ಭಾರತ- ಚೀನಾ ಯುದ್ಧ? ದೋಕ್ಲಾಂ ಹತ್ತಿರದ ಹಳ್ಳಿಗರ ಸ್ಥಳಾಂತರ
ನವದೆಹಲಿ, ಆಗಸ್ಟ್ 10: ಚೀನಾ- ಭಾರತದ ಮಧ್ಯೆ ಯುದ್ಧ ಸನ್ನಿಹಿತವಾಗುತ್ತಿದೆಯಾ? ದೋಕ್ಲಾಂ ಉದ್ವಿಗ್ನತೆಯ ನಂತರ ಮೊದಲ ಬಾರಿಗೆ ಅಲ್ಲಿಂದ ಮೂವತ್ತೈದು ಕಿಲೋಮೀಟರ್ ದೂರದ ನತಾಂಗ್ ಗ್ರಾಮಸ್ಥರನ್ನು ತಕ್ಷಣವೇ ಸ್ಥಳಾಂತರ ಮಾಡುವಂತೆ ಸೂಚಿಸಲಾಗಿದೆ. ಆ ಸುಳಿವು ಈಗ ಪ್ರಶ್ನೆ ಹುಟ್ಟುಹಾಕಿದೆ.
2007-2017ರ ಮಧ್ಯೆ 37 ಬಾರಿ ಭಾರತಕ್ಕೆ ಕಾಲಿಟ್ಟಿತ್ತು ಚೀನಾ ಸೇನೆ!
ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಸೈನಿಕರ ಗುಂಪುಗಳ ಚಟುವಟಿಕೆ ವಿಪರೀತವಾಗಿದೆ. ಈ ಬಗ್ಗೆ ನ್ಯೂಸ್ 18 ವರದಿ ಮಾಡಿದೆ. ದೋಕ್ಲಾಂನಿಂದ ಸಂಘರ್ಷದ ಬಗ್ಗೆ ಸಂದೇಶಗಳು ರವಾನೆಯಾಗುತ್ತಿವೆ. ಆದರೆ ಮೂಲಗಳ ಪ್ರಕಾರ, ಹಳ್ಳಿಗರನ್ನು ಸ್ಥಳಾಂತರ ಮಾಡುವಂತೆ ಸೂಚನೆ ನೀಡಿರುವುದಕ್ಕೂ ದೋಕ್ಲಾಂ ಬಿಕ್ಕಟ್ಟಿಗೂ ಸಂಬಂಧವಿಲ್ಲ.
ಇದು ಸೈನಿಕರು ನಡೆಸುವ ವಾರ್ಷಿಕ ತಾಲೀಮು. ಯೋಧರು ಸುಕ್ನಾದಿಂದ ದೋಕ್ಲಾಂಗೆ ತೆರಳುತ್ತಾರೆ ಎಂದು ಮೂಲಗಳು ತಿಳಿಸಿವೆ. ಇದು ವಾರ್ಷಿಕವಾಗಿ ನಡೆಯುವ ಯೋಧರ ತಾಲೀಮು ಅಷ್ಟೇ ಎನ್ನಲಾಗಿದೆ.
ಈ ತಾಲೀಮು ಮಾಮೂಲಿ ನಿರ್ವಹಣಾ ನಡೆ ಎಂದಿದೆ ಸೈನ್ಯ. ಈ ಬಗ್ಗೆ ಅಧಿಕಾರಿಗಳು ಮಾತನಾಡಿದ್ದು, ದೋಕ್ಲಾಂ ಸನ್ನಿವೇಶ 'ಯುದ್ಧವೂ ಇಲ್ಲ, ಶಾಂತಿಯೂ ಇಲ್ಲ' ಎಂಬಂತಿದೆ ಎಂದಿದ್ದಾರೆ.
ಪರ್ವತವನ್ನು ಅಲ್ಲಾಡಿಸಬಹುದು ಚೀನಾ ಸೇನೆಯನ್ನಲ್ಲ: ಭಾರತಕ್ಕೆ ಎಚ್ಚರಿಕೆ
ಈ ಮಧ್ಯೆ ದೋಕ್ಲಾಂನಿಂದ ಹಿಂತಿರುಗುವಂತೆ ಚೀನಾವು ಭಾರತದ ಮೇಲೆ ಒತ್ತಡ ಹೇರುತ್ತಿದೆ. ಚೀನಾವು ಅಲ್ಲಿ ಸೈನ್ಯವನ್ನು ವಾಪಸ್ ಕರೆಸಿಕೊಂಡರೆ ಮಾತ್ರ ಭಾರತವು ಸೇನೆ ವಾಪಸ್ ಕರೆಸಿಕೊಳ್ಳುತ್ತದೆ ಎಂದು ಖಡಾಖಡಿ ಹೇಳಿದೆ. ಜತೆಗೆ ಚೀನಾದ ಮಾಧ್ಯಮಗಳು ಕೂಡ ಈ ವಿಚಾರದಲ್ಲಿ ವರದಿ ಮಾಡುತ್ತಿವೆ.
ಪ್ರತಿ ದಿನವೂ ಯುದ್ಧ ಸಾಧ್ಯತೆ ಬಗ್ಗೆ ವರದಿ ಮಾಡುತ್ತಿದ್ದು, ಭಾರತಕ್ಕೆ 1962ರ ಚೀನಾ ಯುದ್ಧವನ್ನು ನೆನಪಿಸುತ್ತಿವೆ. ಕೇಂದ್ರ ರಕ್ಷಣಾ ಸಚಿವ ಅರುಣ್ ಜೇಟ್ಲಿ, ಇದು 2017ನೇ ಇಸವಿ 1962 ಅಲ್ಲ ಎಂದು ಚೀನಿಯರಿಗೆ ನೆನಪಿಸಿದ್ದಾರೆ. 1962ರ ಯುದ್ಧದಿಂದ ಭಾರತ ಪಾಠ ಕಲಿತಿದೆ. ಈಗ ಹೆಚ್ಚು ಪ್ರಬಲವಾಗಿದೆ ಎಂದಿದ್ದಾರೆ.
ಒನ್ಇಂಡಿಯಾ ನ್ಯೂಸ್