ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ಭಾರತದ ದಲ್ವೀರ್ ಭಂಡಾರಿ ಪುನರಾಯ್ಕೆ
ನ್ಯೂಯಾರ್ಕ್, ನವೆಂಬರ್ 21: ನೆದರ್ಲೆಂಡ್ ರಾಜಧಾನಿ ಹೇಗ್ ನಲ್ಲಿರುವ ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾಗಿ ಭಾರತದ ದಲ್ವೀರ್ ಸಿಂಗ್ ಪುನರಾಯ್ಕೆಯಾಗಿದ್ದಾರೆ.
ಅಂತರಾಷ್ಟ್ರೀಯ ನ್ಯಾಯಾಲಯದ ಕೊನೆಯ ನ್ಯಾಯಾಧೀಶರ ಸ್ಥಾನಕ್ಕೆ ಬ್ರಿಟನ್ ಕೂಡಾ ನಾಮಪತ್ರ ಸಲ್ಲಿಸಿತ್ತು. ಆದರೆ ಕೊನೆಯ ಕ್ಷಣದಲ್ಲಿ ಬ್ರಿಟನ್ ತನ್ನ ನಾಮಪತ್ರ ಹಿಂತೆಗೆದುಕೊಂಡಿದ್ದರಿಂದ ಭಾರತದ ದಲ್ವೀರ್ ಸಿಂಗ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.

ನ್ಯೂಯಾರ್ಕ್ ನ ವಿಶ್ವಸಂಸ್ಥೆಯಲ್ಲಿ ನಡೆದ ಮತದಾನದದಲ್ಲಿ ಭಂಡಾರಿ ಸಾಮಾನ್ಯ ಸಭೆಯಲ್ಲಿ 183 (ಒಟ್ಟು 193 ಮತ) ಮತಗಳನ್ನು ಪಡೆದರೆ ಭದ್ರತಾ ಸಮಿತಿಯ ಎಲ್ಲಾ 15 ಮತಗಳನ್ನು ಪಡೆಯುವ ಮೂಲಕ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.
ನ್ಯಾಯಾಧೀಶರ ಸ್ಥಾನಕ್ಕೆ ಬ್ರಿಟನ್ ನ ಕ್ರಿಸ್ಟೋಫರ್ ಗ್ರೀನ್ ವುಡ್ ಮತ್ತು ಭಾರತದ ಭಂಡಾರಿ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ನಾಟಕೀಯ ಬೆಳವಣಿಗೆಯಲ್ಲಿ ವಿಶ್ವಸಂಸ್ಥೆಯ ಬ್ರಿಟನ್ ಪ್ರತಿನಿಧಿ ಮ್ಯಾಥ್ಯೂ ರೈಕ್ರಾಫ್ಟ್ ತಮ್ಮ ಅಭ್ಯರ್ಥಿಯ ನಾಮಪತ್ರ ಹಿಂತೆಗೆದುಕೊಳ್ಳುತ್ತಿರುವುದಾಗಿ ಸಾಮಾನ್ಯ ಸಭೆಯ ಅಧ್ಯಕ್ಷರು ಹಾಗೂ ಭದ್ರತಾ ಸಮಿತಿ ಅಧ್ಯಕ್ಷರಿಗೆ ಪತ್ರ ಬರೆದರು.
ಇದರೊಂದಿಗೆ ನಿರಾಯಾಸವಾಗಿ ಭಂಡಾರಿ ನ್ಯಾಯಾಧೀಶರ ಗದ್ದುಗೆ ಏರಿದರು. ಅವರು ಅಂತರಾಷ್ಟ್ರೀಯ ನ್ಯಾಯಾಲಯ ನ್ಯಾಯಾಧೀಶರಾಗುತ್ತಿರುವುದು ಇದು ಎರಡನೇ ಬಾರಿ.












Click it and Unblock the Notifications