ಸಿಎಎ ಬಳಿಕ ವಲಸಿಗರಲ್ಲಿ ಭಯ: ಬಾಂಗ್ಲಾಕ್ಕೆ ದೌಡು
ಕೊಲ್ಕತ್ತ, ಜನವರಿ 25: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದ ಬಳಿಕ ವಲಸಿಗರಲ್ಲಿ ನಡುಕ ಹುಟ್ಟಿಸಿದೆ ಎನ್ನುವುದು ಖಾತ್ರಿಯಾಗಿದೆ.
ಕಳೆದೊಂದು ತಿಂಗಳಲ್ಲಿ 268ಕ್ಕೂ ಅಧಿಕ ಅಕ್ರಮ ವಲಸಿಗರು ಬಾಂಗ್ಲಾದೇಶಕ್ಕೆ ಮರಳಿದ್ದಾರೆ ಎಂದು ಗಡಿ ಭದ್ರತಾ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ ಬಳಿಕ ಹಿಂದಿನಗಿಂತಲೂ ಒಳನುಸುಳಿರುವವರು ವಾಪಾಸ್ ಹೋಗುವ ಪ್ರಕ್ರಿಯೆ ಆರಂಭವಾಗಿದೆ ಎಂದು ಬಿಎಸ್ಎಫ್ ಹೇಳಿಕೊಂಡಿದೆ.
ಬೆಂಗಳೂರಿನಲ್ಲಿರುವವರೂ ವಾಪಸ್
ಬಿಎಸ್ಎಫ್ ಅಧಿಕಾರಿಗಳ ಮಾಹಿತಿ ಪ್ರಕಾರ ಸಿಎಎಗೆ ಬೆದರಿ ಓಡಿ ಹೋದ ಅಕ್ರಮ ವಲಸಿಗರಲ್ಲಿ ಬಹುತೇಕ ಜನರು ಬೆಂಗಳೂರು ಹಾಗೂ ಉತ್ತರ ಭಾರತದಲ್ಲಿ ನೆಲೆಸಿದ್ದವರಾಗಿದ್ದಾರೆ. ಈ 268 ಮಂದಿ ಭಾರತೀಯ ಸರ್ಕಾರಗಳು ಗಡಿಪಾರು ಮಾಡಿ ಕಳುಹಿಸಿದವರಲ್ಲ. ಅವರಲ್ಲೇ ಕಾಯ್ದೆ ಬಗ್ಗೆ ಭಯ ಆರಂಭವಾಗಿ ಹಿಂದಿರುಗಿದ್ದಾರೆ.
ಸಿಎಎ ವಿರೋಧಿಗಳನ್ನು ಹಣಿಯಲು ಪರವಾಗಿರುವವರಿಗೆ ಇದೊಂದು ಇನ್ನೊಂದು ಅಸ್ತ್ರವಾಗಲಿದೆ.2194 ಮಂದಿ ಬಂಧನ
2019ರಲ್ಲಿ ಭಾರತದೊಳಗೆ ಅಕ್ರಮವಾಗಿ ನುಸುಳಲು ಪ್ರಯತ್ನಿಸುತ್ತಿದ್ದ 2194 ಜನರನ್ನು ತಡೆಹಿಡಿದು ಬಂಧಿಸಲಾಗಿದೆ. ಅಕ್ರಮವಾಗಿ ಭಾರತದೊಳಗೆ ನುಸುಳಲು ಇವರು ಪ್ರಯತ್ನಿಸುತ್ತಿದ್ದು, ಗಡಿಯಲ್ಲೇ ಬಂಧಿಸಿ ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿಕೊಡಲಾಗಿದೆ ಎಂದು ಬಿಎಸ್ಎಫ್ ಮಾಹಿತಿ ನೀಡಿದೆ. ಬಂಧನಕ್ಕೊಳಪಟ್ಟವರಲ್ಲಿ ಬಹುತೇಕ ಜನರು ಭಾರತದಲ್ಲಿ ಸ್ಮಗ್ಲಿಂಗ್ ದಂಧೆ ನಡೆಸಲು ಪ್ರಯತ್ನ ಪಡುತ್ತಿದ್ದರು ಎಂದು ತಿಳಿದುಬಂದಿದೆ. ಅಂದಹಾಗೆ ಪಶ್ಚಿಮ ಬಂಗಾಳವು ಬಾಂಗ್ಲಾದೇಶದೊಂದಿಗೆ 2214.7 ಗಡಿಯನ್ನು ಹೊಂದಿದೆ.
ಗಡಿಯಲ್ಲಿ ಗೋವುಗಳ ಕಳ್ಳಸಾಗಾಣಿಕೆ
ಅಕ್ರಮ ನುಸುಳುಕೋರರು ಹಾಗೂ ಬಾಂಗ್ಲಾ ದೇಶದ ಸ್ಮಗ್ಲರ್ಗಳು ಸೇರಿಕೊಂಡು ಗಡಿಯಲ್ಲಿ ಗೋವುಗಳ ಅಕ್ರಮ ಸಾಗಾಣಿಕೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಬಿಎಸ್ಎಫ್ ನೀಡಿರುವ ಮಾಹಿತಿ ಪ್ರಕಾರ ಈ ರೀತಿ ಕಳ್ಳಸಾಗಣೆಯಾಗುತ್ತಿದ್ದ, 2018ರಲ್ಲಿ 39,995 ಗೋವುಗಳನ್ನು ಸೇನಾ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದರು. ಅದೇ 2019ರಲ್ಲಿ ಈ ಸಂಖ್ಯೆಯು 31,210ಕ್ಕೆ ಇಳಿದಿದೆ. ಈ ವರ್ಷದ ಜನವರಿ ಮೊದಲ ಮಾಹೆಯಲ್ಲಿ 1301 ಗೋವುಗಳನ್ನು ಸೇನೆ ವಶಕ್ಕೆ ಪಡೆದಿದೆ.
ಸಿಎಎ ಕುರಿತು ಆತಂಕ?
ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಲ್ಲಿ ಧಾರ್ಮಿಕ ಕಿರುಕುಳಕ್ಕೊಳಗಾಗಿ ಭಾರತಕ್ಕೆ ವಲಸೆ ಬಂದಿರುವ ಹಿಂದೂ, ಸಿಖ್ , ಜೈನ, ಬೌದ್ಧ, ಪಾರ್ಸಿ ಹಾಗೂ ಕ್ರಿಶ್ಚಿಯನ್ ಧರ್ಮೀಯರಿಗೆ ಭಾರತೀಯ ಪೌರತ್ವ ಕೊಡಲು ನೂತನ ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ. ಆದರೆ ಇವರು ಡಿಸೆಂಬರ್ 31 2014ರೊಳಗಡೆ ಭಾರತಕ್ಕೆ ವಲಸೆ ಬಂದಿರಬೇಕು. ಈ ಪಟ್ಟಿಯಲ್ಲಿ ಮುಸ್ಲಿಮರ ಹೆಸರಿಲ್ಲ.ಹೀಗಾಗಿ ಮುಸ್ಲಿಂ ಅಕ್ರಮ ನುಸುಳುಕೋರರಲ್ಲಿ ಭಯ ಶುರುವಾಗಿದೆ.