ರಾಷ್ಟ್ರಪತಿ ಚುನಾವಣೆ: ಬಿಜೆಪಿಗೆ ತಿರುಗೇಟು ನೀಡಲು ಕಾಂಗ್ರೆಸ್ ಅಚ್ಚರಿಯ ಆಯ್ಕೆ?
ಗುರುವಾರ (ಜೂ 22) ಮೈತ್ರಿಕೂಟದ ಒಂಬತ್ತು ಪಕ್ಷಗಳ ಸಭೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆಯಲಿದೆ. ಗುರುವಾರ ರಾಷ್ಟ್ರಪತಿ ಚುನಾವಣೆಗೆ ಯುಪಿಎ ಮೈತ್ರಿಕೂಟದ ಅಭ್ಯರ್ಥಿಯ ಹೆಸರು ಅಂತಿಮವಾಗುವ ಸಾಧ್ಯತೆ ದಟ್ಟವಾಗಿದೆ.
ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ನೇತೃತ್ವದ ಎನ್ಡಿಎ ತಮ್ಮ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದ ಬೆನ್ನಲ್ಲೇ, ಯುಪಿಎ ಮೈತ್ರಿಕೂಟದ ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆ ಗರಿಗೆದರಿದೆ.
ಗುರುವಾರ (ಜೂ 22) ಮೈತ್ರಿಕೂಟದ ಒಂಬತ್ತು ಪಕ್ಷಗಳ ಸಭೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆಯಲಿದೆ. ದಲಿತ ಸಮುದಾಯದ ವ್ಯಕ್ತಿಯೊಬ್ಬರನ್ನು ದೇಶದ ಸರ್ವೋನ್ನತ ಹುದ್ದೆಗೆ ತಮ್ಮ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸುವುದರ ಮೂಲಕ ಯುಪಿಎ ಮೈತ್ರಿಕೂಟಕ್ಕೆ ಶಾಕ್ ನೀಡಿದೆ.
ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿಗೆ ಶಿವಸೇನೆ ಬೆಂಬಲ
ಎಡರಂಗ ಮತ್ತು ತೃಣಮೂಲ ಕಾಂಗ್ರೆಸ್ಸಿನ ಬೆಂಬಲ ಈಗಾಗಲೇ ಪಡೆದುಕೊಂಡಿರುವ ಕಾಂಗ್ರೆಸ್ಸಿಗೆ, ಇತರ ಏಳು ಪಕ್ಷಗಳ ಸದಸ್ಯರನ್ನು ಮನವೊಲಿಸಿ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಬೇಕಾಗಿದೆ.
ಬಿಜೆಪಿ ಅಭ್ಯರ್ಥಿಗೆ ತಿರುಗೇಟು ನೀಡಲು ದಲಿತ ಸಮುದಾಯದವರನ್ನೇ ಆಯ್ಕೆ ಮಾಡುವ ನಿರ್ಧಾರಕ್ಕೆ ಯುಪಿಎ ಬರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಯುಪಿಎ ಮೈತ್ರಿಕೂಟದ ಅಭ್ಯರ್ಥಿಯ ಆಯ್ಕೆ ಬಹುತೇಕ ಗುರುವಾರ ಅಂತಿಮವಾಗಲಿದೆ.
ಬಿಹಾರದ ರಾಜ್ಯಪಾಲರಾಗಿದ್ದ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಹುದ್ದೆಗೆ ತನ್ನ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿದ ಮೇಲೆ, ಕಾಂಗ್ರೆಸ್ ತನ್ನ ರಣತಂತ್ರವನ್ನು ಬದಲಿಸಿದೆ ಎನ್ನುವ ಮಾಹಿತಿಯಿದೆ. ಯುಪಿಎ ಮೈತ್ರಿಕೂಟದ ಸಂಭಾವ್ಯ ಅಭ್ಯರ್ಥಿಗಳು, ಮುಂದೆ ಓದಿ..
ಮೂರು ಪ್ರಾದೇಶಿಕ ಪಕ್ಷಗಳ ಬೆಂಬಲ ಬಿಜೆಪಿಗೆ
ದೇಶದ ಮೂರು ಪ್ರಮುಖ ಪ್ರಾದೇಶಿಕ ಪಕ್ಷಗಳನ್ನು ತನ್ನತ್ತ ಸೆಳೆದುಕೊಳ್ಳಬಹುದು ಎನ್ನುವ ಕಾಂಗ್ರೆಸ್ ಲೆಕ್ಕಾಚಾರ ಉಲ್ಟಾ ಹೊಡೆದ ನಂತರ, ಕಾಂಗ್ರೆಸ್ಸಿಗೆ ಪ್ರತಿಷ್ಠೆಯ ಈ ಚುನಾವಣೆಯಲ್ಲಿ ಗೆಲುವಿನ ಸಾಧ್ಯತೆ ಮತ್ತಷ್ಟು ಕ್ಷೀಣಿಸಿದೆ. ನಿತೀಶ್ ಕುಮಾರ್, ಶಿವಸೇನೆ ಮತ್ತು ನವೀನ್ ಪಟ್ನಾಯಕ್ ತಮ್ಮ ಬೆಂಬಲವನ್ನು ಈಗಾಗಲೇ ಎನ್ಡಿಎ ಮೈತ್ರಿಕೂಟಕ್ಕೆ ಸೂಚಿಸಿದ್ದಾಗಿದೆ.
ಮೊದಲ ಮಹಿಳಾ ಸ್ಪೀಕರ್ ಮೀರಾ ಕುಮಾರ್
ಮೊದಲ ಮಹಿಳಾ ಸ್ಪೀಕರ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ, ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರನ್ನು ಯುಪಿಎ ತನ್ನ ಅಭ್ಯರ್ಥಿಯನ್ನಾಗಿ ಘೋಷಿಸುವ ಸಾಧ್ಯತೆಯಿದೆ. ಬಿಹಾರ ಮೂಲದ, ದಲಿತ ಸಮುದಾಯದ ಮತ್ತು ಐದು ಬಾರಿ ಸಂಸದರಾಗಿರುವ ಮೀರಾ, ದೇಶದ ಮಾಜಿ ಉಪಪ್ರಧಾನಿ ಜಗಜೀವನ ರಾಂ ಅವರ ಪುತ್ರಿ.
ಶರದ್ ಪವಾರ್ ಹೆಸರು ಚಾಲ್ತಿಯಲ್ಲಿ
ಮಹಾರಾಷ್ಟ್ರ ಮೂಲದ ಶರದ್ ಪವಾರ್ ಅವರ ಹೆಸರೂ ಕೇಳಿ ಬರುತ್ತಿದೆ. ಈಗಾಗಲೇ ಬಿಜೆಪಿಗೆ ಬೆಂಬಲ ಘೋಷಿಸಿದ್ದರೂ, ಶಿವಸೇನೆಯ ಬೆಂಬಲವನ್ನು ಪಡೆಯಲು ಶರದ್ ಪವಾರ್ ಮೂಲಕ ಪ್ರಯತ್ನಿಸುವ ಕೆಲಸವನ್ನು ಯುಪಿಎ ಮತ್ತೆ ಮಾಡಬಹುದು. ಎಲ್ಲರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಶರದ್ ಪವಾರ್, ಎನ್ಸಿಪಿ ಮುಖ್ಯಸ್ಥರಾಗಿದ್ದಾರೆ.
ಹಿರಿಯ ಕಾಂಗ್ರೆಸ್ ಮುಖಂಡ ಶಿಂಧೆ
ಮಹಾರಾಷ್ಟ್ರ ಮೂಲದ ಮತ್ತೋರ್ವ ಹಿರಿಯ ಕಾಂಗ್ರೆಸ್ ಮುಖಂಡ ಸುಶೀಲ್ ಕುಮಾರ್ ಶಿಂಧೆ ಹೆಸರು ಕೂಡಾ, ಕಾಂಗ್ರೆಸ್ ಪಟ್ಟಿಯಲ್ಲಿ ಕೇಳಿಬರುತ್ತಿದೆ. ಮನಮೋಹನ್ ಸಿಂಗ್ ಸರಕಾರದಲ್ಲಿ ಆಯಕಟ್ಟಿನ ಹುದ್ದೆಯಲ್ಲಿದ್ದ ಶಿಂಧೆ, ಯುಪಿಎ ಮೈತ್ರಿಕೂಟದ ಅಭ್ಯರ್ಥಿಯಾದರೂ ಅಚ್ಚರಿಯಿಲ್ಲ.
ಯುಪಿಎ ಅಭ್ಯರ್ಥಿ ತೀವ್ರ ಪೈಪೋಟಿ ನೀಡಲು ಸಾಧ್ಯವಿಲ್ಲ
ಬಿಜೆಪಿ ಅಭ್ಯರ್ಥಿ ರಾಮನಾಥ್ ಕೋವಿಂದ್ ಉತ್ತರಪ್ರದೇಶ ಮೂಲದವರಾಗಿರುವುದು ಮತ್ತು ದಲಿತ ಸಮುದಾಯದವರಾಗಿರುವುದರಿಂದ, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜಪಕ್ಷದ ಮತವೂ ಬಿಜೆಪಿಗೆ ಕಡೆ ವಾಲುವ ಸಾಧ್ಯತೆ ದಟ್ಟವಾಗಿರುವುದರಿಂದ, ಯುಪಿಎ ಅಭ್ಯರ್ಥಿ ತೀವ್ರ ಪೈಪೋಟಿ ನೀಡಲು ಸಾಧ್ಯವೇ ಇಲ್ಲ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.