Get Updates
Get notified of breaking news, exclusive insights, and must-see stories!

ಮಣಿಪುರದಲ್ಲಿ ಕೃಷಿಯನ್ನು ಬಿಡದ ಜನಾಂಗೀಯ ಸಂಘರ್ಷ! ಹೊಲಗಳಿಗೆ ಹೋಗಲು ನಡುಗುತ್ತಿದ್ದಾರೆ ರೈತರು

ಇಂಪಾಲ್‌, ಜುಲೈ 28: ಮೂರು ತಿಂಗಳಿನಿಂದ ಗಲಭೆಗ್ರಸ್ತವಾಗಿರುವ ಮಣಿಪುರದಲ್ಲಿ ಸದ್ಯ ಪರಿಸ್ಥಿತಿ ಭೀಕರವಾಗಿದೆ. ಎರಡು ಸಮುದಾಯಗಳ ನಡುವಿನ ಸಂಘರ್ಷದಿಂದ ಈಶಾನ್ಯ ರಾಜ್ಯದ ಜನರು ತತ್ತರಿಸಿದ್ದಾರೆ. ಕೇವಲ ಮಣಿಪುರಿಗಳ ಜೀವನದ ಮೇಲೆ ಮಾತ್ರ ನಿತ್ಯ ಗಲಭೆ, ಬಂದೂಕಿನ ಸದ್ದು ಪ್ರಭಾವ ಬೀರಿಲ್ಲ. ಮಣಿಪುರದಲ್ಲಿನ ಕೃಷಿ ಚಟುವಟಿಕೆ ಮೇಲೆ ಕೂಡ ಜನಾಂಗೀಯ ಹಿಂಸಾಚಾರ ಪರಿಣಾಮ ಬೀರಿದ್ದು, ರೈತರು ಕೃಷಿ ಕಡೆ ಮುಖ ಮಾಡಲು ಆಗದೇ ಪರದಾಡುತ್ತಿದ್ದಾರೆ.

ಮಣಿಪುರಕ್ಕೆ ಜೂನ್‌ ಮೊದಲ ವಾರದಲ್ಲಿಯೇ ಮುಂಗಾರು ಪ್ರವೇಶಿಸಿದೆ. ಆದರೆ, ಅಲ್ಲಿನ ರೈತರು ಇನ್ನು ಕೂಡ ಮುಂಗಾರು ಹಂಗಾಮಿನ ಬಿತ್ತನೆ ಶುರು ಮಾಡಿಲ್ಲ. ಪ್ರಮುಖ ಬೆಳೆಯಾದ ಭತ್ತ ಬೆಳೆಯಲು ಸಸಿಗಳನ್ನು ಕೂಡ ಹಾಕಿಲ್ಲ. ಇದಕ್ಕೆಲ್ಲಾ ಕಾರಣ ಮಣಿಪುರದಲ್ಲಿ ನಡೆಯುತ್ತಿರುವ ಗಲಭೆ. ಯಾವಾಗ ಬೇಕಾದರೂ ಗುಂಡಿನ ದಾಳಿ ಆಗುವ ಆತಂಕದಲ್ಲಿ ರೈತರು ಗದ್ದೆಗಳ ಕಡೆ ಮುಖ ಹಾಕುತ್ತಿಲ್ಲ. ಕುಕಿ ಸಮುದಾಯ ಪ್ರಾಬಲ್ಯವಿರುವ ಬೆಟ್ಟಗಳು ಹಾಗೂ ಮೈತೆ-ಬಹುಸಂಖ್ಯಾತ ಇಂಫಾಲ್ ಕಣಿವೆಯ ನಡುವೆ ಇರುವ ಮೋಟ್‌ಬಂಗ್‌ನಂತಹ ಮಣಿಪುರದ ಪ್ರದೇಶಗಳು ಈ ಜನಾಂಗೀಯ ಸಂಘರ್ಷದಿಂದ ಹೆಚ್ಚಿನ ನಷ್ಟ ಅನುಭವಿಸುತ್ತಿವೆ.

manipur-relentless-gunfire

ಇದರ ಬಗ್ಗೆ ಮಾತನಾಡಿರುವ ಕಾಂಗ್‌ಪೋಕ್ವಿ ಜಿಲ್ಲೆಯ ಮೋಟ್‌ಬಂಗ್‌ನ ಹೇಮಾಂಗ್‌ ಸಿಟ್ಲೌ ಎಂಬ ರೈತ, ನಾವು ನಮ್ಮ ಕೃಷಿ ಭೂಮಿಗೆ ಹೋಗಲು ಸಾಧ್ಯವಿಲ್ಲ. ಏಕೆಂದರೆ ಯಾವುದೇ ಸಮಯದಲ್ಲಿ ಗುಂಡಿನ ದಾಳಿ ನಡೆಯಬಹುದು ಎಂದು ತಮ್ಮ ಸಂಕಟವನ್ನು ಹೊರಹಾಕಿದ್ದಾರೆ. ಹೇಮಾಂಗ್‌ ಅವರು ಸ್ವಯಂ ಸೇವಕರಾಗಿದ್ದು, ಮೈತೆ ಸಮುದಾಯ ನಡೆಸುವ ದಾಳಿಯಿಂದ ತನ್ನ ಹಳ್ಳಿಯನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಇವರು ಕುಕಿ ಸಮುದಾಯಕ್ಕೆ ಸೇರಿದ್ದು, ಹಗಲು ರಾತ್ರಿ ತಮ್ಮ ಹಳ್ಳಿಯನ್ನು ಕಾಯುವುದೇ ಅವರ ಕೆಲಸವಾಗಿದೆ.

ಮೋಟ್‌ಬಂಗ್‌ನಂತಹ ಪ್ರದೇಶದಲ್ಲಿನ ಹೊಲ, ಗದ್ದೆಗಳು ಈಗ ಸೇನಾ ಪ್ರದೇಶಗಳಂತಾಗಿದ್ದು, ತಮ್ಮ ಗ್ರಾಮಗಳನ್ನು ಇನ್ನೊಂದು ಸಮುದಾಯದ ದಾಳಿಯಿಂದ ರಕ್ಷಿಸಿಕೊಳ್ಳಲು ಅಲ್ಲಿನ ಗ್ರಾಮಸ್ಥರು ಬಂಕರ್‌ಗಳು ಸೇರಿ, ತಾತ್ಕಾಲಿಕ ವಸತಿಗಳನ್ನು ಕೃಷಿ ಭೂಮಿಯಲ್ಲಿಯೇ ನಿರ್ಮಿಸಿಕೊಂಡಿದ್ದಾರೆ. ಇದರಿಂದಲೂ ಕೂಡ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ಕಾಂಗ್‌ಪೋಕ್ವಿ, ಪಶ್ಚಿಮ ಇಂಫಾಲ್, ಪೂರ್ವ ಇಂಫಾಲ್, ಕಾಕ್ಚಿಂಗ್, ಚುರಾಚಂದ್‌ಪುರ ಮತ್ತು ಬಿಷ್ಣುಪುರ್‌ನ ಗಲಭೆ ಪೀಡಿತ ಜಿಲ್ಲೆಗಳಲ್ಲಿ ವಾಸಿಸುವ ಸಾವಿರಾರು ರೈತರು ಸಂಘರ್ಷದಿಂದ ಶಿಕ್ಷೆ ಅನುಭವಿಸುತ್ತಿರುವುದು ಕಂಡುಬರುತ್ತಿದೆ.

40,000ಕ್ಕೂ ಹೆಚ್ಚು ಮೆಟ್ರಿಕ್‌ ಟನ್‌ ಅಕ್ಕಿ ಉತ್ಪಾದನೆ ಕುಂಠಿತ!

ಮಣಿಪುರದಲ್ಲಿನ ಸಂಘರ್ಷದಿಂದ ಎಲ್ಲ ಆರ್ಥಿಕ ಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡಿವೆ. ಗುಂಡಿನ ದಾಳಿಯ ಆತಂಕದಲ್ಲಿರುವ ರೈತರು ಗದ್ದೆಗಳಿಗೆ ಇಳಿಯದಿರುವುದರಿಂದ ಈಗಾಗಲೇ ಭತ್ತದ ಉತ್ಪಾದನೆ ಕೂಡ ಕುಂಠಿತವಾಗಿದೆ. ಇದು ಮಣಿಪುರದಂತಹ ಸಣ್ಣ ರಾಜ್ಯಕ್ಕೆ ದೊಡ್ಡ ನಷ್ಟವನ್ನು ಮಾಡುತ್ತದೆ ಎಂದು ಅಲ್ಲಿನ ಅಧಿಕಾರಿಗಳು ಹೇಳುತ್ತಾರೆ. ಮಣಿಪುರದಲ್ಲಿ ಈ ವರ್ಷ 40,000 ಮೆಟ್ರಿಕ್‌ ಟನ್‌ ಅಕ್ಕಿ ಉತ್ಪಾದನೆ ಕಡಿಮೆಯಾಬಹುದು ಎಂದು ಅಂದಾಜಿಸಲಾಗಿದೆ. 2022ರಲ್ಲಿ ಮಣಿಪುರವು 5,67,000 ಮೆಟ್ರಿಕ್ ಟನ್ ಅಕ್ಕಿಯನ್ನು ಉತ್ಪಾದಿಸಿತ್ತು.

ಇನ್ನು, ಮೋಟ್‌ಬಂಗ್‌ನ ಮತ್ತೊಬ್ಬ ರೈತ ಪ್ರಿಸ್ಸಿಲ್ಲಾ ಲೌವುಮ್ ಅವರು ಹೇಳುವಂತೆ ತಮ್ಮ ಪ್ರದೇಶದಲ್ಲಿ ಸುಮಾರು 700 ಕುಟುಂಬಗಳು ಕೃಷಿಯ ಮೇಲೆಯೇ ಅವಲಂಬಿತವಾಗಿವೆ. ಹೆಚ್ಚಿನವರು ಭತ್ತವನ್ನು ಬೆಳೆಯುತ್ತಿದ್ದರು. ಆದರೆ, ಈ ವರ್ಷ ಬಹಳಷ್ಟು ಭೂಮಿ ಖಾಲಿ ಬಿದ್ದಿದೆ. ಹಗಲಿನಲ್ಲಿಯೇ ಗುಂಡಿನ ದಾಳಿ ನಡೆಯುತ್ತಿರುವುದರಿಂದ ಉಳುಮೆ ಮಾಡಲು ಆಗುತ್ತಿಲ್ಲ. ಈ ಹಿನ್ನೆಲೆ ರಾಜ್ಯ ಸರ್ಕಾರ ಬೆಟ್ಟ-ಕಣಿವೆಯ ಗಡಿಯುದ್ದಕ್ಕೂ ಭದ್ರತಾ ಪಡೆಗಳನ್ನು ನಿಯೋಜಿಸಿದೆ. ಇದರಿಂದ ನಾವು ಕೃಷಿ ಚಟುವಟಿಕೆಗಳನ್ನು ಮುಂದುವರಿಸಬಹುದು. ಆದರೆ, ದೊಡ್ಡ ಪ್ರಮಾಣದಲ್ಲಿ ಕೃಷಿ ಮಾಡಲು ಆಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ

manipur-relentless-gunfire

ಮಣಿಪುರದಂತಹ ಸಣ್ಣ ರಾಜ್ಯಕ್ಕೆ ಇದು ದೊಡ್ಡ ನಷ್ಟ!

ಇನ್ನು, ಮಣಿಪುರ ಕೃಷಿ ಇಲಾಖೆಯ ಅಂಕಿಅಂಶಗಳ ಪ್ರಕಾರ, ರಾಜ್ಯದಾದ್ಯಂತ 149 ​​ಹಳ್ಳಿಗಳಲ್ಲಿ ಕನಿಷ್ಠ 5,127 ಹೆಕ್ಟೇರ್ ಕೃಷಿ ಭೂಮಿ ಖಾಲಿ ಇದೆ. ಇದರಿಂದ ಜೂನ್‌ವರೆಗೆ 15,437.23 ಮೆಟ್ರಿಕ್‌ ಟನ್‌ ಭತ್ತದ ಉತ್ಪಾದನೆ ಕುಂಠಿತಗೊಂಡಿದೆ. ಬಿಷ್ಣುಪುರ್ ಜಿಲ್ಲೆಯಲ್ಲಿ ಹೆಚ್ಚಿನ ನಷ್ಟವಾಗಿದ್ದು, 2,191 ಹೆಕ್ಟೇರ್ ಭೂಮಿ ಕೃಷಿ ಚಟುವಟಿಕೆ ಇಲ್ಲದೇ ಖಾಲಿ ಇದೆ. ಮಣಿಪುರದಂತಹ ಸಣ್ಣ ರಾಜ್ಯಕ್ಕೆ ಇದು ದೊಡ್ಡ ನಷ್ಟವಾಗಿದೆ ಎಂದು ರಾಜ್ಯದ ಕೃಷಿ ಇಲಾಖೆ ನಿರ್ದೇಶಕ ಎನ್ ಗೊಜೆಂದ್ರೋ ತಿಳಿಸಿದ್ದಾರೆ.

ಈಗಾಗಲೇ ರೈತರಿಗೆ ಬೀಜಗಳು ಮತ್ತು ರಸಗೊಬ್ಬರಗಳನ್ನು ಯಾವುದೇ ತೊಂದರೆ ಇಲ್ಲದೇ ಲಭ್ಯವಾಗಿರುವಂತೆ ನೋಡಿಕೊಳ್ಳಲು ಗೃಹ, ನೀರಾವರಿ ಮತ್ತು ಜಲಸಂಪನ್ಮೂಲ ಇಲಾಖೆಗಳನ್ನು ಒಳಗೊಂಡ ಮೇಲ್ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ. ಆದರೆ, ಭದ್ರತೆ ಇಲ್ಲದ ಕಾರಣ ಅಸಹಾಯಕರಾಗಿದ್ದು, ರೈತರಿಗೆ ಅನುಕೂಲ ಮಾಡಿಕೊಡಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ ಎಂದು ಅಲ್ಲಿನ ಅಧಿಕಾರಿಗಳು ಹೇಳುತ್ತಿದ್ದಾರೆ. ಅದಲ್ಲದೇ ಈ ಬಾರಿ ಮಣಿಪುರದಲ್ಲಿ ಶೇ.45ರಷ್ಟು ಕಡಿಮೆ ಮಳೆಯಾಗಿರುವುದು ಕೂಡ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+