ಕೊರೊನಾವೈರಸ್ ಪಿಡುಗಿನಲ್ಲೂ ಭಾರತ-ರಷ್ಯಾ ಒಪ್ಪಂದ ಬದಲಾಗಿಲ್ಲ: ಮೋದಿ
ನವದೆಹಲಿ, ಡಿಸೆಂಬರ್ 6: ಭಾರತ-ರಷ್ಯಾ ನಡುವಿನ 21ನೇ ವಾರ್ಷಿಕ ಶೃಂಗಸಭೆ ಅಂಗವಾಗಿ ಭಾರತಕ್ಕೆ ಆಗಮಿಸಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಸ್ವಾಗತಿಸಿದರು. ನವದೆಹಲಿಯ ಹೈದ್ರಾಬಾದ್ ಹೌಸ್ ನಲ್ಲಿ ಉಭಯ ನಾಯಕರು ಭೇಟಿ ಮಾಡಿದರು.
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಕಾಲದಲ್ಲೂ ಉಭಯ ರಾಷ್ಟ್ರಗಳ ನಡುವಿನ ಒಪ್ಪಂದದಲ್ಲಿ ಯಾವುದೇ ರೀತಿ ಬದಲಾವಣೆಗಳಾಗಿಲ್ಲ. ಉಭಯ ಪಕ್ಷಗಳ ನಡುವಿನ ವಿಶೇಷ ಕಾರ್ಯತಂತ್ರವು ತಮ್ಮ ನಡುವಿನ ಪಾಲುದಾರಿಕೆಯನ್ನು ಬಲಗೊಳಿಸುತ್ತಿದೆ. ಉಭಯ ನಾಯಕರು ಅಫ್ಘಾನಿಸ್ತಾನದ ಪರಿಸ್ಥಿತಿ ಮತ್ತು ಇತರ ವಿಷಯಗಳ ಬಗ್ಗೆ ಚರ್ಚೆ ನಡೆಸಿರುವ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
"ಭಾರತ ಮತ್ತು ರಷ್ಯಾ ರಾಷ್ಟ್ರಗಳು ಇತ್ತೀಚಿನ ದಿನಗಳಲ್ಲಿ ಹಲವಾರು ಸವಾಲುಗಳನ್ನು ಎದುರಿಸಿದವು. ಅಂಥ ಸಂದರ್ಭದಲ್ಲಿ ಭಾರತವು ಸಹಕಾರ ಮಾತ್ರವಲ್ಲದೆ ಪರಸ್ಪರರ ಸೂಕ್ಷ್ಮತೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಭಾರತ ಮತ್ತು ರಷ್ಯಾ ನಡುವಿನ ಸಂಬಂಧ ಸ್ಥಿರ:
"ಕಳೆದ ಕೆಲವು ದಶಕಗಳಲ್ಲಿ ಇಡೀ ಪ್ರಪಂಚವು ಅನೇಕ ಮೂಲಭೂತ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ವಿವಿಧ ರೀತಿಯ ಭೌಗೋಳಿಕ ರಾಜಕೀಯ ಸಮೀಕರಣಗಳು ಈ ಹಂತದಲ್ಲಿ ಹೊರಹೊಮ್ಮಿದವು, ಆದರೆ ಭಾರತ ಮತ್ತು ರಷ್ಯಾದ ಸ್ನೇಹ ಸಂಬಂಧವು ಎಲ್ಲ ಕಾಲದಲ್ಲೂ ಸ್ಥಿರವಾಗಿದೆ. "ಭಾರತ ಮತ್ತು ರಷ್ಯಾ ನಡುವಿನ ಸಂಬಂಧವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನನ್ಯ ಮತ್ತು ವಿಶ್ವಾಸಾರ್ಹ ಸ್ನೇಹಕ್ಕೆ ಮಾದರಿಯಾಗಿದೆ," ಎಂದು ಪ್ರಧಾನಿ ಮೋದಿ ಸಭೆಯಲ್ಲಿ ಹೇಳಿದರು.
ನಾವು ಭವಿಷ್ಯದ ಕಡೆಗೆ ನೋಡುತ್ತಿದ್ದೇವೆ:
21ನೇ ಇಂಡೋ-ರಷ್ಯಾ ವಾರ್ಷಿಕ ಶೃಂಗಸಭೆಗೆ ಆಗಮಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ನಾವು ಭಾರತವನ್ನು ಮಹಾನ್ ಶಕ್ತಿ, ಸ್ನೇಹಪರ ರಾಷ್ಟ್ರ ಮತ್ತು ದೀರ್ಘಕಾಲಿಕ ಸ್ನೇಹಿತ ಎಂದು ತಿಳಿದುಕೊಂಡಿದ್ದೇವೆ ಎಂದರು. ನಮ್ಮ ರಾಷ್ಟ್ರಗಳ ನಡುವಿನ ಸಂಬಂಧಗಳು ಬೆಳೆಯುತ್ತಿದ್ದು, ಈಗ ನಾನು ಭವಿಷ್ಯವನ್ನು ಕಟ್ಟಿಕೊಳ್ಳುವುದಕ್ಕೆ ನೋಡುತ್ತಿದ್ದೇವೆ ಎಂದು ಹೇಳಿದರು.
"ಪ್ರಸ್ತುತ, ರಷ್ಯಾದ ಕಡೆಯಿಂದ ಹೂಡಿಕೆ ಪ್ರಮಾಣದಲ್ಲಿ ಸ್ವಲ್ಪ ಹೆಚ್ಚಳವಾಗಿದ್ದು, ಪರಸ್ಪರ ಹೂಡಿಕೆಯು ಸುಮಾರು 38 ಬಿಲಿಯನ್ ಆಗಿವೆ. ಬೇರೆ ಯಾವುದೇ ದೇಶಗಳಿಗಿಂತ ವಿಭಿನ್ನವಾಗಿ ನಾವು ಮಿಲಿಟರಿ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಸಹಕರಿಸುತ್ತೇವೆ. ನಾವು ಒಟ್ಟಾಗಿ ಉನ್ನತ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತೇವೆ ಹಾಗೂ ಭಾರತದಲ್ಲಿ ಅದನ್ನು ಉತ್ಪಾದಿಸುತ್ತೇವೆ "ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದರು.
ಭಾರತ-ರಷ್ಯಾ ನಡುವಿನ ಭದ್ರತಾ ಒಪ್ಪಂದ:
ಮಿಲಿಟರಿ-ತಾಂತ್ರಿಕ ಸಹಕಾರದ ಮೇಲಿನ ಭಾರತ-ರಷ್ಯಾ ಅಂತರ-ಸರ್ಕಾರಿ ಆಯೋಗದ ಚೌಕಟ್ಟಿನ ಅಡಿಯಲ್ಲಿ ಸೋಮವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಷ್ಯಾದ ಪ್ರತಿನಿಧಿ ಸರ್ಗೆ ಶೋಯ್ಗು ಜೊತೆ ಮಾತುಕತೆ ನಡೆಸಿದರು. ಇನ್ನೊಂದು ಕಡೆಯಲ್ಲಿ ರಷ್ಯಾದ ಪ್ರತಿನಿಧಿ ಸೆರ್ಗೆ ಲಾವ್ರೊವ್ ಜೊತೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮಾತುಕತೆ ನಡೆಸಿದರು. ತದನಂತರ ಎರಡು ಕಡೆ ವಿದೇಶಾಂಗ ಮತ್ತು ರಕ್ಷಣಾ ಸಚಿವರು '2+2' ಸಂವಾದ ನಡೆಸಿದರು.
ರಕ್ಷಣಾ ಸಚಿವರ ನಡುವಿನ ಮಾತುಕತೆಯ ಕೊನೆಯಲ್ಲಿ, ಉತ್ತರ ಪ್ರದೇಶದ ಅಮೇಥಿಯಲ್ಲಿರುವ ಉತ್ಪಾದನಾ ಘಟಕದಲ್ಲಿ ಆರು ಲಕ್ಷಕ್ಕೂ ಹೆಚ್ಚು AK-203 ಅಸಾಲ್ಟ್ ರೈಫಲ್ಗಳನ್ನು ಜಂಟಿಯಾಗಿ ಉತ್ಪಾದಿಸುವ ಒಪ್ಪಂದಕ್ಕೆ ಎರಡೂ ಕಡೆಯಿಂದ ಅಂಕಿತ ಹಾಕಲಾಯಿತು. ಸುಮಾರು 5,000 ಕೋಟಿ ರೂಪಾಯಿ ವೆಚ್ಚದಲ್ಲಿ ಭಾರತೀಯ ಸಶಸ್ತ್ರ ಪಡೆಗಳಿಗೆ ರೈಫಲ್ಗಳನ್ನು ತಯಾರಿಸಲಾಗುವುದು. ಇದರ ಜೊತೆಗೆ 10 ವರ್ಷಗಳ ಮಿಲಿಟರಿ ಸಹಕಾರದ ಕುರಿತು ಮತ್ತೊಂದು ಒಪ್ಪಂದ ದೃಢಪಡಿಸಲಾಯಿತು.
ಭಾರತ-ರಷ್ಯಾದ ಮಿಲಿಟರಿ ಮತ್ತು ಮಿಲಿಟರಿ-ತಾಂತ್ರಿಕ ಸಹಕಾರದ (IRIGC-M&MTC) ಅಂತರ-ಸರ್ಕಾರಿ ಆಯೋಗದ 20ನೇ ಸಭೆಯಲ್ಲಿ ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತು.












Click it and Unblock the Notifications