ಪಾಕ್ ವಾಯುಪ್ರದೇಶ ಬಳಕೆಗೆ ಅನುಮತಿ ಕೋರಿದ ಭಾರತ
ನವದೆಹಲಿ, ನವೆಂಬರ್ 04: ಶ್ರೀನಗರದಿಂದ ಶಾರ್ಜಾಕ್ಕೆ ತೆರಳಲು ಪಾಕಿಸ್ತಾನದ ವಾಯು ಪ್ರದೇಶ ಬಳಸಲು ಅನುಮತಿ ನೀಡುವಂತೆ ಭಾರತ ಕೇಳಿದೆ.
ಶ್ರೀನಗರ-ಶಾರ್ಜಾ ನಡುವಿನ ವಿಮಾನ ಮಾರ್ಗದ ಸಾಮಾನ್ಯ ಪ್ರಯಾಣಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರ ಮನವಿ ಮಾಡಿದೆ.
ಶ್ರೀನಗರ-ಶಾರ್ಜಾ ವಿಮಾನ ಹಾರಾಟ: ತಮ್ಮ ವಾಯುನೆಲೆ ಬಳಕೆಗೆ ಪಾಕ್ ನಿರಾಕರಣೆ
ಗೋ ಫರ್ಸ್ಟ್ ವಿಮಾನಯಾನ ಸಂಸ್ಥೆಯ ಸಂಸ್ಥೆಯ ಶ್ರೀನಗರ-ಶಾರ್ಜಾ ನಡುವಿನ ವಿಮಾನವು ತನ್ನ ವಾಯುಪ್ರದೇಶವನ್ನು ಬಳಸಲು ಪಾಕಿಸ್ತಾನವು ಮಂಗಳವಾರ ಅನುಮತಿ ನಿರಾಕರಿಸಿತ್ತು.
ತಮ್ಮ ವಾಯು ಪ್ರದೇಶ ಮಾರ್ಗವಾಗಿ ಶ್ರೀನಗರ ಹಾಗೂ ಶಾರ್ಜಾ ನಡುವೆ ವಿಮಾನ ಹಾರಾಟ ನಡೆಸಲು ಪಾಕಿಸ್ತಾನ ನಿರಾಕರಿಸಿದೆ. ಹೀಗಾಗಿ ಶ್ರೀನಗರ-ಶಾರ್ಜಾ ವಿಮಾನ ಪ್ರಯಾಣ ದರ ಹಾಗೂ ಸಮಯ ಎರಡೂ ಹೆಚ್ಚಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ವಿಮಾನವು ಈಗ ಶ್ರೀನಗರದಿಂದ ಉದಯಪುರ, ಅಹಮದಾಬಾದ್ ಹಾಗೂ ಓಮನ್ ಮಾರ್ಗವಾಗಿ ಶಾರ್ಜಾ ತಲುಪಬೇಕಾಗಿರುವುದರಿಂದ ಶಾರ್ಜಾ ಪ್ರಯಾಣ ಅವಧಿ ಒಂದು ಗಂಟೆಗಿಂತಲೂ ಅಧಿಕವಾಗಲಿದೆ. ಜತೆ ಜತೆಗೆ ವಿಮಾನ ದರವೂ ದುಬಾರಿಯಾಗಲಿದೆ.
ಶ್ರೀನಗರ ಹಾಗೂ ಯುಎಇ ನಡುವಿನ ನೇರ ವಿಮಾನ ಹಾರಾಟವು 11 ವರ್ಷಗಳ ನಂತರ ಪುನರಾರಂಭಗೊಂಡಿದೆ. ಅಕ್ಟೋಬರ್ 23ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ರೀನಗರ-ಶಾರ್ಜಾ ವಿಮಾನ ಯಾನಕ್ಕೆ ಶೇಖ್ ಉಲ್ ಆಲಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಾಲನೆ ನೀಡಿದ್ದರು.
ವಿಮಾನ ಉದ್ಘಾಟನೆಯ ಬೆನ್ನಲ್ಲೇ ಒಮರ್ ಅಬ್ದುಲ್ಲಾ ಪಾಕಿಸ್ತಾನವು ತನ್ನ ವಾಯು ವಲಯ ಬಳಕೆಗೆ ಅವಕಾಶ ನೀಡಿದೆಯೇ ಎಂದು ಪ್ರಶ್ನಸಿದ್ದರು. ಪ್ರಸ್ತುತ ಗೋ ಏರ್ ವಿಮಾನಯಾನ ಸಂಸ್ಥೆಯು ಶ್ರೀನಗರದಿಂದ ಶಾರ್ಜಾಗೆ ವಾರದಲ್ಲಿ ನಾಲ್ಕು ವಿಮಾನಗಳ ಹಾರಾಟ ಕಾರ್ಯಾಚರಣೆಗೆ ಸಜ್ಜಾಗಿದೆ.
ಪಾಕಿಸ್ತಾನದ ಈ ನಡೆ ದುರಸೃಷ್ಟಕರ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ. 2009-2010ರಲ್ಲೂ ಪಾಕಿಸ್ತಾನವು ಶ್ರೀನಗರ-ದುಬೈ ನಡುವಿನ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಸಂಚಾರಕ್ಕೆ ಇದೇ ರೀತಿ ಮಾಡಿತ್ತು. ಆದರೆ ಗೋ ಫಾಸ್ಟ್ ವಿಮಾನವನ್ನು ಪಾಕಿಸ್ತಾನದ ವಾಯುನೆಲೆಯಲ್ಲಿ ಹಾರಾಟ ನಡೆಸಲು ಅನುಮತಿಸುವ ವಿಶ್ವಾಸವಿತ್ತು, ಆದರೆ ಅದು ಆಗಿಲ್ಲ ಎಂದು ಬರೆದುಕೊಂಡಿದ್ದಾರೆ.
ಪಾಕಿಸ್ತಾನವು ತನ್ನ ವಾಯುಪ್ರದೇಶದ ಮೂಲಕ ವಿಮಾನಗಳನ್ನು ಹಾದುಹೋಗಲು ನಿರಾಕರಿಸುವ ಮೂಲಕ ಅಂತರರಾಷ್ಟ್ರೀಯ ವಿಮಾನಯಾನ ನಿಯಮಗಳನ್ನು ನೇರವಾಗಿ ಉಲ್ಲಂಘಿಸಿದೆ.
ಶ್ರೀನಗರದಿಂದ ಶಾರ್ಜಾಕ್ಕೆ ಆರಂಭವಾದ ಈ ವಿಮಾನ ಸೇವೆಯ ಹೆಚ್ಚಿನ ಪ್ರಯೋಜನವನ್ನು ಕಾಶ್ಮೀರದ ಜನರು ಪಡೆಯುತ್ತಿದ್ದರು ಎಂಬುದು ಗಮನಿಸಬೇಕಾದ ಸಂಗತಿ. ಪಾಕಿಸ್ತಾನದ ನಿರಾಕರಣೆ ನಂತರ, ಶಾರ್ಜಾಕ್ಕೆ ಹೋಗುವ ವಿಮಾನಗಳು ಉದಯಪುರ, ಅಹಮದಾಬಾದ್ ಮತ್ತು ಓಮನ್ ಮೂಲಕ ಹೋಗುತ್ತವೆ. ಇದರಿಂದ ವಿಮಾನ ಪ್ರಯಾಣದ ಸಮಯ ಹೆಚ್ಚಾಗಲಿದೆ.
ಭಾರತ, ಪಾಕಿಸ್ತಾನ, ನೈಜೀರಿಯ, ನೇಪಾಳ, ಉಗಾಂಡ, ಶ್ರೀಲಂಕಾ ಮತ್ತಿತರ ದೇಶಗಳ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಹೇರಲಾಗಿದ್ದ ನಿಷೇಧವನ್ನು ಯುಎಇ ಹಿಂಪಡೆದಿದೆ. ಹಲವು ರಾಷ್ಟ್ರಗಳಿಗೆ ಸಂಪರ್ಕ ಕಲ್ಪಿಸುವ ಯುಎಇಯಲ್ಲಿ ಕೆಲವು ದೇಶಗಳ ವಿಮಾನಗಳ ಸಂಚಾರಕ್ಕೆ ನಿಷೇಧ ಹೇರಿದ್ದರಿಂದ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಗಳಾಗಿತ್ತು. ಬಹುತೇಕ ಎಲ್ಲ ದಕ್ಷಿಣ ಏಷ್ಯಾದ ದೇಶಗಳು ಹಾಗೂ ಆಫ್ರಿಕನ್ ದೇಶಗಳಿಗೆ ಯುಎಇಯಲ್ಲಿ ನಿಷೇಧ ಹೇರಲಾಗಿತ್ತು.
ಕೊರೊನಾ ಪ್ರಕರಣ ಮತ್ತು ರೂಪಾಂತರಿ ಕೇಸುಗಳು ಹೆಚ್ಚಾಗಿರುವ ದೇಶಗಳನ್ನು ಸೌದಿ ಅರೇಬಿಯಾ ರೆಡ್ ಪಟ್ಟಿಗೆ ಸೇರಿಸಿತ್ತು. ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ಅರ್ಜೆಂಟಿನಾ, ಬ್ರೆಜಿಲ್, ಈಜಿಪ್ಟ್, ಇಂಡೋನೇಷ್ಯಾ, ಲೆಬನಾನ್, ದಕ್ಷಿಣ ಆಫ್ರಿಕಾ, ಟರ್ಕಿ, ವಿಯೆಟ್ನಾಂ ಮತ್ತು ಯುಎಇ ರಾಷ್ಟ್ರಗಳಿಗೆ ಪ್ರಯಾಣಿಸುವ ಸೌದಿ ಪ್ರಜೆಗಳು 3 ವರ್ಷಗಳ ಕಾಲ ಪ್ರಯಾಣ ನಿಷೇಧ ಎದುರಿಸಬೇಕಾದೀತು.
ಈಗಾಗಲೇ ರೆಡ್ ಜೋನ್ನಲ್ಲಿರುವ ದೇಶಗಳಿಗೆ ತನ್ನ ದೇಶದ ಪ್ರಜೆಗಳು ಪ್ರಯಾಣ ಮಾಡಬಾರದೆಂದು ಸೌದಿ ಅರೇಬಿಯಾ ಆದೇಶ ನೀಡಿದೆ. ರೆಡ್ ಪಟ್ಟಿಯಲ್ಲಿರುವ ದೇಶಗಳಿಗೆ ಪ್ರಯಾಣ ಮಾಡಿದರೆ 3 ವರ್ಷಗಳ ಕಾಲ ಪ್ರಯಾಣಕ್ಕೆ ನಿಷೇಧ ಹೇರುವುದಾಗಿ ಎಚ್ಚರಿಕೆ ನೀಡಿದೆ.
ಅಲ್ಲದೆ, ರೆಡ್ ಪಟ್ಟಿಯಲ್ಲಿರುವ ದೇಶಗಳಿಗೆ ತೆರಳಿ ವಾಪಾಸಾಗುವ ತನ್ನ ದೇಶದ ಪ್ರಜೆಗಳು ದುಬಾರಿ ದಂಡ ಕಟ್ಟಬೇಕೆಂದು ಕೂಡ ಹೊಸ ಆದೇಶ ಹೊರಡಿಸಿದೆ. ಸೌದಿ ಅರೇಬಿಯಾದ ರೆಡ್ ಪಟ್ಟಿಯಲ್ಲಿರುವ ದೇಶಗಳಲ್ಲಿ ಭಾರತ ಕೂಡ ಇದೆ, ಹೀಗಾಗಿ, ಸೌದಿ ಅರೇಬಿಯಾದವರು ಭಾರತಕ್ಕೆ ಬಂದರೆ ಮೂರು ವರ್ಷಗಳ ಕಾಲ ಪ್ರಯಾಣಕ್ಕೆ ನಿಷೇಧ ಹೇರಲಾಗುತ್ತದೆ ಎಂದು ಹೇಳಿತ್ತು.