Heatwave: ಮೇಗೂ ಮುನ್ನವೇ ಭಾರತದಲ್ಲಿ ಬಿರು ಬಿಸಿಲು: ದೇಶದಾದ್ಯಂತ ತಾಪಮಾನ ಏರಿಕೆ
Heatwave: ಭಾರತದಲ್ಲಿ ಏಪ್ರಿಲ್ ತಿಂಗಳ ಕೊನೆಯ ವಾರ ಸಾಗುತ್ತಿದ್ದಂತೆ ಬಿಸಿಲಿನ ತಾಪಮಾನ ದಿನೇದಿನೇ ಹೆಚ್ಚಾಗುತ್ತಿದೆ. ಮೇ ತಿಂಗಳು ಆರಂಭವಾಗುವುದಕ್ಕೂ ಮುನ್ನವೇ ತಾಪಮಾನ ಭಾರೀ ಏರಿಕೆಯಾಗಿದ್ದು, ದೇಶದಾದ್ಯಂತ ಉಷ್ಣತೆಯ ಅಲೆ ತೀವ್ರಗೊಳ್ಳುತ್ತಿದೆ ಇದರಿಂದ ದೇಹದಲ್ಲಿ ನೀರಿನಾಂಶ ಕಡಿಮೆಯಾಗುವ ಸಾಧ್ಯತೆ ಕೂಡ ಹೆಚ್ಚಾಗುತ್ತಲೆ ಇದೆ. ಭಾರತ ಪ್ರಪಂಚದಲ್ಲೇ ಅತಿ ಹೆಚ್ಚು ಬಿಸಿಯಾಗಿರುವ ದೇಶಗಳ ಪಟ್ಟಿಯಲ್ಲಿ ಮುಂಚೂಣಿಗೆ ಇದೆ.
AQI.in ನೀಡಿರುವ ರಿಯಲ್ಟೈಮ್ ಹವಾಮಾನ ಮಾಹಿತಿ ಪ್ರಕಾರ, ವಿಶ್ವದ ಅತಿ ಬಿಸಿ ಪ್ರದೇಶಗಳ ಟಾಪ್ 100 ಪಟ್ಟಿಯಲ್ಲಿ ಸುಮಾರು 96 ಭಾರತೀಯ ನಗರಗಳು ಸ್ಥಾನ ಪಡೆದಿವೆ. ಇದು ಭಾರತದಲ್ಲಿ ಸದ್ಯ ಇರುವ ಬಿಸಿಲ ತೀವ್ರತೆ ಮತ್ತು ಉಷ್ಣ ಅಲೆಯ (Heat Wave) ಗಂಭೀರತೆಯನ್ನು ತೋರಿಸುತ್ತದೆ.

ಈ ಪಟ್ಟಿಯಲ್ಲಿ ಮಧ್ಯಪ್ರದೇಶದ ಒರ್ಚಾ (Orchha) ನಗರವು ಮೊದಲ ಸ್ಥಾನದಲ್ಲಿದ್ದು, ಏಪ್ರಿಲ್ 27ರಂದು ಬೆಳಿಗ್ಗೆ 9:40ರ ವೇಳೆಗೆ 41°C ಗರಿಷ್ಠ ತಾಪಮಾನ ದಾಖಲಿಸಿದೆ. ಇದರ ಬೆನ್ನಲ್ಲೇ ಉತ್ತರ ಪ್ರದೇಶದ ಝಾನ್ಸಿ ಮತ್ತು ಒಡಿಶಾದ ಬಾಲಾಂಗಿರ್ ನಗರಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.
ಅತ್ಯಂತ ಗಮನಾರ್ಹ ವಿಷಯವೆಂದರೆ, ವಿಶ್ವದ ಅತಿ ತಾಪಮಾನ ಹೊಂದಿರುವ ನಗರಗಳ ಪಟ್ಟಿಯಲ್ಲಿ ಬಹುತೇಕ ಸ್ಥಾನಗಳನ್ನು ಭಾರತೀಯ ನಗರಗಳೇ ಆಗಿವೆ. ದೇಶದ ಅನೇಕ ಪ್ರದೇಶಗಳಲ್ಲಿ ತಾಪಮಾನವು 38 ಡಿಗ್ರಿ ಸೆಲ್ಸಿಯಸ್ನಿಂದ 40 ಡಿಗ್ರಿ ಸೆಲ್ಸಿಯಸ್ ದಾಟುತ್ತಿದ್ದು, ಉಷ್ಣ ಅಲೆಯ ನಿರಂತರವಾಗಿ ಮುಂದುವರಿಯುತ್ತಿದೆ. ತಾಪಮಾನದ ಈ ತಿವ್ರ ಏರಿಕೆಯು ಸಾರ್ವಜನಿಕರ ದೈನಂದಿನ ಜೀವನದ ಮೇಲೆ ಭಾರಿ ಪರಿಣಾಮ ಬೀರಿದೆ.
ಈ ತೀವ್ರ ಬಿಸಿಲು ಕೇವಲ ಸೆಕೆ ಅಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ಗಂಭೀರ ಸವಾಲಾಗಿ ಪರಿಣಮಿಸುತ್ತದೆ. ದೀರ್ಘಕಾಲ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ದೇಹದಲ್ಲಿ ನೀರಿನ ಕೊರತೆ, ಹೀಟ್ ಎಕ್ಸಾಸ್ಷನ್ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಅದರಲ್ಲೂ ವಿಶೇಷವಾಗಿ ಜನನಿಬಿಡ ಪ್ರದೇಶಗಳಲ್ಲಿ ಮತ್ತು ವಯೋವೃದ್ದರು ಹಾಗೂ ಮಕ್ಕಳಲ್ಲಿ ಈ ಅಪಾಯದ ತೀವ್ರತೆ ಹೆಚ್ಚಾಗಿರುತ್ತದೆ.
ಮುಂದಿನ ದಿನಗಳಲ್ಲಿ ತಾಪಮಾನವು ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳವುದು ಅತ್ಯಗತ್ಯ. ನಿರ್ಜಲೀಕರಣ ತಡೆಯಲು ಸಾಕಷ್ಟು ನೀರು ಕುಡಿಯುವುದು, ಮಧ್ಯಾಹ್ನದ ಹೊತ್ತಿನಲ್ಲಿ ಹೊರಗೆ ಹೋಗುವುದನ್ನು ತಪ್ಪಿಸುವುದು ಮತ್ತು ಆರೋಗ್ಯದ ಕಡೆ ಗಮನ ಹರಿಸುವುದು ಅನಿವಾರ್ಯವಾಗಿದೆ.
ಇದೇ ಸಂದರ್ಭದಲ್ಲಿ, ಹವಾಮಾನ ತಜ್ಞರು ಮುಂದಿನ ಕೆಲವು ವಾರಗಳಲ್ಲಿ ತಾಪಮಾನ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ. ಕೆಲವು ಪ್ರದೇಶಗಳಲ್ಲಿ ಉಷ್ಣ ಅಲೆಯ ಪರಿಸ್ಥಿತಿ ತೀವ್ರವಾಗಬಹುದು. ವಿಶೇಷವಾಗಿ ವಯೋವೃದ್ಧರು, ಮಕ್ಕಳು ಹಾಗೂ ಹೊರಾಂಗಣದಲ್ಲಿ ಕೆಲಸ ಮಾಡುವವರು ಹೆಚ್ಚು ಜಾಗರೂಕರಾಗಿರಬೇಕು ಎಂದು ಸಲಹೆ ನೀಡಲಾಗಿದೆ.
ಸರ್ಕಾರವೂ ಸಾರ್ವಜನಿಕರ ಸುರಕ್ಷತೆಗೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ತುರ್ತು ಆರೋಗ್ಯ ಸೇವೆಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಜನರು ಸಡಿಲವಾದ ಬಟ್ಟೆಗಳನ್ನು ಧರಿಸುವುದು, ತಂಪಾದ ಆಹಾರ ಸೇವಿಸುವುದು ಮತ್ತು ಅಗತ್ಯವಿದ್ದಾಗ ಮಾತ್ರ ಹೊರಗೆ ತೆರಳುವುದು ಉತ್ತಮ. ತಾಪಮಾನ ಏರಿಕೆಯನ್ನು ಲೆಕ್ಕಿಸದೇ ನಿರ್ಲಕ್ಷ್ಯ ತೋರಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು.














Click it and Unblock the Notifications