ಪಿಒಕೆ ಮರಳಿ ಪಡೆಯಲು ಭಾರತೀಯ ಸೇನೆ ಸಿದ್ಧ: ಸೇನಾ ಕಮಾಂಡರ್
ಶ್ರೀನಗರ, ನವೆಂಬರ್ 22: ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಕುರಿತು ಉತ್ತರ ಕಮಾಂಡಿಂಗ್ ಇನ್-ಚೀಫ್, ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಮಹತ್ವದ ಹೇಳಿಕೆ ನೀಡಿದ್ದಾರೆ.
ಉಪೇಂದ್ರ ದ್ವಿವೇದಿ ಅವರು "ಭಾರತ ಸರ್ಕಾರವು ಆದೇಶಿಸಿದಾಗ ಪಿಒಕೆ ಮೇಲೆ ದಾಳಿ ಮಾಡಿ ಮರಳಿ ಭಾರತದ ವಶ ಮಾಡಿಕೊಳ್ಳಲು ಸೇನೆಯು ಸಿದ್ಧವಾಗಿದೆ. ಪಿಒಕೆ ವಿಷಯದ ಬಗ್ಗೆ ಸಂಸತ್ತಿನಲ್ಲಿ ನಿರ್ಣಯವನ್ನು ಅಂಗೀಕರಿಸಲಾಗಿದೆ'' ಎಂದು ಅವರು ಹೇಳಿದ್ದಾರೆ.
ಸರ್ಕಾರದ ಪ್ರತಿಯೊಂದು ಆದೇಶಕ್ಕೂ ಭಾರತೀಯ ಸೇನೆ ಸಂಪೂರ್ಣ ಸನ್ನದ್ಧವಾಗಿದೆ. ಸರ್ಕಾರ ಆದೇಶ ನೀಡಿದಾಗಲೆಲ್ಲ ಸೇನೆ ಸಂಪೂರ್ಣ ಸಿದ್ಧತೆಯೊಂದಿಗೆ ಮುನ್ನಡೆಯಲಿದೆ. ಭಾರತದೊಳಗೆ ನುಸುಳಲು ಪಾಕಿಸ್ತಾನದ ಲಾಂಚ್ಪ್ಯಾಡ್ಗಳಲ್ಲಿ ಸುಮಾರು 160 ಭಯೋತ್ಪಾದಕರು ಸಕ್ರಿಯರಾಗಿದ್ದಾರೆ. ಆದರೆ ನಾವು ಅವರ ಯೋಜನೆಗಳನ್ನು ಯಶಸ್ವಿಯಾಗಲು ಬಿಡುವುದಿಲ್ಲ ಎಂದು ಅವರು ಮಾಹಿತಿ ನೀಡಿದರು.
ಲಾಂಚ್ಪ್ಯಾಡ್ನಲ್ಲಿ ಸುಮಾರು 160 ಉಗ್ರರು ಅಡಗಿ ಕುಳಿತಿದ್ದಾರೆ. ಪಿರ್ ಪಂಜಾಲ್ನ ಉತ್ತರದಲ್ಲಿ 130 ಮತ್ತು ಪೀರ್ ಪಂಜಾಲ್ನ ದಕ್ಷಿಣದಲ್ಲಿ 30 ಭಯೋತ್ಪಾದಕರು ಇದ್ದಾರೆ. ಇಡೀ ಒಳನಾಡಿನಲ್ಲಿ ಒಟ್ಟು 82 ಪಾಕಿಸ್ತಾನಿ ಭಯೋತ್ಪಾದಕರು ಮತ್ತು 53 ಸ್ಥಳೀಯ ಭಯೋತ್ಪಾದಕರು ಅಡಗಿಕೊಂಡಿದ್ದಾರೆ. ಇದಲ್ಲದೇ ಪಾಕಿಸ್ತಾನ ನಿರಂತರವಾಗಿ ಡ್ರಗ್ಸ್ ಕಳುಹಿಸಲು ಯತ್ನಿಸುತ್ತಿದೆ. ಇತ್ತೀಚೆಗೆ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದೇವೆ. ನಾವು ಗಡಿಯಲ್ಲಿ ಕೊಲ್ಲುತ್ತಿರುವ ಭಯೋತ್ಪಾದಕರನ್ನೂ, ನೀವು ಕಳ್ಳಸಾಗಾಣಿಕೆದಾರರನ್ನು ಕೊಲ್ಲುತ್ತಿದ್ದೀರಿ ಎಂದು ಈ ಜನರು ಹೇಳುತ್ತಾರೆ. ಪಾಕಿಸ್ತಾನ ಪ್ರತಿದಿನ ಡ್ರಗ್ಸ್ ಕಳುಹಿಸುವ ಪ್ರಯತ್ನ ಮಾಡುತ್ತಿರುವುದು ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.
"ದೇಶವು 25 ವರ್ಷಕ್ಕಿಂತ ಕಡಿಮೆ ವಯಸ್ಸಿನ 50 ಪ್ರತಿಶತದಷ್ಟು ಜನರನ್ನು ಹೊಂದಿದೆ. ನಾವು ಅವರನ್ನು ಅಗ್ನಿವೀರ್ಗಳಾಗಿ ಸ್ವೀಕರಿಸಿದರೆ, ಅವರಿಗೆ ಯುದ್ಧ ಕೌಶಲ ಕಲಿಸಿ ಅವರನ್ನು ಮರಳಿ ಕಳುಹಿಸುತ್ತೇವೆ. ನಾವು ಕೆಲವರನ್ನು ಅರೆಸೈನಿಕ ಮತ್ತು ಪೊಲೀಸ್ ಪಡೆಗಳಾಗಿ ನೇಮಿಸಿಕೊಳ್ಳುತ್ತೇವೆ. ಇಲ್ಲಿ ಉಳಿದವರು ಸ್ವಯಂ ಉದ್ಯೋಗಿಗಳಾಗುತ್ತಾರೆ ಎಂದು ಅವರು ಹೇಳಿದರು.