ಆಂತರಿಕ ಬಿಕ್ಕಟ್ಟುಗಳ ನಡುವೆಯೂ ವಿಶ್ವದ ಅಗತ್ಯವನ್ನು ಭಾರತ ಪೂರೈಸಿದೆ; ಮೋದಿ
ನವದೆಹಲಿ, ಮಾರ್ಚ್ 16: ಕೊರೊನಾ ಸೋಂಕಿನ ಸಮಯದಲ್ಲಿ ಭಾರತ ತನ್ನ ಆಂತರಿಕ ಬಿಕ್ಕಟ್ಟುಗಳ ನಡುವೆಯೂ ವಿಶ್ವದ ಅಗತ್ಯಗಳನ್ನು ಪೂರೈಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಂಗಳವಾರ ಭಾರತ- ಫಿನ್ಲ್ಯಾಂಡ್ ನಡುವಿನ ಶೃಂಗಸಭೆಯಲ್ಲಿ ಮಾತನಾಡಿದ ಮೋದಿ, "ಕೊರೊನಾ ಸೋಂಕಿನ ನಿವಾರಣೆ ವಿಷಯದಲ್ಲಿ ಭಾರತ ಮುಂದಾಳತ್ವ ವಹಿಸಿದೆ. ಇದುವರೆಗೂ 70 ದೇಶಗಳಿಗೆ ಸುಮಾರು 58 ಮಿಲಿಯನ್ ಮೇಡ್ ಇನ್ ಇಂಡಿಯಾ ಕೊರೊನಾ ಲಸಿಕೆಗಳನ್ನು ಪೂರೈಸಿದೆ" ಎಂದು ತಿಳಿಸಿದರು.
ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಳ: ಮುಖ್ಯಮಂತ್ರಿಗಳ ಜತೆ ಪ್ರಧಾನಿ ಮೋದಿ ಸಭೆ
ಭಾರತ ಹಾಗೂ ಫಿನ್ಲ್ಯಾಂಡ್ ಈ ಎರಡು ದೇಶಗಳೂ ಪಾರದರ್ಶಕ ಆಳ್ವಿಕೆ, ಮಾನವೀಯತೆ ಹಾಗೂ ಪ್ರಜಾಪ್ರಭುತ್ವದ ಕ್ರಮವನ್ನು ನಂಬಿವೆ. ತಂತ್ರಜ್ಞಾನ, ಪರಿಸರ, ಶಿಕ್ಷಣದಂಥ ಕ್ಷೇತ್ರಗಳಲ್ಲಿ ಉಭಯ ದೇಶಗಳು ಸಹಕಾರ ಹೊಂದಿವೆ ಎಂದು ತಿಳಿಸಿದರು.
ಇದೇ ಸಂದರ್ಭ, ಅಂತಾರಾಷ್ಟ್ರೀಯ ಸೌರ ಒಕ್ಕೂಟ ಹಾಗೂ ವಿಪತ್ತು ನಿರ್ವಹಣಾ ಮೂಲಸೌಕರ್ಯ (ಸಿಡಿಆರ್ಐ)ಒಕ್ಕೂಟಕ್ಕೆ ಸೇರಲು ಫಿನ್ಲ್ಯಾಂಡ್ಗೆ ಕರೆ ನೀಡಿದರು. ಈ ಎರಡು ಸಂಸ್ಥೆಗಳ ಭಾರತದ ಮುಂದಾಳತ್ವದಲ್ಲಿ ರೂಪುಗೊಂಡಿದ್ದು, ಈ ಅಂತರರಾಷ್ಟ್ರೀಯ ಸಂಸ್ಥೆಗಳು ಫಿನ್ಲ್ಯಾಂಡ್ನ ಸಾಮರ್ಥ್ಯ ಹಾಗೂ ಪರಿಣತಿಯಿಂದ ಪ್ರಯೋಜನ ಪಡೆಯಲಿವೆ ಎಂದು ಹೇಳಿದರು.
ಶಿಕ್ಷಣ, ತಂತ್ರಜ್ಞಾನ ಹಾಗೂ ವ್ಯವಹಾರ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವೆ ಮುಂದಿನ ದಿನಗಳಲ್ಲಿ ಮತ್ತಷ್ಟು ಒಪ್ಪಂದಗಳನ್ನು ಸಾಧ್ಯವಾಗಿಸುವುದಾಗಿ ಫಿನ್ಲ್ಯಾಂಡ್ ಪ್ರಧಾನಿ ಭರವಸೆ ನೀಡಿದರು.