'ಕಾಶ್ಮೀರವನ್ನು ನೆಹರೂ ಬದಲು ಪಟೇಲ್ ನಿರ್ವಹಿಸಿದ್ದರೆ ಇತಿಹಾಸ ಬದಲಾಗುತ್ತಿತ್ತು!'
ಗುವಾಹಟಿ, ಜೂನ್ 27: "ಜಮ್ಮು ಮತ್ತು ಕಾಶ್ಮೀರವನ್ನು ಸರ್ದಾರ್ ವಲ್ಲಭಬಾಯಿ ಪಟೇಲ್ ಸ್ವತಂತ್ರವಾಗಿ ನಿರ್ವಹಿಸಲು ನೆಹರು ಅವರು ಬಿಟ್ಟಿದ್ದರೆ ಭಾರತದ ಇತಿಹಾಸ ಬದಲಾಗುತ್ತಿತ್ತು' ಎಂದು ಬಿಜೆಪಿ ಮುಖಂಡ ಜಿತೇಂದ್ರ ಸಿಂಗ್ ಹೇಳಿದ್ದಾರೆ.
'ಹೈದರಾಬಾದಿನ ಬದಲಾಗಿ ಪಾಕಿಸ್ತಾನಕ್ಕೆ ಕಾಶ್ಮೀರವನ್ನು ನೀಡಲು ಪಟೇಲ್ ಸಿದ್ಧವಿದ್ದರು' ಎಂದಿದ್ದ ಕಾಂಗ್ರೆಸ್ ಮುಖಂಡ ಸೈಫುದ್ದಿನ್ ಸೋಜ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಜಿತೇಂದ್ರ ಸಿಂಗ್ ಈ ರೀತಿ ಹೇಳಿದ್ದಾರೆ.
'ಕಾಶ್ಮೀರವನ್ನು ಪಾಕಿಸ್ತಾನಕ್ಕೆ ನೀಡಲು ಹೊರಟಿದ್ದರು ಪಟೇಲ್'
ಅಸ್ಸಾಂನ ಗುವಾಹಟಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, 'ಇತಿಹಾಸದ ಸತ್ಯಗಳು ನಾವಂದುಕೊಂದಿದ್ದಕ್ಕಿಂತ ವಿರುದ್ಧವಾಗಿದೆ' ಎಂದು ಎಂದರು.
"ಪ್ರಧಾನಿ ನೆಹರು ಅವರ ಸಂಪುಟದಲ್ಲಿ ಗೃಹ ಸಚಿವರಾಗಿದ್ದ ಪಟೇಲ್ ಅವರಿಗೆ ದೇಶದ ಉಳಿದೆಲ್ಲ ರಾಜ್ಯಗಳನ್ನು ನೋಡಿಕೊಳ್ಳಲು ನೀಡಿದಷ್ಟೇ ಸ್ವಾತಂತ್ರ್ಯವನ್ನು, ಜಮ್ಮು-ಕಾಶ್ಮೀರದ ವಿಷಯದಲ್ಲೂ ನೀಡಿದ್ದರೆ ಭಾರತ ಉಪಖಂಡದ ಇತಿಹಾಸವೇ ಬದಲಾಗುತ್ತಿತ್ತು" ಎಂದು ಅವರು ಹೇಳಿದ್ದಾರೆ.
"ಪಾಕಿಸ್ತಾನ ಈಗಾಗಲೇ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಜಮ್ಮು ಕಾಶ್ಮೀರದ ಭಾಗವೂ ಭಾರತದ ಅವಿಭಾಜ್ಯ ಅಂಗವಾಗಿರುತ್ತಿತ್ತು. ಆದರೆ ನೆಹರು ಅವರು ಅಂದುಕೊಂಡಿದ್ದರು, ಕಾಶ್ಮೀರದ ವಿಷಯದಲ್ಲಿ ಯಾರಿಗೂ ಇಲ್ಲದಷ್ಟು ಜ್ಞಾನ ತಮಗಿದೆ ಎಂದು! ಅದಕ್ಕೆಂದೇ ಅವರು ಪಟೇಲ್ ಅವರು ಜಮ್ಮು-ಕಾಶ್ಮೀರದ ವಿಷಯದಲ್ಲಿ ತಲೆಹಾಕಲು ಬಿಡಲಿಲ್ಲ" ಎಂದು ಅವರು ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ಮುಖಂಡ ಸೈಫುದ್ದಿನ್ ಸೋಜ್ ಅವರ 'Kashmir: Glimpses of History and the Story of Struggle ಎಂಬ ಪುಸ್ತಕ ಬಿಡುಗಡೆಯ ಸಮಯದಲ್ಲಿ, ಸೋಜ್ ನೀಡಿದ ವಿವಾದಾತ್ಮಕ ಹೇಳಿಕೆಯ ಕುರಿತು ಸಿಂಗ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.