈ 8ರಂದು ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಬುಹ್ರಾನ್ ವನಿ ಎನ್ ಕೌಂಟರ್ ನಂತರ ಕಣಿವೆ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಬೆಂಬಲ ನೀಡಲು ಹೊರಗಡೆಯಿಂದ ಹಣ ಹರಿದುಬಂದಿದೆ ಎಂಬ ಗುಮಾನಿಯಿಂದ ತನಿಖೆ ನಡೆಯುತ್ತಿದೆ.[4 ಸಲ ಭಾರತಕ್ಕೆ ಬಂದಿದ್ದ ಪಾಕಿಸ್ತಾನ ಗೂಢಚಾರನಿಗೆ 3 ಸಾವಿರ ಸಂಬಳ]
ರಾಪ್ಟ್ರೀಯ ತನಿಖಾ ದಳವು ರಾಜ್ಯದ ಬ್ಯಾಂಕ್ ಗಳನ್ನು ಸಂಪರ್ಕಿಸಿ, ಅನುಮಾನ ಮೂಡಿಸುವಂಥ ಹಣಕಾಸು ವ್ಯವಹಾರ ನಡೆದಿರುವ ಖಾತೆಗಳ ವಿವರಗಳನ್ನು ನೀಡುವಂತೆ ಮನವಿ ಮಾಡಿದೆ. ದೊಡ್ಡ ಮೊತ್ತದ ಹಣ ವಿವಿಧ ಬ್ಯಾಂಕ್ ಖಾತೆಗಳಲ್ಲಿ ಜಮೆಯಾಗಿದೆ ಮತ್ತು ಕಣಿವೆ ರಾಜ್ಯದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಮಾಡುವ ಸಲುವಾಗಿಯೇ ಹತ್ತಿರ ಹತ್ತಿರ 30 ಕೋಟಿ ರುಪಾಯಿ ಹಲವು ಬ್ಯಾಂಕ್ ಖಾತೆಗಳಿಗೆ ಜಮೆಯಾಗಿವೆ ಎಂಬ ಅನುಮಾನವನ್ನು ಗುಪ್ತಚರ ಇಲಾಖೆ ವ್ಯಕ್ತಪಡಿಸಿದೆ.
ಗಲ್ಫ್ ನಲ್ಲಿರುವ ಕಾಶ್ಮೀರ ಮೂಲದ ಕೆಲವು ವ್ಯಾಪಾರಿಗಳ ಮೂಲಕವು ಹಣ ಹರಿದುಬಂದಿದೆ. ಹಣಕಾಸು ವ್ಯವಹಾರದ ಬಗ್ಗೆ ಅನುಮಾನ ಬರಕೂಡದು ಎಂಬ ಕಾರಣಕ್ಕೆ ತಾವು ಖರೀದಿಸಿದ ಸರಕುಗಳಿಗೆ ಹೆಚ್ಚಿನ ಪಾವತಿ ಮಾಡಿರುವ ಸಾಧ್ಯತೆ ಇದೆ ಯೇ ಎಂಬ ದಿಕ್ಕಿನಿಂದಲೂ ಎನ್ ಐಎ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ.[ಪಾಕ್ ಸುದ್ದಿ ಬಂದಾಗ ದಿಗ್ವಿಜಯ್ ಸಿಂಗ್ ಬಾಯಿ ಬಿಡೋದು ಯಾಕೆ?]
ಅನುಮಾನಾಸ್ಪದ ವ್ಯವಹಾರಗಳ ಪಟ್ಟಿ ಬ್ಯಾಂಕ್ ಗಳಿಂದ ದೊರೆತ ನಂತರ ಆಯಾ ವ್ಯಕ್ತಿಗಳನ್ನು ವೈಯಕ್ತಿಕವಾಗಿ ವಿಚಾರಣೆ ನಡೆಸಲಾಗುವುದು. ಇದರ ಜತೆಗೆ ಕಾಶ್ಮೀರದಲ್ಲಿ ಶಾಂತಿ ಕದಡಲು ಹವಾಲಾ ಮೂಲಕವೇನಾದರೂ ಹಣ ಬಂದಿದೆಯೇ ಎಂದು ಕೂಡ ತನಿಖೆ ನಡೆಸಲಾಗುವುದು ಎಂದು ರಾಪ್ಟ್ರೀಯ ತನಿಖಾ ದಳದ ಅಧಿಕಾರಿಗಳು ತಿಳಿಸಿದ್ದಾರೆ.