ಭಾರತದ ಕಡಲಿನ ಗಡಿಯಲ್ಲಿ ಹೈ ಅಲರ್ಟ್ : ಲಷ್ಕರ್ ದಾಳಿ ಶಂಕೆ
ನವದೆಹಲಿ, ಅಕ್ಟೋಬರ್ 12: ಕಳೆದ ಮೂರು ತಿಂಗಳುಗಳಲ್ಲಿ ಎರಡನೇ ಬಾರಿಗೆ ಗುಪ್ತಚರ ಇಲಾಖೆಯಿಂದ ಮತ್ತೊಮ್ಮೆ ಉಗ್ರರ ದಾಳಿಯ ಬಗ್ಗೆ ಮುನ್ಸೂಚನೆ ಸಿಕ್ಕಿದೆ. ಭಾರತದ ಜಲಗಡಿಯಲ್ಲಿ ಈಗ ಹೈ ಅಲರ್ಟ್ ಘೋಷಿಸಲಾಗಿದೆ.
ಪಾಕಿಸ್ತಾನದ ಲಷ್ಕರ್ ಇ ತೋಯ್ಬಾ ಉಗ್ರರ ಕಣ್ಣು ಈಗ ಭಾರತದ ಜಲಗಡಿ ಮೇಲೆ ಬಿದ್ದಿದೆ. ತೈಲ ಟ್ಯಾಂಕರ್ಗಳು ಮತ್ತು ವಾಣಿಜ್ಯ ಹಡಗುಗಳನ್ನು ಹೈಜಾಕ್ ಮಾಡುವುದು, ಗಡಿಯೊಳಗೆ ನುಸುಳುವುದು ಭಾರತದ ಬಂದರುಗಳ ಮೇಲೆ ದಾಳಿ ನಡೆಸುವುದು ಮುಂತಾದ ಯೋಜನೆಯೊಂದಿಗೆ ಕಳೆದ ಕೆಲ ತಿಂಗಳುಗಳಿಂದ ಲಷ್ಕರ್ ಉಗ್ರರ ಗುಂಪೊಂದು ತರಬೇತಿ ಪಡೆಯುತ್ತಿರುವ ಆಘಾತಕಾರಿ ಸುದ್ದಿ ಸಿಕ್ಕಿದೆ.
ಅದರಲ್ಲೂ ಸಮುದ್ರದಲ್ಲಿ ವೇಗವಾಗಿ ಈಜುವುದು, ಆಳಸಮುದ್ರದಲ್ಲಿ ಡೈವಿಂಗ್ ಮಾಡುವುದನ್ನು ವಿಶೇಷವಾಗಿ ಕಲಿಯುತ್ತಿದ್ದಾರೆ. ಶೇಖ್ಪುರ, ಲಾಹೋರ್, ಫೈಸಲಾಬಾದ್ಗಳಲ್ಲಿ ಅವರಿಗೆ ತರಬೇತಿ ನೀಡಲಾಗುತ್ತಿದೆ.

ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ಸಹ ಸಮುದ್ರದಲ್ಲಿ ದಾಳಿ ನಡೆಸಲು ಅಗತ್ಯವಿರುವ ನೆರವು ನೀಡಲು ಲಷ್ಕರ್ ಜೊತೆ ಕೈಜೋಡಿಸಿದೆ. ಭಯೋತ್ಪಾದಕ ಚಟುವಟಕೆಗಳ ಮೇಲೆ ನಿಗಾವಹಿಸಿರುವ ಗುಪ್ತಚರ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಭಾರತೀಯ ಗಡಿ ಭಾಗದ ಲೀಪಾ ಕಣಿವೆಯ ದುದ್ನಿಹಾಲ್, ಕೇಲ್ ಭಾಗದಲ್ಲಿ ಹೆಚ್ಚಿನ ನಿಗಾವಹಿಸಲಾಗಿದೆ. ನೌಕಾಪಡೆ ಮತ್ತು ಕರಾವಳಿ ರಕ್ಷಣ ಪಡೆ ಸಮುದ್ರದಲ್ಲಿ ಕಟ್ಟೆಚ್ಚರ ವಹಿಸಿವೆ. ಸುಮಾರು 7,517 ಕಿ.ಮೀ. ಉದ್ದದ ಕರಾವಳಿಯನ್ನು ರಕ್ಷಿಸಲು ಯೋಜನೆ ರೂಪಿಸಲಾಗಿದೆ.
2008ರ ನವೆಂಬರ್ 26ರಂದು ಉಗ್ರರು ಸಮುದ್ರ ಮಾರ್ಗದ ಮೂಲಕ ಮುಂಬೈಯನ್ನು ಪ್ರವೇಶಿಸಿ ವಿಧ್ವಂಸಕ ಕೃತ್ಯ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications