"ಭಾರತಕ್ಕೆ ಬಂದವರ ಸಂಖ್ಯೆಗೂ ಗೃಹ ದಿಗ್ಬಂಧನ ಲೆಕ್ಕಕ್ಕೂ ತಾಳೆ ಆಗ್ತಿಲ್ಲ"
ನವದೆಹಲಿ, ಮಾರ್ಚ್ 27: ಅಂತರರಾಷ್ಟ್ರೀಯ ವಿಮಾನ ಹಾರಾಟ ನಿಷೇಧಿಸುವ ಮುನ್ನ ಭಾರತಕ್ಕೆ ಬಂದ ವಿದೇಶೀಯರ ಸಂಖ್ಯೆಗೂ ಈಗ ಗೃಹ ದಿಗ್ಬಂಧನದಲ್ಲಿ ಇರುವ ಸಂಖ್ಯೆಗೂ ತಾಳೆ ಆಗುತ್ತಿಲ್ಲ ಎಂಬ ಬಗ್ಗೆ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬ ಅವರು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಅಂತರರಾಷ್ಟ್ರೀಯ ಪ್ರಯಾಣಿಕರ ಮೇಲೆ ಕಣ್ಣಿಡುವುದಕ್ಕೆ ಹೆಚ್ಚಿನ ಕ್ರಮಕ್ಕೆ ನಿರ್ದೇಶಿಸಿದ್ದಾರೆ.
ಎಲ್ಲ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಅವರು ಪತ್ರ ಬರೆದಿದ್ದು, ಇಷ್ಟು ದೊಡ್ಡ ವ್ಯತ್ಯಾಸ ಕಂಡು ಬಂದಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಯುವುದಕ್ಕೆ ಕಷ್ಟವಾಗುತ್ತದೆ. ಈ ವರೆಗೆ ಕೊರೊನಾ ಪಾಸಿಟಿವ್ ಆಗಿರುವವರ ಪೈಕಿ ಬಹುತೇಕರು ಅಂತರರಾಷ್ಟ್ರೀಯ ಪ್ರಯಾಣ ಮಾಡಿದ ಇತಿಹಾಸ ಇರುವವರು ಎಂದಿದ್ದಾರೆ.
ಜನವರಿ 18, 2020ರಿಂದ ನಮ್ಮ ಗಮನಕ್ಕೆ ಬಂದಂತೆ ಹದಿನೈದು ಲಕ್ಷಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪ್ರಯಾಣಿಕರು ಬಂದಿದ್ದಾರೆ. ಅವರ ಮೇಲೆ ಕೊರೊನಾ ನಿಗಾ ವಹಿಸಲಾಗಿದೆ. ಆದರೆ ಭಾರತಕ್ಕೆ ಬಂದವರು ಹಾಗೂ ಕೊರೊನಾಗಾಗಿ ನಿಗಾ ಮಾಡುತ್ತಿರುವವರ ಸಂಖ್ಯೆಯಲ್ಲಿ ತಾಳೆ ಆಗುತ್ತಿಲ್ಲ ಎಂದು ಹೇಳಿದ್ದಾರೆ.
ಆದರೆ, ಎಷ್ಟು ಮಂದಿ ಮೇಲೆ ನಿಗಾ ವಹಿಸಲಾಗಿದೆ ಎಂಬ ಮಾಹಿತಿ ಆ ಪತ್ರದಲ್ಲಿ ಇಲ್ಲ. ಕೊರೊನಾ ಹರಡದಿರಬೇಕು ಅಂದರೆ ಅಂತರರಾಷ್ಟ್ರೀಯ ಪ್ರಯಾಣಿಕರು ಎಲ್ಲರ ಮೇಲೂ ನಿಗಾ ವಹಿಸಲೇಬೇಕು ಎಂದಿದ್ದಾರೆ. ಈ ತಕ್ಷಣವೇ ಅಂಥವರ ಮೇಲೆ ನಿಗಾ ವಹಿಸುವುದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳುವುದಕ್ಕೆ ಸೂಚಿಸಲಾಗಿದೆ.
ದೇಶದಲ್ಲಿ 700ಕ್ಕೂ ಹೆಚ್ಚು ಸೋಂಕಿತರು ಇದ್ದು, ಕನಿಷ್ಠ 17 ಮಂದಿ ಸಾವನ್ನಪ್ಪಿದ್ದಾರೆ. ಆದ್ದರಿಂದ ಜಿಲ್ಲಾಡಳಿತದ ಸಹಾಯ ಪಡೆದು, ಅಂತರರಾಷ್ಟ್ರೀಯ ಪ್ರಯಾಣಿಕರನ್ನು ಪತ್ತೆ ಹಚ್ಚಿ, ನಿಗಾ ಮಾಡುವಂತೆ ಸೂಚನೆ ನೀಡಲಾಗಿದೆ. ಅಂದ ಹಾಗೆ ಕೊರೊನಾ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಕಳೆದ ಮಂಗಳವಾರದಿಂದ 21 ದಿನಗಳ ಕಾಲ ದೇಶ ವ್ಯಾಪಿ ಲಾಕ್ ಡೌನ್ ಗೆ ಕರೆ ನೀಡಲಾಗಿದೆ.